ಶೀರೂರು ಶ್ರೀಗಳ ಸಾವು: ಪೊಲೀಸರ ಕೈ ಸೇರಿದ ಅಂತಿಮ ವರದಿ
ಮಣಿಪಾಲ, ಸೆಪ್ಟೆಂಬರ್ 09: ಭಾರಿ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದ್ದ ಶೀರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಿದೆ.
ಶೀರೂರು ಶ್ರೀಗಳಿಗೆ ವಿಷಪ್ರಾಶನವಾಗಿಲ್ಲ, ಅವರದ್ದು ಸಹಜ ಸಾವು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯು ವರದಿ ನೀಡಿದೆ. ಹಿಂದೆ ನೀಡಿದ್ದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್ಎಲ್ ವರದಿಗಳನ್ನು ತಾಳೆ ನೋಡಿ ಹೀಗೆ ವರದಿ ನೀಡಲಾಗಿದೆ.
ಶೀರೂರು ಶ್ರಿಗಳು ಅನ್ನನಾಳದ ರಕ್ತಸ್ರಾವ ಹಾಗೂ ಕೋನ್ನಿಕ್ ಲಿವರ್ ಸಿರಾಸಿಸ್ನಿಂದ ಮೃತರಾಗಿದ್ದಾರೆ. ದೇಹದಲ್ಲಿ ಯಾವುದೇ ವಿಷ ಅಂಶ ಪತ್ತೆಯಾಗಿಲ್ಲ ಎಂದು ವೈದ್ಯರು ಷರಾ ಬರೆದಿದ್ದಾರೆ.

ಜುಲೈ 19ರಂದು ಶೀರೂರು ಶ್ರೀಗಳು ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಶ್ರೀಗಳ ಸಾವು ಅಸಹಜ, ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂದು ಹಲವರು ಆರೋಪ ಮಾಡಿದ್ದರು. ಶ್ರೀಗಳ ಪೂರ್ವಾಶ್ರಮದ ಸಹೋದರ ಈ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿದ್ದರು. ಆದರೆ ಎಫ್ಎಸ್ಎಲ್ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಅನ್ವಯ ಶೀರೂರು ಶ್ರೀಗಳದ್ದು ಸಹಜ ಸಾವು ಎಂದು ತಿಳಿದುಬಂದಿದೆ.

ಕೆಲವರನ್ನು ವಿಚಾರಣೆ ಮಾಡಿದ್ದ ಪೊಲೀಸರು
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿದ್ದರು. ಆದರೆ ಎಫ್ಎಸ್ಎಲ್ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಅನ್ವಯ ಶೀರೂರು ಶ್ರೀಗಳದ್ದು ಸಹಜ ಸಾವು ಎಂದು ತಿಳಿದುಬಂದಿದೆ.

ಪೇಜಾವರ ಶ್ರೀಗಳು ಈ ಹಿಂದೆಯೇ ಹೇಳಿದ್ದರು
ಈ ಬಗ್ಗೆ ಈ ಹಿಂದೆಯೇ ಅಷ್ಟಮಠಗಳಲ್ಲಿನ ಹಿರಿಯರಾದ ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು. ವಿಷಪ್ರಾಶನ ಸುದ್ದಿ ಸುಳ್ಳು, ಅವರೊಂದಿಗೆ ಹಲವರಿಗೆ ಭಿನ್ನಾಭಿಪ್ರಾಯ ಇತ್ತು ಆದರೆ ಕೊಲ್ಲುವ ಪ್ರಯತ್ನ ಆಗಿರಲಾರದು ಎಂದು ಹೇಳಿದ್ದರು. ಶ್ರೀಗಳಿಗೆ ವಿಷಹಾಕುವ ಪ್ರಮೇಯವೇ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದರು.

