ಸಮಸ್ಯೆ ಬಂದರೆ ಓಡುತ್ತೀರಾ, ಹೋರಾಡುತ್ತೀರಾ? ನಿಮ್ಮ ಜನ್ಮ ರಾಶಿಯೇ ಹೇಳುತ್ತದೆ ಉತ್ತರ!
ಜೀವನದಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತವೆ. ಆದರೆ ಎಲ್ಲರೂ ಅವನ್ನು ಒಂದೇ ರೀತಿಯಲ್ಲಿ ಎದುರಿಸುವುದಿಲ್ಲ. ಕೆಲವರು ಧೈರ್ಯದಿಂದ ಹೋರಾಡಿದರೆ, ಕೆಲವರು ತಾಳ್ಮೆಯಿಂದ ಕಾಯುತ್ತಾರೆ. ಮತ್ತೆ ಕೆಲವರು ತಮ್ಮ ಬುದ್ಧಿವಂತಿಕೆ, ಸಂಬಂಧಗಳು ಅಥವಾ ಆಧ್ಯಾತ್ಮಿಕತೆಯ ನೆರವಿನಿಂದ ಸವಾಲುಗಳನ್ನು ದಾಟುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರಿಗೂ ಸಮಸ್ಯೆಗಳನ್ನು ಎದುರಿಸುವ ವಿಭಿನ್ನ ಸ್ವಭಾವವಿದೆ. ಈ ವರ್ಷ ನಿಮ್ಮ ರಾಶಿಯವರು ಕಷ್ಟಗಳನ್ನು ಹೇಗೆ ನಿಭಾಯಿಸುತ್ತಾರೆ ನೋಡೋಣ.

ಮೇಷ
ಮೇಷ ರಾಶಿಯವರು ಸಮಸ್ಯೆಯಿಂದ ಓಡಿಹೋಗುವವರಲ್ಲ. ಕಷ್ಟವನ್ನು ಯುದ್ಧವೆಂದು ಭಾವಿಸಿ ಗೆಲ್ಲುವವರು. ಕಷ್ಟ ಎದುರಾದರೆ ಅದನ್ನೇ ಸವಾಲಾಗಿ ಸ್ವೀಕರಿಸುತ್ತಾರೆ. ಈ ವರ್ಷವೂ ಯಾವುದೇ ಅಡೆತಡೆ ಬಂದರೂ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಅದನ್ನು ದಾಟುವ ಸಾಧ್ಯತೆ ಹೆಚ್ಚು. ಸೋಲು ಒಪ್ಪಿಕೊಳ್ಳುವುದು ಇವರ ಸ್ವಭಾವವಲ್ಲ.

ವೃಷಭ
ವೃಷಭ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತಾಳ್ಮೆಯೇ ಇವರ ದೊಡ್ಡ ಆಯುಧ. ಸಮಸ್ಯೆ ಬಂದಾಗ ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಬಳಿಕ ನಿಧಾನವಾಗಿ ಆದರೆ ಖಚಿತವಾಗಿ ಪರಿಹಾರ ಹುಡುಕುತ್ತಾರೆ. ಈ ಗುಣವೇ ದೊಡ್ಡ ಕಷ್ಟಗಳನ್ನೂ ಸುಲಭವಾಗಿಸುತ್ತದೆ.

ಮಿಥುನ
ಮಿಥುನ ರಾಶಿಯವರು ಯಾವುದೇ ಸಮಸ್ಯೆಯನ್ನು ಮಾತುಕತೆ ಮತ್ತು ಚಾಣಾಕ್ಷತನದಿಂದ ಪರಿಹರಿಸಲು ಪ್ರಯತ್ನಿಸುತ್ತಾರೆ. ಬುದ್ಧಿವಂತಿಕೆಯಿಂದ ದಾರಿ ಕಂಡುಕೊಳ್ಳುವವರು. ಹೊಸ ಆಲೋಚನೆಗಳು ಮತ್ತು ಸಂಪರ್ಕಗಳ ಮೂಲಕ ಸಂಕಷ್ಟದಿಂದ ಹೊರಬರುವ ಸಾಮರ್ಥ್ಯ ಇವರಲ್ಲಿರುತ್ತದೆ.

