ಹಬ್ಬದ ದಿನ ಹೋಲ್ ಸೇಲ್ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ದೋಚಿದ ಕಳ್ಳರು
ಉಡುಪಿ, ಅಕ್ಟೋಬರ್ 9: ಹೋಲ್ಸೇಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಮಂಗಳವಾರ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಮೈತ್ರಿ ಕಾಂಪ್ಲೆಕ್ಸ್ನ ತಳಮಹಡಿಯಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಯ ಶಟರ್ ಮುರಿದು ಡ್ರಾವರ್ ನಲ್ಲಿದ್ದ 12 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಬ್ಯಾಂಕ್ ರಜೆ ಇದ್ದ ಕಾರಣ ನಗದನ್ನು ಅಂಗಡಿ ಮಾಲೀಕ ರವೀಂದ್ರ ನಾಯಕ್ ಅವರು ಅಂಗಡಿಯಲ್ಲೇ ಇಟ್ಟಿದ್ದರು. ವಿಷಯ ತಿಳಿದವರೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ನಗದು ಇಟ್ಟಿರುವ ಡ್ರಾವರನ್ನೇ ಮೀಟಿ ತೆಗೆದು ದೋಚಿರುವುದನ್ನು ನೋಡಿದರೆ ಇದು ತಿಳಿದವರೇ ನಡೆಸಿರುವ ಕೃತ್ಯವೆಂದು ಅನುಮಾನ ವ್ಯಕ್ತಗೊಂಡಿದೆ. ಕಳವಿಗಾಗಿ ಕಬ್ಬಿಣದ ಸರಳುಗಳನ್ನು ತಂದು, ಅಂಗಡಿಯ ಶಟರನ್ನು ಮುರಿದು ಒಳಹೋಗಿದ್ದಾರೆ. ಮಾತ್ರವಲ್ಲ, ಹಣವಿದ್ದ ಡ್ರಾವರನ್ನು ಮಾತ್ರ ಮೀಟಿ ತೆಗೆದು ಹಣದೊಂದಿಗೆ ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿ 2 ಸಿಸಿ ಕ್ಯಾಮರವಿದ್ದರೂ ಅದು ಕೆಟ್ಟು ಹೋಗಿತ್ತು. ಹತ್ತಿರದ ಕೃಷ್ಣಕೃಪಾ, ಕೆಎಸ್ ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಗಳ ಸಿಸಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೆಮ್ಸ್, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರೀಶಿಲನೆ ನಡೆಸುತ್ತಿದ್ದಾರೆ.












Click it and Unblock the Notifications