ಉಡುಪಿಯಲ್ಲಿ ಶ್ರೀವಿಶ್ವಮಾನ್ಯ ಮಂದಿರ ಅತಿಥಿಗೃಹ ಅನಾವರಣ
ಉಡುಪಿ, ಫೆಬ್ರವರಿ. 01 : ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಪ್ರಯುಕ್ತ ನಿರ್ಮಿಸಲಾದ ಶ್ರೀವಿಶ್ವಮಾನ್ಯ ಮಂದಿರ ಅತಿಥಿಗೃಹವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬುಧವಾರ ಬೆಳಗ್ಗೆ ಉದ್ಘಾಟಿಸಿದರು.
ಬಳಿಕ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ನಾವು ನಮ್ಮ ವೌಲ್ಯಗಳತ್ತ ಮರಳುವ ಮೂಲಕ ಭಾರತೀಕರಣದತ್ತ ಒಲವು ತೋರಿಸುತ್ತಿದ್ದೇವೆ.[ಉಡುಪಿ ಶ್ರೀಕೃಷ್ಣ ದೇವಾಲಯ ನವೀಕರಣಕ್ಕೆ ಜಿಲ್ಲಾಡಳಿತ ತಡೆ]
ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸುವ ಬದಲು ಹಿಂದೂ ಸಂಸ್ಕೃತಿಯನ್ನು ಕಲಿಸುವ ಶಾಲೆಗಳಿಗೆ ಸೇರಿಸುತ್ತಿದ್ದೇವೆ. ಶಾಸ್ತ್ರೀಯ ಸಂಗೀತ, ಕಲೆಗಳತ್ತ ಹೆಚ್ಚಿನ ಆಸಕ್ತಿ ತೋರಿಸಲಾಗುತ್ತಿದೆ. ಹಾಗೂ ಸಂಸ್ಕೃತಿ, ಉಡುಗೆ-ತೊಡುಗೆಗಳಲ್ಲಿ ನಾವು ಇಂದು ಬದಲಾವಣೆ ಕಾಣುತ್ತಿದ್ದೇವೆ ಎಂದರು.
ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಶ್ರೀಗುರುಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ರತ್ನಕುಮಾರ್ ಸ್ವಾಗತಿಸಿದರು. ನಾಗರಾಜ್ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.