ಕಟಕ
ಕಟಕ ರಾಶಿಯವರು ಕಷ್ಟ ಬಂದಾಗ ಹೆಚ್ಚು ಭಾವನಾತ್ಮಕರಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಆತಂಕ ಸಮಸ್ಯೆಯನ್ನು ಇನ್ನಷ್ಟು ದೊಡ್ಡದಾಗಿ ತೋರಿಸಬಹುದು. ಈ ವರ್ಷ ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗುವುದು ಮುಖ್ಯ. ಭಾವನೆಗಳಿಂದ ಹೊರಬಂದು ಧೈರ್ಯ ಕಲಿಯಬೇಕು.

ಸಿಂಹ
ಸಿಂಹ ರಾಶಿಯವರು ಕಷ್ಟವನ್ನು ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಅವಕಾಶವೆಂದು ನೋಡುತ್ತಾರೆ. ಎಷ್ಟೇ ಒತ್ತಡ ಇದ್ದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಇತರರಿಗೂ ಧೈರ್ಯ ತುಂಬುವ ಗುಣ ಇವರಲ್ಲಿರುತ್ತದೆ. ಇವರು ನಾಯಕನಂತೆ ಮುನ್ನಡೆಯುವವರು.

ಕನ್ಯಾ
ಕನ್ಯಾ ರಾಶಿಯವರು ಭಾವನೆಗಿಂತ ಲೆಕ್ಕಾಚಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಸಮಸ್ಯೆಯನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಈ ವರ್ಷವೂ ಯೋಜಿತ ನಡೆ ಇವರನ್ನು ಸಂಕಷ್ಟದಿಂದ ಕಾಪಾಡುತ್ತದೆ. ಯೋಜನೆಯಿಂದ ಸಮಸ್ಯೆಗೆ ಉತ್ತರ ಕಂಡುಕೊಳ್ಳುತ್ತಾರೆ.

ತುಲಾ
ತುಲಾ ರಾಶಿಯವರು ಯಾವುದೇ ನಿರ್ಧಾರಕ್ಕೂ ಮುನ್ನ ಎರಡೂ ಬದಿಗಳನ್ನು ಪರಿಗಣಿಸುತ್ತಾರೆ. ಹೀಗಾಗಿ ಕೆಲವೊಮ್ಮೆ ವಿಳಂಬವಾದರೂ, ಅಂತಿಮವಾಗಿ ಸರಿಯಾದ ಪರಿಹಾರ ಸಿಗುತ್ತದೆ. ಸಂಬಂಧಗಳನ್ನು ಉಳಿಸಿಕೊಂಡೇ ಸಮಸ್ಯೆ ಬಗೆಹರಿಸುವುದು ಇವರ ವಿಶೇಷತೆ. ಸಮತೋಲನವೇ ಇವರ ಯಶಸ್ಸಿನ ರಹಸ್ಯ.

ವೃಶ್ಚಿಕ
ಈ ವರ್ಷ ಹೆಚ್ಚು ಸವಾಲುಗಳನ್ನು ಎದುರಿಸುವ ರಾಶಿಗಳಲ್ಲಿ ವೃಶ್ಚಿಕವೂ ಒಂದು. ಆದರೆ ಇವರ ವಿಶೇಷತೆ ಏನೆಂದರೆ ನೋವನ್ನು ಹೊರಗೆ ತೋರಿಸುವುದಿಲ್ಲ. ಒಳಗೊಳಗೇ ಹೋರಾಡಿ ಕೊನೆಗೆ ಬಲವಾಗಿ ಹೊರಬರುತ್ತಾರೆ. ಆತುರದ ನಿರ್ಧಾರಗಳನ್ನು ಮಾತ್ರ ತಪ್ಪಿಸಬೇಕು. ಇವರು ಮೌನವಾಗಿ ಹೋರಾಡುವ ಯೋಧರು.

ಧನು
ಧನು ರಾಶಿಯವರು ಆಶಾವಾದದಿಂದ ಸಂಕಷ್ಟ ಗೆಲ್ಲುವವರು. ಎಷ್ಟೇ ಕಷ್ಟ ಬಂದರೂ ನಾಳೆ ಒಳ್ಳೆಯ ದಿನ ಬರುತ್ತದೆ ಎಂಬ ನಂಬಿಕೆಯನ್ನು ಬಿಡುವುದಿಲ್ಲ. ಇದೇ ಸಕಾರಾತ್ಮಕ ಮನೋಭಾವ ಅವರಿಗೆ ಸಂಕಷ್ಟದಿಂದ ಬೇಗ ಹೊರಬರಲು ಸಹಾಯ ಮಾಡುತ್ತದೆ.