ಅನುಮಾನಗಳಿಗೆ ಕಾರಣ ಏನು?
ಶೀರೂರು ಶ್ರೀಗಳ ಮರಣಾನಂತರ ಬಿಡುಗಡೆ ಆದ ಅವರ ಹಲವು ವಿಡಿಯೋಗಳು ಅವರ ಸಾವಿನ ಬಗ್ಗೆ ಭಾರಿ ಅನುಮಾನ ಮೂಡಿಸಿದ್ದವು. ಅಷ್ಟಮಠದ ಶ್ರೀಗಳಲ್ಲಿ ಹಲವರಿಗೆ ಮದುವೆ ಆಗಿದೆ ಎಂದು ಹೇಳಿದ್ದ ವಿಡಿಯೋ, ತಮಗೆ ಯಾರೋ ಕೆಲವರು ಕೋಟ್ಯಂತರ ಹಣ ಮೋಸ ಮಾಡಿದ್ದಾರೆ ಎಂದು ಹೇಳಿದ್ದ ವಿಡಿಯೋ ಇನ್ನು ಕೆಲವು ವಿಡಿಯೋಗಳು ಶೀರೂರು ಶ್ರೀಗಳ ಸಾವಿನ ಬಗ್ಗೆ ಅನುಮಾನ ಮೊಳೆಯುವಂತೆ ಮಾಡಿದ್ದವು.

ಪೊಲೀಸರ ತನಿಖೆ ವೇಳೆ ನಡೆದದ್ದೇನು?
ಶೀರೂರು ಶ್ರೀಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿ ದೂರು ದಾಖಲಾದ ಕೂಡಲೆ ಪೊಲೀಸರು ಶೀರೂರು ಮೂಲ ಮಠವನ್ನು ಕೆಲವು ದಿನಗಳ ಕಾಲ ತಮ್ಮ ಸುಪರ್ಧಿಗೆ ತೆಗೆದುಕೊಂಡರು. ಆ ನಂತರ ಮಠದ ಸಿಸಿಟಿವಿಯ ಸಿಡಿಆರ್ ಕಾಣೆಯಾಗಿದ್ದಾಗಿ ವರದಿಯಾಯಿತು. ಅದು ಸಮೀಪದ ಹೊಳೆಯಿಂದ ಸಿಕ್ಕಿತು ಎನ್ನಲಾಯಿತು. ಮಠದ ಒಳಗಿನ ಬಾವಿಯಲ್ಲಿ ಮದ್ಯದ ಬಾಟಲಿಗಳು ದೊರೆತವು ಇವೆಲ್ಲವೂ ಸೇರಿ ಶ್ರೀಗಳ ಸಾವಿನ ಸತ್ಯಾಸತ್ಯತೆಯ ಬಗ್ಗೆ ಕುತೂಹಲ ಹೆಚ್ಚಿಸಿತು.

ಮಹಿಳೆಯೊಬ್ಬರ ಎಂಟ್ರಿ
ಶೀರೂರು ಶ್ರೀಗಳ ಮಠಕ್ಕೆ ಮಹಿಳೆಯೊಬ್ಬರು ಸದಾ ಬರುತ್ತಿದ್ದರು. ಮಠದ ಉಸ್ತುವಾರಿ ಅವರೇ ನೋಡಿಕೊಳ್ಳುತ್ತಿದ್ದರು ಎಂಬುದು ಸಹ ಇದೇ ಸಮಯದಲ್ಲಿ ಬಹಿರಂಗವಾಗಿತ್ತು. ಆಕೆ, ಶ್ರೀಗಳ ಚಿನ್ನಾಭರಣ ಧರಿಸಿ ತೆಗೆಸಿಕೊಂಡಿದ್ದ ಫೊಟೊಗಳು ಸಹ ಅಂತರ್ಜಾಲದಲ್ಲಿ ಹರಿದಾಡಿದ್ದವು. ಚಿನ್ನಕ್ಕಾಗಿ ಶ್ರೀಗಳಿಗೆ ವಿಷಪ್ರಾಶನ ಆಗಿರಬಹುದು ಎಂಬ ದಟ್ಟ ವದಂತಿ ಹಬ್ಬಿತ್ತು.












Click it and Unblock the Notifications