ಪ್ರಮೋದ್ ಮಧ್ವರಾಜ್ ಪರ ಪ್ರಚಾರಕ್ಕೆ ಸಿಎಂ ಎಂಟ್ರಿ, ಕುಂದಾಪುರದಲ್ಲಿ ಮತಯಾಚನೆ
ಉಡುಪಿ, ಏಪ್ರಿಲ್ 04:ಕರಾವಳಿಯಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರಕ್ಕೆ ಸಿಎಂ ಎಂಟ್ರಿ ಕೊಟ್ಟಿದ್ದಾರೆ.ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಮೋದ್ ಮಧ್ವರಾಜ್ ಅವರ ಪ್ರಚಾರಕ್ಕೆ ಮುಖ್ಯಮಂತ್ರಿ ಆಗಮಿಸಿ ಕುಂದಾಪುರದಲ್ಲಿ ಮತಯಾಚಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕುಂದಾಪುರದ ನೆಹರೂ ಮೈದಾನದಲ್ಲಿ ಮಹಿಳಾ ಮೀನುಗಾರರ ಸಮಾವೇಶವನ್ನು ಬುಧವಾರ ಸಂಜೆ (ಏಪ್ರಿಲ್ 03) ಏರ್ಪಡಿಸಲಾಗಿತ್ತು. ಕುಂದಾಪುರಕ್ಕೆ ಆಗಮಿಸಬೇಕಾಗಿದ್ದ ಸಿಎಂ ಕುಮಾರಸ್ವಾಮಿ ಬಹಳ ತಡವಾಗಿ ಸಮಾವೇಶಕ್ಕೆ ಆಗಮಿಸಿದರು.
ನಂತರ ಮಹಿಳಾ ಮೀನುಗಾರರಲ್ಲಿ ಕ್ಷಮೆಯಾಚಿಸಿ ಕುಮಾರ ಸ್ವಾಮಿ ಸಮಾವೇಶವನ್ನು ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಮುಗಿದ ಬಳಿಕ ಮೀನುಗಾರರ ಸಮಸ್ಯೆ ಕುರಿತು ಚರ್ಚೆ ನಡೆಸುತ್ತೇನೆ ಎಂದರು.

ರಾಜ್ಯ ಸರಕಾರ ಮೀನುಗಾರರ ಪರ ಇದೆ ಎಂದ ಮುಖ್ಯಮಂತ್ರಿಗಳು, ಮೀನುಗಾರರ ಬೇಡಿಕೆಗಳು ತುಂಬ ದೊಡ್ಡದೇನಲ್ಲ. ನಿತ್ಯ ಸಮುದ್ರದಲ್ಲಿ ದುಡಿಯುವ ಮೀನುಗಾರರ ಸಂಕಷ್ಟಗಳ ಅಂದಾಜು ನನಗಿದೆ. ಡಿಸೆಂಬರ್ ನಲ್ಲಿ ಮೀನುಗಾರರು ನಾಪತ್ತೆಯಾಗಿರುವ ಬಗ್ಗೆ ನನಗೆ ಅರಿವಿದೆ. ಅವರನ್ನು ಹುಡುಕುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿದೆ. ಅವರಿಗೆ ಮಧ್ಯಂತರ ಪರಿಹಾರವನ್ನೂ ಘೋಷಿಸಿದ್ದೇವೆ . ಆದರೆ ಅವರೆಲ್ಲಾ ಜೀವಂತ ಬರಬೇಕು ಎಂಬುದು ನಮ್ಮ ಆಸೆ ಎಂದು ಹೇಳಿದರು.
ಮಹಾರಾಷ್ಡ್ರ ಗಡಿಯಲ್ಲಿ ನಮ್ಮ ಮೀನುಗಾರರಿಗೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಮಹಾರಾಷ್ಟ್ರ ಸರಕಾರದ ಜೊತೆ ಸಮಾಲೋಚನೆಯನ್ನೂ ಮಾಡುತ್ತೇವೆ. ಮೀನುಗಾರ ಸಮುದಾಯದ ಸಮಸ್ಯೆ ದೊಡ್ಡ ಸಮಸ್ಯೆ ಏನಲ್ಲ. ಅವರ ಸಮಸ್ಯೆ ಬಗೆಹರಿಸಲು ಸರಕಾರ ಸದಾ ಸಿದ್ಧವಿದೆ. ಚುನಾವಣೆ ಬಳಿಕ ಅವರ ಮುಖಂಡರನ್ನು ಕರೆದು ಚರ್ಚಿಸುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.












Click it and Unblock the Notifications