ಉಡುಪಿ: ಬಾಯಲ್ಲಿ ನೀರೂರುವಂತೆ ಮಾಡಿದ ಆಷಾಢ ಆಹಾರ ಖಾದ್ಯಗಳು
ಉಡುಪಿ, ಆಗಸ್ಟ್.02: ಕರಾವಳಿಯಲ್ಲಿ ಆಷಾಢವೆಂದರೆ ರಣ ಮಳೆ ಬೀಸುವ ಕಾಲ. ಅದರಲ್ಲೂ ಹಿಂದೆ ಜನರಿಗೆ ಮಳೆಗಾಲದಲ್ಲಿ ಯಾವುದೇ ತರಕಾರಿಗಳು ಸಿಗುತ್ತಿರಲಿಲ್ಲ. ಹಾಗಾಗಿ ಗೆಡ್ಡೆ- ಗೆಣಸು, ಸೊಪ್ಪುಗಳಿಂದಲೇ ಆಹಾರ ತಯಾರಿಸಿ ಸೇವಿಸೋದು ಪದ್ಧತಿಯಾಗಿತ್ತು.
ಆಷಾಢ ಬಂತೆಂದರೆ ಊಟದ ಮೆನು ಬೇರೇನೇ ಇರುತ್ತಿತ್ತು. ಈಗೆಲ್ಲಾ ಆಷಾಡದ ಊಟ ಎಲ್ಲಿ ಸಿಗುತ್ತೆ ಹೇಳಿ ಅಂತೀರಾ? ಆ ಕಾಲದ ತಿಂಡಿ ರುಚಿಯನ್ನು ಸವಿಯುವ ಉದ್ದೇಶದಿಂದಲೇ ಉಡುಪಿಯಲ್ಲೊಂದು ಕಾರ್ಯಕ್ರಮ ನಡೆಯಿತು.
ಹೌದು, ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನಲ್ಲಿ ಸಮಾನ ಮನಸ್ಕರು ಸೇರಿ ಆಷಾಢದ ವಿಶೇಷ ಊಟ ಸಿದ್ಧಪಡಿಸಿದ್ದರು. ಇಲ್ಲಿ ಗತಕಾಲದ ಆಹಾರವನ್ನು ಆಸ್ವಾದಿಸಲಾಯಿತು. ಈ ಆಷಾಡದೂಟದಲ್ಲಿ ಏನೆಲ್ಲಾ ಖಾದ್ಯಗಳಿದ್ದವು ಗೊತ್ತಾ?

ಮಳೆಗಾದಲ್ಲಿ ರೋಗರುಜಿನಗಳು ಬಾಧಿಸೋದು ಜಾಸ್ತಿ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ದೇಹದ ಉಷ್ಣತೆಯನ್ನು ಕಾಪಾಡಲು ಅನುಕೂಲವಾಗುವಂತಹ ಆಹಾರ ಪದ್ಧತಿ ರೂಢಿಯಲ್ಲಿತ್ತು.

ಹಾಗಾಗಿ ಕಾರ್ಯಕ್ರಮದಲ್ಲಿಯೂ ಜ್ಞಾಪಕ ಶಕ್ತಿ ಹೆಚ್ಚಿಸುವ ತಿಮರೆ ಚಣ್ನಿ, ಜೀರ್ಣಕ್ಕೆ ಅನುಕೂಲ ಮಾಡುವ ಬೇಯಿಸಿದ ಮಾವಿನ ಗೊಜ್ಜು, ಸಿಹಿಮೂತ್ರ ಬಿಪಿ ನಿಯಂತ್ರಣಕ್ಕೆ ಕಂಚಾಲ, ಲೋ ಬಿಪಿಯವರಿಗೆ ಉಪ್ಪಡ ಪಚ್ಚಿಲ್, ಕಬ್ಬಿಣಾಂಶದ ತೊಜಂಕು, ತೇವು ತೇಟ್ಲ, ಘಮಘಮಿಸುವ ಹಲಸಿನ ಮುಳ್ಕ, ಅರಸಿನ ಘಟ್ಟಿ ಹೀಗೆ ಹತ್ತಾರು ಬಗೆಯ ಆಹಾರವನ್ನು ತಯಾರಿಸಲಾಗಿತ್ತು.

ನಮ್ಮ ಪೂರ್ವಿಕರ ಆಹಾರ ಕ್ರಮ, ರುಚಿ ಮರೆತು ಹೋಗುತ್ತಿರುವ ಇಂದಿನ ದಿನಗಳಲ್ಲಿ ಹಿರಿಯರು ತಯಾರಿಸುತ್ತಿದ್ದ ವಿಶಿಷ್ಟ ಆಹಾರ ರುಚಿಯನ್ನು ಮತ್ತೆ ನೆನಪಿಸುವ ಕಾರ್ಯಕ್ರಮ ಆಯೋಜಿಸಿದ್ದು ಅರ್ಥಪೂರ್ಣವಾಗಿತ್ತು.












Click it and Unblock the Notifications