ಭತ್ತದ ಗದ್ದೆಗಿಳಿದು ಕಳೆ ತೆಗೆದ ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ, ಆಗಸ್ಟ್ 19; ಭತ್ತದ ಕೃಷಿ ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಕರಾವಳಿಯಲ್ಲಿ ಮಾತ್ರ ಭತ್ತ ನಳನಳಿಸುತ್ತಿದೆ. ಹಲವು ವರ್ಷಗಳಿಂದ ಹಡಿಲು ಬಿದ್ದಿದ್ದ ಉಡುಪಿಯ ಕೃಷಿ ಭೂಮಿಯಲ್ಲಿ ಈಗ ಸಮೃದ್ಧವಾಗಿ ಪೈರು ಕಂಗೊಳಿಸುತ್ತಿದೆ.
ಭತ್ತದ ಪೈರುಗಳು ಕಂಗೊಳಿಸುತ್ತಿದೆ. ಶ್ರಮಕ್ಕೆ ಪ್ರತಿಫಲ ದೊರೆತಿದೆ. ನೂರಾರು ಜನರ ಒಟ್ಟುಗೂಡುವಿಕೆಯಿಂದ ಭತ್ತದ ಬೇಸಾಯ ಮತ್ತೆ ಆರಂಭವಾಗಿದೆ. ಕೃಷಿ ಭೂಮಿ ಹಚ್ಚ ಹಸಿರಿನಿಂದ ತುಂಬಿ ತುಳುಕುತ್ತಿದೆ.
ಆದರೆ ಭತ್ತದ ಫೈರಿನ ನಡುವೆ ಈಗ ಕಳೆ ಗಿಡಗಳು ಎದ್ದು ಬರುತ್ತಿದ್ದು, ಕಳೆಗಳನ್ನು ತೆಗೆಯೋದೇ ತ್ರಾಸದಾಯಕವಾಗಿದೆ. ಹೀಗಾಗಿ ಕೇಂದ್ರ ಕೃಷಿ ಸಚಿವರೇ ಭತ್ತದ ನಡುವಿನ ಕಳೆ ತೆಗೆಯೋಕೆ ಈಗ ಮುಂದಾಗಿದ್ದಾರೆ. ಕೇಂದ್ರ ಸಚಿವರಿಗೆ ವಿದ್ಯಾರ್ಥಿಗಳು, ಯುವಕರು ಸಾಥ್ ನೀಡಿದ್ದು, ಭತ್ತ ಸಮೃದ್ಧವಾಗಿ ಬೆಳೆಯೋಕೆ ಅನುವು ಮಾಡಿ ಕೊಟ್ಟಿದ್ದಾರೆ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಭತ್ತದ ಬೆಳೆ, ಸೊಂಪಾಗಿ ಬೆಳದ ಪೈರಿನ ಮಧ್ಯೆ ಇರೋ ಕಳೆ. ಗದ್ದೆಗಿಳಿದು ಭತ್ತದ ನಡುವಿನಲ್ಲಿರುವ ಕಳೆಗಳನ್ನು ತೆಗೆದ ಕೇಂದ್ರ ಕೃಷಿ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ.
ಇಂತಹ ಸುಂದರ ದೃಶ್ಯ ಕಂಡುಬಂದಿದ್ದು ಉಡುಪಿ ಜಿಲ್ಲೆಯಲ್ಲಿ. ಉಡುಪಿಯಲ್ಲಿ ನಡೆಯುತ್ತಿರುವ ಹಡೀಲು ಬಿದ್ದ ಕೃಷಿದ ಬೇಸಾಯ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡರು. ಭತ್ತದ ಗದ್ದೆಗೆ ಇಳಿದು ಕಳೆ ತೆಗೆಯುವ ಕೆಲಸಕ್ಕೆ ಚಾಲನೆ ನೀಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಡೀಲು ಬಿದ್ದಿದ್ದ 1,500 ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೇದಾರೋತ್ಥಾನ ಎನ್ನುವ ವಿಶೇಷ ಕಾರ್ಯಕ್ರಮ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿದೆ. ಸದ್ಯ ಭತ್ತದ ನಾಟಿ ಕಾರ್ಯ ಮುಗಿದು ಭತ್ತದ ಪೈರು ಸಮೃದ್ಧವಾಗಿ ಬೆಳೆದಿದೆ.

ಆದರೆ ಪೈರಿನ ನಡುವೆ ಇರೋ ಕಳೆ ಗಿಡಗಳು ಪೈರಿನ ಬೆಳವಣಿಗೆ ಅಡ್ಡಿ ಪಡಿಸುತ್ತಿದೆ. ಹೀಗಾಗಿ ಕಳೆ ಕೀಳುವ ಕಾರ್ಯಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದ್ದಾರೆ. ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸಹ ಸಚಿವರ ಜೊತೆ ಕೈಜೋಡಿಸಿದರು.
