ಹೆಬ್ರಿ ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣಾದ ಬೆನ್ನಲ್ಲೇ ಪ್ರತಿಭಟನೆ
ಉಡುಪಿ, ಮಾರ್ಚ್ 05: ಪ್ರಾಧ್ಯಾಪಕರ ಮಾನಸಿಕ ಕಿರುಕುಳದಿಂದ ಉಡುಪಿಯ ಹೆಬ್ರಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಚರಣ್ ಶೆಟ್ಟಿ ನೇಣಿಗೆ ಶರಣಾದ ಬೆನ್ನಲ್ಲೇ ಇಂದು ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಪ್ರಾಧ್ಯಾಪಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬ್ರಹ್ಮಾವರ ಮಂದಾರ್ತಿಯ ಮೈರ್ಕೋಮೆ ನಿವಾಸಿ ಚರಣ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹೆಬ್ರಿ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಕಲಿಯುತ್ತಿದ್ದ ವಿದ್ಯಾರ್ಥಿ ಚರಣ್ ಶೆಟ್ಟಿಗೆ ಪ್ರಾಧ್ಯಾಪಕರು ಮಾನಸಿಕ ಕಿರುಕುಳ ನೀಡಿದ್ದರು ಎಂಬುದು ಸಹಪಾಠಿಗಳ ಆರೋಪವಾಗಿದೆ. ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ಚರಣ್ ಶೆಟ್ಟಿ "ಕಾಲೇಜು ಡೇ' ದಿನ ಮದ್ಯ ಸೇವಿಸಿ ಗಲಾಟೆ ಮಾಡಿದ್ದ.
ಶಿಕ್ಷಕರಿಂದ ಮಾನಸಿಕ ಕಿರುಕುಳ ಆರೋಪಿಸಿ ಉಡುಪಿ ವಿದ್ಯಾರ್ಥಿ ಆತ್ಮಹತ್ಯೆ
ಪೋಷಕರ ಸಭೆಯಲ್ಲೂ ಶಿಕ್ಷಕರು ಅವಮಾನ ಮಾಡಿದ್ದರು, ತರಗತಿಯಿಂದ ಹೊರ ನೂಕಿದ್ದರು. ಜೊತೆಗೆ ಸರ್ಕಾರ ನೀಡಿದ್ದ ಲ್ಯಾಪ್ಟಾಪ್ ನೀಡದೆ ಅವಮಾನ ಮಾಡಿದ್ದರು. ಶಿಕ್ಷಕರಿಂದ ನಿರಂತರ ಮಾನಸಿಕ ಕಿರುಕುಳ ಆಗುತ್ತಿದೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೀಗಾಗಿ ವಿದ್ಯಾರ್ಥಿಯನ್ನು ಪ್ರಾಧ್ಯಾಪಕರು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಸಹಪಾಠಿಗಳಿಗೆ ಕರೆ ಮಾಡಿದ್ದ ಚರಣ್, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿರುವ ವಿದ್ಯಾರ್ಥಿಗಳು ಇವತ್ತು ಕಾಲೇಜು ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಇಂದು ಕಾಲೇಜಿಗೆ ರಜೆ ನೀಡಲಾಗಿತ್ತು. ರಜೆಯ ಹೊರತಾಗಿಯೂ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಪ್ರಾಂಶುಪಾಲರು ಸೇರಿ ನಾಲ್ವರು ಶಿಕ್ಷಕರ ಮೇಲೆ ಕೇಸು ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ದಾಖಲಿಸಿದರು.