ಉಡುಪಿ ಕೃಷ್ಣ ಮಠದ ಗರ್ಭಗುಡಿಯ ಚಾವಣಿಗೆ 100 ಕೆಜಿ ಚಿನ್ನದ ಹೊದಿಕೆ
ಉಡುಪಿ, ಆಗಸ್ಟ್ 11: ಚಿನ್ನ ವಜ್ರ ಕವಚ ಕಿರೀಟಧಾರಿ ಶ್ರೀಕೃಷ್ಣನ ಗರ್ಭಗುಡಿ ಚಾವಣಿಗೆ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬಂಗಾರ ಹೊದಿಸಲು ಸಂಕಲ್ಪ ಕೈಗೊಂಡಿದ್ದಾರೆ.
ತಮ್ಮ ಮೊದಲ ಪರ್ಯಾಯದಲ್ಲಿ (2002 - 04) ಶಾಲಾ ಮಕ್ಕಳಿಗೆ ಮಧ್ಯಾಹ್ನ ಶ್ರೀಕೃಷ್ಣ ಪ್ರಸಾದ ಯೋಜನೆ ಆರಂಭಿಸಿ ದೇಶಕ್ಕೆ ಮಾದರಿ ಹಾಕಿಕೊಟ್ಟ ಪಲಿಮಾರು ಶ್ರೀಪಾದರು ಬಳಿಕ ಶ್ರೀಕೃಷ್ಣನಿಗೆ ವಜ್ರ ಕವಚ ಸಮರ್ಪಿಸಿದ್ದರು.
2018ರ ಜು.18ರಂದು 2ನೇ ಬಾರಿ ಪರ್ಯಾಯ ಪೀಠವನ್ನೇರಲಿರುವ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಕೃಷ್ಣ ದೇವರ ಗರ್ಭಗುಡಿಯ ಗೋಪುರಕ್ಕೆ 100 ಕೆಜಿ ಬಂಗಾರ ಹೊದಿಸುವ ಯೋಜನೆ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಶ್ರೀಕೃಷ್ಣ ಸುವರ್ಣ ಗೋಪುರ ಸಮಿತಿ ರಚನೆಯಾಗಿದೆ.
30 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ದಾನಿಗಳು, ಸಾರ್ವಜನಿಕರ ನೆರವು ಯಾಚಿಸಿದ್ದು 2020ರ ಜು.17 ರಂದು ಪರ್ಯಾಯದ ಆರು ತಿಂಗಳೊಳಗೆ ಗರ್ಭಗುಡಿ ಛಾವಣಿಗೆ ಚಿನ್ನ ಹೊದಿಸುವ ಸಂಕಲ್ಪ ಹೊಂದಿದ್ದಾರೆ.
ಶ್ರೀಕೃಷ್ಣ ಮಠದ ಗರ್ಭಗುಡಿ 2 ಮಹಡಿ ಹೊಂದಿದ್ದು 2500 ಚದರಡಿ ವಿಸ್ತಾರಕ್ಕೆ ಚಿನ್ನ ಹೊದಿಸಲು, ತಿರುಪತಿ ಶ್ರೀ ವೆಂಕಟೇಶ್ವರ ದೇವಳದ ಸ್ವರ್ಣಮಯ ಆನಂದ ಗೋಪುರ, ಗುರುವಾಯೂರು, ತಿರುವನಂತಪುರ ಕ್ಷೇತ್ರದಿಂದಲೂ ಪಲಿಮಾರು ಶ್ರೀಪಾದರು ಪ್ರೇರಣೆ ಪಡೆದಿದ್ದಾರೆ.
2002ರಲ್ಲಿ ಮೊದಲ ಬಾರಿಗೆ ಪರ್ಯಾಯ ಪೀಠ ಏರಿದ ಪಲಿಮಾರು ಶ್ರೀ ವಿದ್ಯಾಧೀಶ ಶ್ರೀಪಾದರು 80ಕ್ಕೂ ಅಧಿಕ ಅನುದಾನಿತ ವಿಶೇಷ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ಗಂಜಿ, ಚಟ್ನಿ ಒದಗಿಸಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದರು.
ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ರೂಪಿಸಿದ ಯೋಜನೆ ಕೇಂದ್ರ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜಾರಿಗೆ ಪ್ರೇರಣೆಯಾಗಿತ್ತು. ಇದೀಗ ಛಾವಣಿಗೆ ಚಿನ್ನದ ಹೊದಿಕೆಗೆ ಮುಂದಾಗಿದ್ದಾರೆ.
"ಶ್ರೀಕೃಷ್ಣ ಗರ್ಭಗುಡಿ ಛಾವಣಿಯ ಚಿನ್ನದ ಹೊದಿಕೆಗೆ ಒಂದು ಚದರಡಿಗೆ ನಲವತ್ತು ಗ್ರಾಂ ಚಿನ್ನ ಬಳಕೆಯಾಗಲಿದೆ. ತಿರುಪತಿ, ಗುರುವಾಯೂರು, ತಿರುವನಂತಪುರ ಕ್ಷೇತ್ರಗಳ ದ್ವಾರದಂತೆ ಉಡುಪಿಯ ದ್ವಾರವೂ ವೈಭವದಿಂದಿರಬೇಕು. ಉಡುಪಿಯಲ್ಲಿ ತುಳಸಿ ವನ ನಿರ್ಮಾಣದ ಜತೆಗೆ ನಿತ್ಯ ಲಕ್ಷ ತಿಳಿಸಿ ಅರ್ಚನೆ ನನ್ನ ಪರ್ಯಾಯ ಸಂಕಲ್ಪವಾಗಿದೆ," ಎಂದು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.