ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಉಡುಪಿ, ನವೆಂಬರ್. 29: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಸಮಾಜವಾದಿ ಹೋರಾಟಗಾರ ಅಮ್ಮೆಂಬಳ ಆನಂದ (92) ಅವರನ್ನು ರಾಜ್ಯ ಸರಕಾರ ಆಯ್ಕೆ ಮಾಡಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯರು ಆಗಿದ್ದ ಅಮ್ಮೆಂಬಳ ಆನಂದ ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಆದರೆ ಕಾರ್ಯ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ನಿವೃತ್ತ ಜೀವನ ಉಡುಪಿ ಜಿಲ್ಲೆಯಲ್ಲಿ.
ಹೀಗೆ 3 ಜಿಲ್ಲೆಗಳ ಒಡನಾಟ ಹೊಂದಿರುವ ಅಮ್ಮೆಂಬಳ ಅವರು, ಹಿರಿಯ ಸಮಾಜವಾದಿ ನೇತಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ, ದಿನಕರ ದೇಸಾಯಿ, ಅಮ್ಮೆಂಬಳ ಬಾಳಪ್ಪ, ಜಾರ್ಜ ಫೆರ್ನಾಂಡಿಸ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಚಿನ್ನಯ ಹಾಗೂ ತಿರುಮಲೆ ದಂಪತಿಯ ಪುತ್ರರಾಗಿರುವ ಇವರು ಬಂಟಾಳ್ವ ತಾಲೂಕಿನ ಅಮ್ಮೆಂಬಳದಲ್ಲಿ 1927ರಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಬಿಜೈಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿದ ಇವರು, ಕಂಕನಾಡಿಯಲ್ಲಿದ್ದ ಭತ್ತ ಸಂಶೋಧನಾ ಕೇಂದ್ರದಲ್ಲಿ ಕ್ಷೇತ್ರ ಸಹಾಯಕರಾಗಿ ಮತ್ತು ಬೆಸೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕೆಲಕಾಲ ಉದ್ಯೋಗದಲ್ಲಿದ್ದರು.
ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ತೆರಳಿ ಕೆನರಾ ವೆಲ್ ಫೇರ್ ಟ್ರಸ್ಟ್ ವಾರಪತ್ರಿಕೆ ಜನಸೇವಕ ಸಂಪಾದಕರಾಗಿ 17 ವರ್ಷ ಸೇವೆ ಸಲ್ಲಿಸಿದರು.
ಬಳಿಕ ಡೆಕ್ಕನ್ ಹೆರಾಲ್ಡ್ , ಪ್ರಜಾವಾಣಿ ಪತ್ರಿಕೆಯಲ್ಲಿ 30 ವರ್ಷ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 35 ವರ್ಷ ಕಾರ್ಯನಿರ್ವಹಿಸಿದ್ದು, ನಿವೃತ್ತಿ ಬಳಿಕ ಮಣಿಪಾಲದಲ್ಲಿ ಮಗಳ ಮನೆಯಲ್ಲಿ ಜೀವನದ ಸಂಧ್ಯಾ ಕಾಲವನ್ನು ಕಳೆಯುತ್ತಿದ್ದಾರೆ.












Click it and Unblock the Notifications