'ಪ್ಲಾಸ್ಟಿಕ್ ಮುಕ್ತ ಮದುವೆ'ಗೆ ಸಾಕ್ಷಿಯಾದ ಉಡುಪಿ
ಉಡುಪಿ, ಸೆಪ್ಟೆಂಬರ್ 4: ಹಸಿರು ಶಿಷ್ಟಾಚಾರ ಪಾಲಿಸಿದ ಅಪರೋಪದ ಮದುವೆ ಸಮಾರಂಭಕ್ಕೆ ಉಡುಪಿ ಸಾಕ್ಷಿಯಾಗಿದೆ. ಜಿಲ್ಲೆಯ ಉಚ್ಚಿಲದ ಶ್ರೀಮತಿ ತುಂಬೆ ಕರ್ಕೆರಾ ಸಭಾಭವನದಲ್ಲಿ ಭಾನುವಾರ ನಡೆದ ಸುಧಾಕರ ಮತ್ತು ಹರಿಣಾಕ್ಷಿ ಅವರ ವಿವಾಹ ಈ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದೆ.
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ನೇತೃತ್ವದಲ್ಲಿ, ಹಸಿರು ಶಿಷ್ಟಾಚಾರ ಪಾಲಿಸಿ ನಡೆದ ವಿವಾಹ ಕಾರ್ಯಕ್ರಮ ಈ ದಾಖಲೆಗೆ ಸಾಕ್ಷಿಯಾಯಿತು. ಈ ಮೂಲಕ ಈ ಮದುವೆ ಪ್ರತಿಯೊಬ್ಬರಿಗೂ ಮಾದರಿಯಾಯಿತು.
ಮದುವೆ ಸಮಾರಂಭದಲ್ಲಿ ಮಂಟಪಕ್ಕೆ ಬಟ್ಟೆಯಿಂದ ತಯಾರಿಸಿದ ಹೂ ಮತ್ತು ನೈಸರ್ಗಿಕ ಹೂ ಗಳನ್ನೇ ಬಳಸಲಾಗಿತ್ತು. ಜತೆಗೆ ನೀರು ಕುಡಿಯಲು ಸ್ಟೀಲ್ ಲೋಟಗಳು ಮತ್ತು ಊಟಕ್ಕೆ ಪಿಂಗಾಣಿ ಪ್ಲೇಟ್ ಗಳನ್ನು ಬಳಸಲಾಗಿತ್ತು.

'ಹಸಿರು ವಿವಾಹ'
ಸುಮಾರು 700 ಮಂದಿ ಭಾಗವಹಿಸಿದ್ದ ಈ ವಿವಾಹ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯಿಂದ ಊಟದ ವ್ಯವಸ್ಥೆಯವರೆಗೂ ಎಲ್ಲಿಯೂ ಪಾಸ್ಟಿಕ್ ಬಳಕೆ ಕಂಡುಬರಲಿಲ್ಲ. ಅಲ್ಲದೇ ಮದುವೆಯ ನಂತರ ಪರಿಸರಕ್ಕೆ ಹಾನಿಯಾಗುವ ಯಾವುದೇ ತ್ಯಾಜ್ಯ ಉತ್ಪತ್ತಿಯಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳು
ಈ ವಿವಾಹದಲ್ಲಿ ಪಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ಸೃಷ್ಠಿಸುವ ವಸ್ತುಗಳ ಬಳಕೆ ಮಾಡಿಲ್ಲ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಮದು ಮಕ್ಕಳಗಿಂತ ಮುಂಚಿತವಾಗಿ 2 ಮಂದಿ ಪಿಡಿಓಗಳು ಪರಿಶೀಲನೆಗೆ ಅಗಮಿಸಿದ್ದರು.
ಈ ಬಗ್ಗೆ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಖುದ್ದಾಗಿ ವಿವಾಹದ ಸಭಾ ಭವನಕ್ಕೆ ಆಗಮಿಸಿ ವಧೂ ವರರನ್ನು ಅಭಿನಂದಿಸಿದರು.

ಸ್ವಚ್ಛ ಉಡುಪಿ ಮಿಷನ್
ನಂತರ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, "ಸ್ವಚ್ಛ ಉಡುಪಿ ಮಿಷನ್ ಅಂಗವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಜಿಲ್ಲೆಯ ಎಲ್ಲಾ ಯುವಕ ಮಂಡಳಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವಂತೆ ಮಾಹಿತಿ ನೀಡಿದ್ದೆ. ಅದರಂತೆ ನವ ಚೇತನ ಯುವಕ ಮಂಡಲ ಮತ್ತು ನವ ಚೇತನ ಯುವತಿ ಮಂಡಲ ಕಟ್ಟೆಗುಡ್ಡೆ ಇದರ ಸಂಘದ ಸದಸ್ಯ ಸುಧಾಕರ ಅವರ ವಿವಾಹವನ್ನು ಪ್ಲಾಸ್ಟಿಕ್ ರಹಿತವಾಗಿ ಮಾಡಿ ಎಲ್ಲರಿಗೂ ಮಾದರಿಯಾಗುವುದಾಗಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದರು. ಅದರಂತೆ ಇಂದು ವಿವಾಹ ನಡೆದಿದೆ. ಇದು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು," ಎಂದು ಹೇಳಿದರು.

ಎಲ್ಲರಿಗೂ ಅಭಿನಂದನಾ ಪತ್ರ
ಜಿಲ್ಲೆಯಲ್ಲಿ ಹಸಿರು ಶಿಷ್ಟಾಚಾರ ಪಾಲಿಸಿ, ಪ್ಲಾಸ್ಟಿಕ್ ಬಳಕೆ ಮಾಡದೇ ವಿವಾಹವಾಗುವ ಎಲ್ಲಾ ದಂಪತಿಗಳಿಗೆ, ಅಂತಹ ಸಭಾ ಭವನಗಳ ಮುಖ್ಯಸ್ಥರಿಗೆ ಹಾಗೂ ಆಹಾರ ತಯಾರಿಕೆ ಮತ್ತು ಸರಬರಾಜು ಮಾಡುವವರಿಗೆ ಜಿಲ್ಲಾಡಳಿದ ವತಿಯಿಂದ ಅಭಿನಂದನಾ ಪತ್ರಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ವಿವಾಹ ಕಾರ್ಯಕ್ರಮಕ್ಕೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ, ಉಡುಪಿ ಅಂಬಾಗಿಲಿನ ಎಕ್ಸಲೆಂಟ್ ಕ್ಯಾಟರರ್ ನ ದೀಕ್ಷಿತ್ ಶೆಟ್ಟಿ ಅವರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ, "ಮುಂದೆಯೂ ಎಲ್ಲಾ ವಿವಾಹಗಳಲ್ಲಿ ಇದೇ ಮಾದರಿಯಲ್ಲಿ ಪ್ಲಾಸ್ಟಿಕ್ ಬಳಕೆ ರಹಿತವಾಗಿ, ಪರಿಸರಕ್ಕೆ ಪೂರಕವಾಗಿರುವ ವಸ್ತುಗಳನ್ನು ಬಳಸಿ ಆಹಾರ ಸರಬರಾಜು ಮಾಡಿ," ಎಂದು ತಿಳಿಸಿದರು.












Click it and Unblock the Notifications