ಇದೇ ಗದ್ದೆಯಲ್ಲಿ ಹಿಂದೆ ಕೃಷಿ ಸಚಿವ ಬಿ.ಸಿ ಪಾಟೀಲ್ ನಾಟಿ ಮಾಡಿದ್ದು, ಈಗ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕಳೆ ತೆಗೆದಿರೋದು ಮಾತ್ರ ವಿಶೇಷ ವಾಗಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿ, ಕೇಂದ್ರ ಕೃಷಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉಡುಪಿ ಜಿಲ್ಲೆಗೆ ಶೋಭಾ ಕರಂದ್ಲಾಜೆ 2ನೇ ಬಾರಿಗೆ ಭೇಟಿ ನೀಡಿದ್ದಾರೆ. ಈ ಬಾರಿ ಗದ್ದೆಗಿಳಿದು ಸಂಭ್ರಮಿಸಿದ್ದಾರೆ. ಭತ್ತದ ಪೈರಿನ ಮಧ್ಯೆ ಇರೋ ಕಳೆ ಕೀಳುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು, ಸಚಿವರೊಂದಿಗೆ ಸಂವಾದ ನಡೆಸಿದ್ದಾರೆ.
ಕೃಷಿಯಲ್ಲಿ ಖುಷಿ ಇದೆ, ಕೈ ಕೆಸರಾದ್ರೆ ಬಾಯಿ ಮೊಸರು ಅಂತ ಹೇಳಿ ರೈತನ ಕಷ್ಟವನ್ನು ಕೃಷಿ ಸಚಿವೆ ಸ್ವತಃ ಗದ್ದೆಗಿಳಿದು ಅರಿತುಕೊಂಡಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆಗೆ ಉಡುಪಿ ಶಾಸಕ ರಘಪತಿ ಭಟ್ ಸೇರಿದಂತೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಉಡುಪಿ ಜೊತೆಗಿನ ತನ್ನ ಅನ್ಯೋನ್ಯತೆಯನ್ನು ವಿವರಿಸಿದ್ದಾರೆ. ಅಲ್ಲದೇ ತಾನು ಚಿಕ್ಕವಿರುವಾಗ ಮಾಡಿದ ಕೆಲಸ, ಗದ್ದೆಗಳ ಬದಿಯಲ್ಲಿ ಮಾಡಿದ ತುಂಟಾಟ ಎಲ್ಲವನ್ನೂ ಮೆಲುಕು ಹಾಕಿಕೊಂಡಿದ್ದಾರೆ.
ಅಲ್ಲದೇ ಕರಾವಳಿ ಕುಚ್ಚುಲಕ್ಕಿಗೆ ಮಾನ್ಯತೆ ನೀಡುವ ಬಗ್ಗೆಯೂ ಕರಂದ್ಲಾಜೆ ಕೇಂದ್ರದ ಗಮನ ಸೆಳೆಯೋದಾಗಿ ಹೇಳಿದ್ದಾರೆ. ಭತ್ತದ ಬೆಳೆಗೆ ಪ್ರೋತ್ಸಾಹ, ಬೆಂಬಲ ಬೆಲೆ ನೀಡುವ ಬಗ್ಗೆಯೂ ಸರ್ಕಾರದ ಜೊತೆ ಪ್ರಸ್ತಾಪ ಮಾಡೋದಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅದೇನೇ ಆಗಲಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭತ್ತದ ಕ್ರಾಂತಿಗೆ ಜನರ ಬೆಂಬಲ ವ್ಯಕ್ತವಾಗಿದೆ. ಸಮೃದ್ಧವಾಗಿ ಬೆಳೆದ ಭತ್ತದ ಬೆಳೆಗೆ, ಕಳೆಯ ಗಿಡಗಳ ಕಾಟ ಶುರುವಾಗಿದೆ. ಊರವರು, ವಿದ್ಯಾರ್ಥಿಗಳು ಕಳೆ ತೆಗಿತೀವಿ, ಭತ್ತದ ಬೆಳೆ ಉಳಿಸುತ್ತೀವಿ ಅಂತ ಪಣ ತೊಟ್ಟಿದ್ದಾರೆ. ಇವರ ಶ್ರಮಕ್ಕೆ ಒಳ್ಳೆಯ ಫಲ ಸಿಗಲಿ ಅನ್ನೊದು ನಮ್ಮ ಆಶಯ.












Click it and Unblock the Notifications