ಗ್ರಹಣದ ಪ್ರಯುಕ್ತ ಕೃಷ್ಣಮಠದಲ್ಲಿ ವಿಶೇಷ ಪೂಜೆ
ಉಡುಪಿ, ಡಿಸೆಂಬರ್ 26: ಕಂಕಣ ಸೂರ್ಯಗ್ರಹಣದ ಪ್ರಯುಕ್ತ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೃಷ್ಣ ದೇವರ ದರ್ಶನ ಮಾಡಿದರು.
ಗ್ರಹಣ ಕಾಲದಲ್ಲಿ ಮಠಾಧೀಶರು ಪುಣ್ಯಸ್ನಾನ ಕೈಗೊಂಡರು. ಪರ್ಯಾಯ ಪಲಿಮಾರು ಸ್ವಾಮೀಜಿ ಹಾಗೂ ಉತ್ತರಾಧಿಮಠಾಧೀಶರ ನೇತೃತ್ವದಲ್ಲಿ ಸಾವಿರಾರು ಭಕ್ತರು ಮದ್ವ ಸರೋವರದಲ್ಲಿ ಮಿಂದೆದ್ದರು. ಸರೋವರದ ಸುತ್ತಲೂ ಕುಳಿತು ಜಪತಪ ಪಾರಾಯಣಗಳನ್ನು ಮಾಡಿದರು.
ಮಠದಲ್ಲಿ ಎಂದಿನಂತೆ ಬೆಳಗ್ಗೆ 4.30ಕ್ಕೆ ಕೃಷ್ಣನಿಗೆ ನೈರ್ಮಲ್ಯ ಪೂಜೆ ನೆರವೇರಿಸಲಾಗಿತ್ತು. ಎಲ್ಲಾ ಅಲಂಕಾರ ತೆಗೆದ ಬಳಿಕ ಭಕ್ತರಿಗೆ ಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಗ್ರಹಣ ಮೋಕ್ಷದ ಬಳಿಕ ದೇವರಿಗೆ ಮಹಾ ಪೂಜೆ ನಡೆಸಿ ಭಕ್ತರಿಗೆ ಅನ್ನ ಪ್ರಸಾದ ಬಡಿಸಲಾಯಿತು. ಗ್ರಹಣ ಕಾಲದಲ್ಲಿ ಮಠದೊಳಗೆ ಪೂಜೆ, ಹೋಮಾದಿಗಳು ನಡೆದವು. ಗ್ರಹಣದ ವೇಳೆಯಲ್ಲೇ ಆಗಸದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡು ನೋಡುಗರ ಗಮನಸೆಳೆದಿದ್ದು ವಿಶೇಷವಾಗಿತ್ತು.
Comments
English summary
Special rituals were held at the Krishna Math in Udupi on behalf of Solar Eclipse. From early morning, thousands of devotees took the Darshan of Lord Krishna,