ಸಂತೋಷ್ ನಾಯಕ್ ಕೊಲೆ ಕೇಸ್: ಬಂಧಿತರ ಸಂಖ್ಯೆ 9 ಕ್ಕೇರಿಕೆ
ಉಡುಪಿ, ಜನವರಿ 21: ಹಿರಿಯಡ್ಕ ಸಣ್ಣಕ್ಕಿಬೆಟ್ಟು ಸಂತೋಷ ನಾಯಕ್ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಡಿಸಿಐಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ.
ಬಂಧಿತನನ್ನು ಮಂಗಳೂರಿನ ಅತ್ತಾವರ ಗ್ರಾಮದ ರಾಜೇಶ್ ಆಚಾರ್ಯ(36) ಎನ್ನಲಾಗಿದೆ. ಹಣದ ವಿಚಾರ ಕುರಿತು ಸಂತೋಷ್ ನಾಯಕ್ರನ್ನು ಡಿಸೆಂಬರ್ 2 ರಂದು ಅಪಹರಿಸಿದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ತಂಡ , ಪೆರ್ಣಂಕಿಲ ಬಳಿ ಕಾಡಿನಲ್ಲಿ ಕೊಲೆ ಮಾಡಲಾಗಿತ್ತು. ಅದೇ ದಿನ ರಾತ್ರಿ ತಂಡ ಸಂತೋಷ್ ನಾಯಕ್ ಮನೆಗೆ ಬಂದು ಮನೆಯವರನ್ನು ಹೆದರಿಸಿ ಕಪಾಟನ್ನು ಒಡೆದು ಹಣಕ್ಕಾಗಿ ಹುಡುಕಾಟ ನಡೆಸಿ ದೇವರ ಕೋಣೆ ನೆಲ ಅಗೆದು ಹಣಕ್ಕಾಗಿ ಹುಡುಕಾಡಿದ್ದರು. ಅಲ್ಲದೆ ಸಂತೋಷ್ ನಾಯಕ್ ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಈಪ್ರಕರಣದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈಗ ಮತ್ತೊಬ್ಬನ ಸೇರ್ಪಡೆಯಾಗಿದೆ.[ತಂದೆಯನ್ನು ಕೊಂದು ಪರಾರಿಯಾಗಿದ್ದ ಮಗನ ಬಂಧನ]

ತಲೆಮರೆಸಿಕೊಂಡಿದ್ದ ರಾಜೇಶ್ ಆಚಾರ್ಯನನ್ನು ಬಂಧಿಸಲಾಗಿದೆ. ಈತನಿಂದ ದರೋಡೆ ಮಾಡಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ಬೆಂಡೋಲೆ ಹಾಗೂ ಜುಮಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ರು 80,500 ಎಂದು ಅಂದಾಜಿಸಲಾಗಿದೆ.
ಆರೋಪಿಯನ್ನು ಸೊತ್ತುಗಳೊಂದಿಗೆ ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅರಕ್ಷಕ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಎಎಸೈ ರೊಸಾರಿಯೊ ಡಿಸೋಜ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications