ಶೀರೂರು ಶ್ರೀಗಳ ಅಸಹಜ ಸಾವು: ಉಡುಪಿ ಪೊಲೀಸರು ಮುಂಬೈಗೆ ತೆರಳಿದ್ದೇಕೆ?
Recommended Video

ಉಡುಪಿ ಅಷ್ಟಮಠಗಳಲ್ಲೊಬ್ಬರಾದ ಶೀರೂರು ಮಠದ ಲಕ್ಷ್ಮೀವರತೀರ್ಥರ ಅಸಹಜ ಸಾವಿನ ವಿಚಾರಣೆ ನಡೆಸುತ್ತಿರುವ ಉಡುಪಿ ಪೊಲೀಸರು, ತನಿಖೆಯನ್ನು ಇನ್ನೊಂದು ಆಯಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಶ್ರೀಗಳ ಸಾವಿನಲ್ಲಿ ಭೂಮಾಫಿಯಾದ ಕೈವಾಡವಿರುವ ಶಂಕೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸರ ಒಂದು ತಂಡ ಮುಂಬೈಗೆ ತೆರಳಿದೆ. ಉಡುಪಿ ರಥಬೀದಿ ಮತ್ತು ಹಿರಿಯಡ್ಕದ ಶೀರೂರು ಮಠವನ್ನು ಪೊಲೀಸರು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಅರ್ಚಕರು ಮತ್ತು ಗೋಶಾಲೆ ನೋಡಿಕೊಳ್ಳುತ್ತಿರುವವರು ತಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಿದ್ದು, ಸಾರ್ವಜನಿಕರು ಊಹಾಪೋಹ ಸುದ್ದಿಗಳನ್ನು ಹಬ್ಬಿಸಬಾರದೆಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ.
ಸುಮಾರು ಮುನ್ನೂರು ಎಕರೆಗೂ ಅಧಿಕ ಆಸ್ತಿ ಶೀರೂರು ಮಠದ ಹೆಸರಿನಲ್ಲಿದೆ ಎನ್ನಲಾಗುತ್ತಿದ್ದು, ಮಠದ ಆಸ್ತಿ ಕಬಳಿಕೆ ಮತ್ತು ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲಪಟಾಯಿಸುವ ಉದ್ದೇಶದಿಂದಲೂ ಶ್ರೀಗಳ ಅಸಹಜ ಸಾವು ಸಂಭವಿಸಿರಬಹುದು ಎನ್ನುವ ಕೋನದಿಂದಲೂ ತನಿಖೆ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ.
ಶ್ರೀಗಳ ವೈಕುಂಠಸ್ಥರಾದ ನಂತರ, ಶ್ರೀಗಳು ದೈವದ ಮೊರೆಹೋಗಿದ್ದ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಇಬ್ಬರು ಉದ್ಯಮಿಗಳು ತಮಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದು, ಅವರಿಂದ ಹಣ ವಸೂಲಿ ಮಾಡಿಕೊಡುವಂತೆ ದೈವದ ಬಳಿ ಶ್ರೀಗಳು ಮನವಿ ಮಾಡಿದ್ದರು.

500ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಹೊಂದಿರುವ ಶೀರೂರು ಮಠ
ಸುಮಾರು ಐನೂರು ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಶೀರೂರು ಮಠ ಹೊಂದಿದ್ದು, ಜೊತೆಗೆ ಶ್ರೀಗಳ ಅಸಹಜ ಸಾವಿನ ಸುತ್ತ ಭೂಮಾಫಿಯಾದ ಹೆಸರೂ ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ ಏಳು ತಂಡಗಳ ಪೈಕಿ, ಒಂದು ತಂಡ ಮುಂಬೈಗೆ ಶನಿವಾರ (ಜುಲೈ 21) ತೆರಳಿದೆ. ಶ್ರೀಗಳ ನಿಧನದ ನಂತರ ವೈರಲ್ ಆದ ವಿಡಿಯೋ/ಆಡಿಯೋಗಳಲ್ಲಿ ಶ್ರೀಗಳಿಗೆ ಭೂಮಾಫಿಯಾದ ಜೊತೆ ನಂಟಿರುವ ಬಗ್ಗೆಯೂ ಸುಳಿವು ಸಿಕ್ಕಿದ್ದವು.

ಶೀರೂರು ಶ್ರೀಗಳ ಸಾವು: ಪೊಲೀಸ್ ತನಿಖೆಯಲ್ಲಿ ಹೊಸ ತಿರುವು
ಶ್ರೀಗಳ ಜೊತೆ ತುಳುಕು ಹಾಕುತ್ತಿರುವ ಮಹಿಳೆಗೂ ಮತ್ತು ಶೀರೂರು ಶ್ರೀಗಳಿಗೆ ವಂಚಿಸಿದ ಉದ್ಯಮಿಗಳಿಗೂ ಏನಾದರೂ ನಂಟಿದೆಯಾ ಎನ್ನುವ ಆಯಾಮದಲ್ಲೂ ವಿಚಾರಣೆ ನಡೆಸಲು ಪೊಲೀಸರ ತಂಡ ಮುಂಬೈಗೆ ತೆರಳಿದೆ. ಸ್ವಾಮೀಜಿಗಳಿಗೆ ಕೋಟ್ಯಂತರ ರುಪಾಯಿ ಹಣ ಬರುವುದಿತ್ತು. ಕೆಲ ಬಿಲ್ಡರ್ ಗಳು ,ಉದ್ಯಮಿಗಳು ಶ್ರೀಗಳಿಂದ ಸಾಲ ಪಡೆದಿದ್ದರು ಎನ್ನಲಾಗಿದ್ದು. ಮೋಸ ಮಾಡಿದ ಉದ್ಯಮಿಗಳ ವಿರುದ್ದ ದೈವಕ್ಕೆ ದೂರು ನೀಡಿದ್ದ ಶೀರೂರು ಸ್ವಾಮೀಜಿ, ಆದಷ್ಟು ಬೇಗ ಹಣ ಮರಳಿಸುವಂತೆ ಮಾಡು ದೈವದ ಬಳಿ ಪ್ರಾರ್ಥಿಸುವ ವಿಡಿಯೋ ಬಿಡುಗಡೆಯಾಗಿತ್ತು.

ಬರುವ ಮತ್ತು ಹೋಗುವ ಕರೆ ಪೊಲೀಸರಿಂದ ಪರಿಶೀಲನೆ
ಇದರ ಜೊತೆಗೆ ಶ್ರೀಗಳು ಒಟ್ಟು ಮೂರು ಮೊಬೈಲ್ ಬಳಸುತ್ತಿದ್ದು, ಎಲ್ಲಾ ಮೂರು ಮೊಬೈಲ್ ಗಳಿಗೆ ಬರುವ ಮತ್ತು ಹೋಗುವ ಕರೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಕೆಎಂಸಿ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಯ ವರದಿ ಬರಲಿದ್ದು, ತನಿಖೆಗೆ ಇನ್ನೂ ವೇಗ ಸಿಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಚಿತ್ರದಲ್ಲಿ: ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ)

ಶ್ರೀ ಗಳ ಅಸಹಜ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ?
ಶ್ರೀಗಳ ವಿಧಿವಶರಾದ ದಿನ ಅವರ ಆಪ್ತರೋರ್ವ ನೀಡಿದ್ದ ಹೇಳಿಕೆ, ಶೀರೂರು ಶ್ರೀ ಗಳ ಅಸಹಜ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಇದೆಯಾ ಎಂಬ ಸಂಶಯ ಮೂಡಲಾರಂಭಿಸಿತ್ತು. ಮಠದ ದೇವರ ಮೇಲೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದು, ಇತ್ತೀಚೆಗೆ ಬಂದ ಚಿನ್ನಾಭರಣದ ಬಗ್ಗೆ ಲೆಕ್ಕ ವಿವರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಮಠದ ಆಸ್ತಿ ಅರ್ಹರಿಗೆ ಸಲ್ಲಬೇಕೆ ಹೊರತು ಹೊರಗಿನ ಅರ್ಚಕರನ್ನು ನೇಮಿಸುವುದಕ್ಕೆ ತಡೆ ನೀಡಬೇಕಿದೆ ಎಂದು ಶ್ರೀಗಳ ಆಪ್ತ ಮೋಹನ್ ಆಗ್ರಹಿಸಿದ್ದರು.

ಶೀರೂರು ಮೂಲ ಮಠದ ಸಿಸಿಟಿವಿ ಡಿವಿಆರ್ ಕಳುವು
ಈ ನಡುವೆ, ಪೊಲೀಸ್ ತನಿಖೆಯ ವೇಳೆ ಶೀರೂರು ಮೂಲ ಮಠದ ಸಿಸಿಟಿವಿ ಡಿವಿಆರ್ ಕಳುವಾಗಿದೆ ಎನ್ನುವ ಮಾಹಿತಿಯಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ನಂತರ ಅಪರಿಚಿತ ವ್ಯಕ್ತಿಯೊಬ್ಬ ಮಠಕ್ಕೆ ಆಗಮಿಸಿದ್ದು, ಈತನೇ ಡಿವಿಆರ್ ಅನ್ನು ಕದ್ದೊಯ್ದಿರಬಹುದು ಎಂದು ಶಂಕಿಸಲಾಗಿದೆ. ಉಡುಪಿ ಪೊಲೀಸರು ಮುಂಬೈಗೆ ತೆರಳಿದ್ದು, ಮಹತ್ವದ ಮಾಹಿತಿಯನ್ನು ಕಲೆಹಾಕಿ ಬರುತ್ತಾರೆ ಎನ್ನುವ ವಿಶ್ವಾಸವನ್ನು ಶೀರೂರು ಶ್ರೀಗಳ ಭಕ್ತರು ಹೊಂದಿದ್ದಾರೆ.












Click it and Unblock the Notifications