Get Updates
Get notified of breaking news, exclusive insights, and must-see stories!

ಉಡುಪಿ ದೋಣಿ ದುರಂತದಲ್ಲಿ ಲೈಫ್ ಜಾಕೆಟ್ ಇಲ್ಲದೆ ಸಮುದ್ರಕ್ಕಿಳಿದ ಮೈಸೂರಿನ ಇಬ್ಬರು ಪ್ರವಾಸಿಗರು ನೀರುಪಾಲು

ಉಡುಪಿ: ವಾರಾಂತ್ಯದ ರಜೆ ಕಳೆಯಲು ಮತ್ತು ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಮೋಜು ಮಾಡಲು ಕರಾವಳಿಗೆ ಬಂದಿದ್ದ ಪ್ರವಾಸಿಗರ ತಂಡವೊಂದಕ್ಕೆ ವಿಧಿಯಾಟ ಬೇರೆಯೇ ಆಗಿತ್ತು. ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೋಡಿಬೆಂಗ್ರೆ ಬಳಿಯ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಮೈಸೂರು ಮೂಲದ ಇಬ್ಬರು ಯುವಕರು ಮೃತಪಟ್ಟಿದ್ದು, ಹಲವರು ಸಾವು-ಬದುಕಿನ ನಡುವೆ ಹೋರಾಡಿದ ಘಟನೆ ಸೋಮವಾರ (ಜ.26) ನಡೆದಿದೆ.

ಈ ದುರ್ಘಟನೆಯು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಡೆಲ್ಟಾ ಬೀಚ್ ಸಮೀಪ ಸಂಭವಿಸಿದ್ದು, ಮೃತರನ್ನು ಮೈಸೂರಿನ ಸರಸ್ವತಿಪುರಂ ನಿವಾಸಿಗಳಾದ ಶಂಕರಪ್ಪ (22) ಮತ್ತು ಸಿಂಧು (23) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮೈಸೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಗಳಾಗಿದ್ದರು.

Udupi Boat Tragedy

ನಡೆದಿದ್ದೇನು?

ಮೈಸೂರಿನ ಸರಸ್ವತಿಪುರಂನಿಂದ ಸುಮಾರು 28 ಜನರಿದ್ದ ಬಿಪಿಒ ಉದ್ಯೋಗಿಗಳ ತಂಡವೊಂದು ಪ್ರವಾಸಕ್ಕಾಗಿ ಉಡುಪಿಗೆ ಆಗಮಿಸಿತ್ತು. ಕಡಲತೀರದ ಸೌಂದರ್ಯ ಸವಿಯುವ ಆಸೆಯೊಂದಿಗೆ ಈ ತಂಡವು ಸ್ಥಳೀಯವಾಗಿ ಲಭ್ಯವಿದ್ದ ಎರಡು ಖಾಸಗಿ ಪ್ರವಾಸಿ ದೋಣಿಗಳನ್ನು ಬಾಡಿಗೆಗೆ ಪಡೆದಿತ್ತು. ಪ್ರತಿ ಬೋಟ್‌ನಲ್ಲಿ ತಲಾ 14 ಜನರಂತೆ ಹಂಚಿಕೊಂಡು ಸಮುದ್ರ ವಿಹಾರಕ್ಕೆ ತೆರಳಿದ್ದರು.

ಕೋಡಿಬೆಂಗ್ರೆ ಅಳಿವೆ ಬಾಗಿಲು ಅಂದರೆ ನದಿ ಮತ್ತು ಸಮುದ್ರ ಸೇರುವ ಜಾಗ. ಇಲ್ಲಿ ಅಲೆಗಳ ಅಬ್ಬರ ಸಹಜವಾಗಿಯೇ ಹೆಚ್ಚಿರುತ್ತದೆ. ಮಧ್ಯಾಹ್ನದ ಸುಮಾರಿಗೆ ಬೋಟ್ ಸಾಗುತ್ತಿದ್ದಾಗ, ಅನಿರೀಕ್ಷಿತವಾಗಿ ಬಂದ ಭಾರೀ ಗಾತ್ರದ ಅಲೆಯೊಂದು ಬೋಟ್‌ಗೆ ಅಪ್ಪಳಿಸಿದೆ. ಇದರ ರಭಸಕ್ಕೆ ಸಿಲುಕಿದ ಒಂದು ಬೋಟ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಬೋಟ್‌ನಲ್ಲಿದ್ದ 14 ಮಂದಿಯೂ ಸಮುದ್ರದ ಪಾಲಾಗಿದ್ದಾರೆ.

ಸ್ಥಳೀಯರ ಸಮಯಪ್ರಜ್ಞೆ

ಬೋಟ್ ಮಗುಚುತ್ತಿದ್ದಂತೆಯೇ ಪ್ರವಾಸಿಗರ ಚೀರಾಟ ಕೇಳಿದ ಸ್ಥಳೀಯ ಮೀನುಗಾರರು ಮತ್ತು ಈಜುಗಾರರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಜೀವದ ಹಂಗು ತೊರೆದು ನೀರಿಗಿಳಿದ ಸ್ಥಳೀಯರು ಮುಳುಗುತ್ತಿದ್ದವರನ್ನು ದಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಆದರೂ, ದುರದೃಷ್ಟವಶಾತ್ ಶಂಕರಪ್ಪ ಮತ್ತು ಸಿಂಧು ಮೃತಪಟ್ಟಿದ್ದಾರೆ.

ಇನ್ನುಳಿದಂತೆ ಧರ್ಮರಾಜ್ (26) ಮತ್ತು ದಿಶಾ (26) ಅವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಚೇತರಿಸಿಕೊಳ್ಳುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತಕ್ಕೆ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಸಮುದ್ರ ವಿಹಾರಕ್ಕೆ ತೆರಳುವಾಗ 'ಲೈಫ್ ಜಾಕೆಟ್' (Life Jacket) ಧರಿಸುವುದು ಕಡ್ಡಾಯ. ಬೋಟ್ ಸಿಬ್ಬಂದಿ ಲೈಫ್ ಜಾಕೆಟ್ ನೀಡಿದ್ದರೂ, ಕೆಲವು ಪ್ರವಾಸಿಗರು ಅದನ್ನು ಧರಿಸದೆ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ, ಬೋಟ್‌ನಲ್ಲಿ ಅಗತ್ಯವಿದ್ದಷ್ಟು ಲೈಫ್ ಜಾಕೆಟ್‌ಗಳೇ ಇರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಹಾನ್ ಮತ್ತು ಸೂಫಿಯಾನ ಎಂಬುವವರಿಗೆ ಸೇರಿದ ಬೋಟ್‌ಗಳನ್ನು ಈ ಪ್ರವಾಸಕ್ಕೆ ಬಳಸಲಾಗಿತ್ತು ಎಂದು ತಿಳಿದುಬಂದಿದೆ. ನಿರ್ಲಕ್ಷ್ಯ ಮತ್ತು ಸುರಕ್ಷತಾ ಲೋಪದ ಅಡಿಯಲ್ಲಿ ಬೋಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+