ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ವಿಧಿವಶ
ಉಡುಪಿ, ಡಿಸೆಂಬರ್ 13: ಮಧ್ವ ಸಿದ್ಧಾಂತದ ಪ್ರತಿಪಾದಕ, ಸಂಸ್ಕೃತ ವಿದ್ವಾಂ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ವಿಧಿವಶರಾಗಿದ್ದಾರೆ. ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅವರು ತರ್ಜುಮೆ ಮಾಡಿದ್ದರು.
ಭಾನುವಾರ ಉಡುಪಿ ಜಿಲ್ಲೆಯ ಅಂಬಲಪಾಡಿ ನಿವಾಸದಲ್ಲಿ 85 ವರ್ಷದ ಬನ್ನಂಜೆ ಗೋವಿಂದಾಚಾರ್ಯ ಮೃತಪಟ್ಟಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಅವರು ಪದ್ಮಶ್ರೀ ಪುರಸ್ಕೃತ ಪ್ರವಚನಕಾರರಾಗಿದ್ದರು.

ನಟ ದಿ. ವಿಷ್ಣುವರ್ಧನ್ ಆಧ್ಯಾತ್ಮಿಕ ಗುರುಗಳಾಗಿದ್ದ ಬನ್ನಂಜೆ ಗೋವಿಂದಾಚಾರ್ಯ ಪ್ರವಚನಕಾರರಾಗಿ, ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿ, ಪತ್ರಕರ್ತರಾಗಿದ್ದರು. ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದರು.
ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದ ಗೋವಿಂದಾಚಾರ್ಯರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ಪ್ರವಚನಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರನ 'ಮೃಚ್ಛಕಟಿಕ' ಚಾರಿತ್ರಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಪುರುಷ ಸೂಕ್ತ, ಶ್ರೀ ಸೂಕ್ತ, ನರಸಿಂಹ ಸ್ತುತಿ, ಶಿವಸೂಕ್ತ ಮುಂತಾದವುಗಳನ್ನು ಕನ್ನಡದಕ್ಕೆ ಅನುವಾದ ಮಾಡಿದ್ದರು.
ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ್ದ ಬನ್ನಂಜೆ ಗೋವಿಂದಾಚಾರ್ಯರು ಶಿವಳ್ಳಿಯ ಮಾಧ್ವ ಬ್ರಾಹ್ಮಣ ಸಂಪ್ರದಾಯಿಗಳಾಗಿದ್ದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರವನ್ನು ಕೈಗೊಂಡಿದ್ದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.












Click it and Unblock the Notifications