ಉಡುಪಿಯಿಂದ ಕರಾಚಿಗೆ ಕರೆ ವದಂತಿ: ಎಸ್ಪಿ ಹೇಳಿದ್ದೇನು?
ಉಡುಪಿ, ಸೆಪ್ಟೆಂಬರ್ 18: ದಕ್ಷಿಣ ಕನ್ನಡದ ಗೋವಿಂದೂರು ಎಂಬಲ್ಲಿ ವ್ಯಕ್ತಿಯೊಬ್ಬರು ಪಾಕಿಸ್ಥಾನಕ್ಕೆ ಕರೆ ಮಾಡಿದ್ದರು ಎಂಬ ಸುದ್ದಿ ಎರಡು ತಿಂಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಅದೇ ರೀತಿ ಉಡುಪಿಯಲ್ಲೂ ಇದೇ ರೀತಿಯ ಸುದ್ದಿಯೊಂದು ಹರಿದಾಡಿತ್ತು.
ಉಡುಪಿಯ ಹೆಬ್ರಿಯಲ್ಲೂ ಇಂತಹದ್ದೇ ಸುದ್ದಿಯೊಂದು ಭಾರೀ ರೆಕ್ಕೆಪುಕ್ಕದೊಂದಿಗೆ ನಿನ್ನೆಯಿಂದ ಹಾರಾಡುತ್ತಲೇ ಇತ್ತು. ಇವತ್ತು ಖುದ್ದು ಉಡುಪಿ ಎಸ್ಪಿ ಅವರೇ ಈ ವದಂತಿಯನ್ನು ತಳ್ಳಿ ಹಾಕಿದ್ದು, ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.
ಆಗಿದ್ದು ಇಷ್ಟೇ , ಹೆಬ್ರಿ ತಾಲ್ಲೂಕಿನ ನಾಡ್ಪಾಲ್ ಲೊಕೇಶನ್ ನಿಂದ ಕರಾಚಿಗೆ ಫೋನ್ ಕರೆಯೊಂದು ಹೋಗಿದೆ ಎಂಬ ಸುದ್ದಿ ಅದು. ಮಾತ್ರವಲ್ಲ ,ಈ ಸಂಬಂಧ ಹೆಬ್ರಿಗೆ ಮತ್ತು ಕೊಲ್ಲೂರಿಗೆ ಎನ್ ಐ ಎ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎಂಬ ಸುದ್ದಿ.

ಈ ಸುದ್ದಿ ಇಡೀ ಜಿಲ್ಲೆಯಲ್ಲಿ ವದಂತಿಗಳಿಗೆ ಕಾರಣವಾಗಿದ್ದು ಮಾತ್ರವಲ್ಲ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲೂ ಇದು ಪ್ರಕಟಗೊಂಡಿತ್ತು. ಇದೇ ಹೊತ್ತಿಗೆ ಕೊಲ್ಲೂರು ಸಮೀಪ ನಕ್ಸಲ್ ಚಟುವಟಿಕೆಯ ಸುದ್ದಿ ಮತ್ತು ಭಯೋತ್ಪಾಧಕರ ಚಲನವಲನದ ವರದಿ ಒಂದಕ್ಕೊಂದು ಲಿಂಕ್ ಆಗಿ, ಜನರಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು.
ಇದಕ್ಕೆ ಅಂತಿಮವಾಗಿ ಸ್ಪಷ್ಟನೆ ನೀಡಿರುವ ಎಸ್ಪಿ ನಿಶಾ ಜೇಮ್ಸ್ ಎನ್ಐಎ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿಲ್ಲ, ಎಲ್ಲೂ ವಿಚಾರಣೆ ನಡೆಸಿಲ್ಲ. ನಕ್ಸಲ್ ಚಲನವಲನ ಕೂಡಾ ಜಿಲ್ಲೆಯಲ್ಲಿ ಇಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.












Click it and Unblock the Notifications