ಉಡುಪಿಯ 2 ಸರಕಾರಿ ಶಾಲೆಗಳಿಗೆ ಸ್ವಚ್ಛ ಪ್ರಶಸ್ತಿ
ಉಡುಪಿ, ಆಗಸ್ಟ್ 22 : ಜಿಲ್ಲೆಯ ಗ್ರಾಮೀಣ ಭಾಗದ ಎರಡು ಸರಕಾರಿ ಪ್ರೌಢ ಶಾಲೆಗಳು ಸ್ವಚ್ಛ ವಿದ್ಯಾಲಯ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿವೆ.
ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಕೊಡಮಾಡುವ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದಲ್ಲಿ ಒಟ್ಟು ನೂರ ಎಪ್ಪತ್ತು ಶಾಲೆಗಳು ಆಯ್ಕೆಗೊಂಡಿದ್ದು, ಕರ್ನಾಟಕದಲ್ಲಿ ಎಂಟು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಶಾಲೆಯಲ್ಲಿ ಸೂಡ ಸರಕಾರಿ ಪ್ರೌಢ ಶಾಲೆ ಮತ್ತು ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ್ ಪ್ರೌಢ ಶಾಲೆ ಆಯ್ಕೆ ಮಾಡಲಾಗಿದೆ.
ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಡ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಾಗೂ ಶಾಲಾ ಪರಿಸರ ಸ್ವಚ್ಛತೆಯ ಬಗ್ಗೆ ನಿರಂತರ ಕಾರ್ಯಕ್ರಮ ಮಾರ್ಗದರ್ಶನವನ್ನು ಇಲ್ಲಿನ ಅಧ್ಯಾಪಕರ ತಂಡ ನೀಡುತ್ತಾ ಬಂದಿದ್ದಾರೆ.
ವಿದ್ಯಾರ್ಥಿಗಳಿಗೆ ಘನತಾಜ್ಯ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಶೌಚಾಲಯ ನಿರ್ವಹಣೆ ನಲ್ಲಿ ನೀರಿನ ಬಳಕೆ ಕೈತೊಳೆಯುವ ಬಗ್ಗೆ ಮಕ್ಕಳಿಗೆ ಶಾಲಾ ಅವಧಿಯಲ್ಲಿ ತರಬೇತಿ ನೀಡಲಾಗಿದೆ. ಇದರಿಂದ ಈ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ .
ಪ್ರಸ್ತುತ ಈ ಶಾಲೆಯಲ್ಲಿ 40 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅಧ್ಯಾಪಕರು ನಿರಂತರ ಪಠ್ಯದ ಜತೆಯಲ್ಲಿ ವೈಯಕ್ತಿಕ ಸ್ವಚ್ಛತೆ ಹಾಗೂ ಶಾಲೆ ಮನೆ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ .
ನಗರ ಭಾಗದಲ್ಲಿ ಕಾರ್ಕಳದ ಪೆರ್ವಾಜೆ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಪರಿಸರ ಸ್ನೇಹಿ ಶಾಲೆಯಾಗಿ ಬೆಳೆಯುತ್ತಿರುವ ಗ್ರಾಮೀಣ ಭಾಗದ ಈ ಶಾಲೆಗೆ ಸಂದ ಪ್ರಶಸ್ತಿ ಪ್ರಧಾನ ಸಮಾರಂಭ ಸೆಪ್ಟೆಂಬರ್ 01ರಂದು ದೆಹಲಿಯ ರಾಜಭವನದಲ್ಲಿ ನಡೆಯಲಿದೆ .
ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.