ಮಕರ
ಮಕರ ರಾಶಿಯವರು ಶ್ರಮದಿಂದ ವಿಧಿಯನ್ನೇ ಬದಲಿಸುವವರು. ಅದೃಷ್ಟಕ್ಕಿಂತ ಪರಿಶ್ರಮವನ್ನು ಹೆಚ್ಚು ನಂಬುತ್ತಾರೆ. ಕಷ್ಟ ಬಂದರೆ ದೂರು ಹೇಳುವುದಕ್ಕಿಂತ ಕೆಲಸಕ್ಕೆ ಇಳಿಯುತ್ತಾರೆ. ಈ ವರ್ಷದ ಸವಾಲುಗಳನ್ನೂ ತಮ್ಮ ಶಿಸ್ತು ಮತ್ತು ಪರಿಶ್ರಮದಿಂದ ಎದುರಿಸುವ ಸಾಧ್ಯತೆ ಹೆಚ್ಚು.

ಕುಂಭ
ಕುಂಭ ರಾಶಿಯವರು ಎಲ್ಲರೂ ಯೋಚಿಸದ ರೀತಿಯಲ್ಲಿ ಯೋಚಿಸುತ್ತಾರೆ. ಹೊಸ ಆಲೋಚನೆಗಳಿಂದ ಪರಿಹಾರ ಕಂಡುಕೊಳ್ಳುವವರು. ಸಮಸ್ಯೆಗೆ ವಿಭಿನ್ನ ಪರಿಹಾರ ಹುಡುಕುವ ಸಾಮರ್ಥ್ಯ ಇವರಲ್ಲಿರುತ್ತದೆ. ಉದ್ಯೋಗದಲ್ಲಿ ಒತ್ತಡ ಇದ್ದರೂ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಶಕ್ತಿ ಹೊಂದಿರುತ್ತಾರೆ.

ಮೀನ
ಮೀನ ರಾಶಿಯವರು ಆಧ್ಯಾತ್ಮಿಕತೆಯಲ್ಲಿ ನೆಮ್ಮದಿ ಹುಡುಕುವವರು. ಕಷ್ಟ ಬಂದಾಗ ದೇವರು, ಧ್ಯಾನ ಅಥವಾ ಆತ್ಮಚಿಂತನೆಯ ಕಡೆ ಹೆಚ್ಚು ಒಲವು ತೋರುತ್ತಾರೆ. ಕೆಲವೊಮ್ಮೆ ಭಾವನೆಗಳಿಗೆ ಹೆಚ್ಚು ಮಹತ್ವ ನೀಡುವುದರಿಂದ ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು. ಈ ವರ್ಷ ಪ್ರಾಯೋಗಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡರೆ ಉತ್ತಮ ಫಲ ಸಿಗುತ್ತದೆ.
ಕಷ್ಟವನ್ನು ನಾವು ಯಾವ ಮನಸ್ಥಿತಿಯಿಂದ ಎದುರಿಸುತ್ತೇವೆ ಎಂಬುದೂ ಮುಖ್ಯ. ಪ್ರತಿಯೊಂದು ರಾಶಿಗೂ ತನ್ನದೇ ಆದ ಶಕ್ತಿ ಇದೆ. ಯಾರಿಗಾದರೂ ಧೈರ್ಯ ಶಕ್ತಿ ಆಗಿದ್ದರೆ, ಮತ್ತೊಬ್ಬರಿಗೆ ತಾಳ್ಮೆ, ಬುದ್ಧಿವಂತಿಕೆ ಅಥವಾ ಆಧ್ಯಾತ್ಮಿಕತೆ ಶಕ್ತಿಯಾಗಿರುತ್ತದೆ. ಆ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಯಾವುದೇ ಸಂಕಷ್ಟವನ್ನೂ ಯಶಸ್ವಿಯಾಗಿ ದಾಟಬಹುದು.
(ಬರಹ: ಭವಾನಿ ಭಟ್)












Click it and Unblock the Notifications