ಬೆಂಗಳೂರಿನಿಂದ ಕೋಟೇಶ್ವರಕ್ಕೆ ಹೊರಟಿದ್ದ ಯುವಕ ಬಸ್ ನಲ್ಲೇ ಸಾವು
ಉಡುಪಿ, ಜೂನ್ 16: ಬೆಂಗಳೂರಿನಿಂದ ಕೋಟೇಶ್ವರದಲ್ಲಿನ ಮನೆಗೆ ಹೊರಟಿದ್ದ ಯುವಕ ಹೃದಯಾಘಾತದಿಂದ ಬಸ್ನಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಕುಂದಾಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಕೋಟೇಶ್ವರ ಕುಂಬ್ರಿಯ ವಿಷ್ಣುಮೂರ್ತಿ ಅವರ ಮಗ ಚೈತನ್ಯ (25) ಸಾವನ್ನಪ್ಪಿದ ದುರ್ದೈವಿ.
Recommended Video
ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಚೈತನ್ಯ ಜೂ.15ರ ಸೋಮವಾರ ರಾತ್ರಿ 9 ಗಂಟೆಗೆ ಊರಿಗೆ ಬರಲು ದುರ್ಗಾಂಬಾ ಬಸ್ಸಿನಲ್ಲಿ ಹೊರಟಿದ್ದರು. ತಂದೆ ವಿಷ್ಣುಮೂರ್ತಿಯವರಿಗೆ ಇಂದು ಬೆಳಿಗ್ಗೆ ಸುಮಾರು 6.30ಕ್ಕೆ ಫೋನ್ ಮಾಡಿ ತಾನು ಬಾರ್ಕೂರಿನಲ್ಲಿ ಇರುವುದಾಗಿ ತಿಳಿಸಿದ್ದರು.
ಕೋಟೇಶ್ವರ ಬಂದರೂ ಚೈತನ್ಯ ಇಳಿಯದ್ದನ್ನು ಕಂಡು ನಿರ್ವಾಹಕ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಎಷ್ಟು ಎಬ್ಬಿಸಿದರೂ ಚೈತನ್ಯ ಎದ್ದಿಲ್ಲ. ನಂತರ ಅಸ್ವಸ್ಥರಾಗಿದ್ದಾರೆ ಎಂದು ಕುಂದಾಪುರದ ವಿನಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಷ್ಣುಮೂರ್ತಿ ಅವರೂ ಮಗ ಬರದಿದ್ದನ್ನು ಗಮನಿಸಿ ಬೆಳಿಗ್ಗೆ 7.30 ಗಂಟೆಗೆ ಕರೆ ಮಾಡಿದಾಗ ನಿರ್ವಾಹಕ ವಿಷಯ ತಿಳಿಸಿದ್ದಾರೆ. ಘಟನೆ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇದೇ ಮಾರ್ಚ್ ನಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಯಾಣದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟಿದ್ದ ಸಂಗತಿ ನಡೆದಿತ್ತು.












Click it and Unblock the Notifications