ಮಹಿಳೆ ಮೇಲೆ ಹಲ್ಲೆ ಮಾಡಿ ಲಕ್ಷಾಂತರ ರು.ದೋಚಿದ ದುಷ್ಕರ್ಮಿಗಳು
ಉಡುಪಿ, ಸೆಪ್ಟೆಂಬರ್ 21 : ಯುವತಿಯೊಬ್ಬಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಚೇರಿಯಲ್ಲಿದ್ದ ನಗದನ್ನು ದರೋಡೆ ಮಾಡಿರುವ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯ ರಟ್ಟಾಡಿ ಎಂಬಲ್ಲಿ ಬುಧವಾರ ನಡೆದಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿಯಾಗಿರುವ 24 ವರ್ಷದ ಪ್ರೀತಿ ಎನ್ನುವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಆಕೆ ಬಳಿ ಇದ್ದ 2.3 ಲಕ್ಷ ರು.ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತ ಕಚೇರಿಯಲ್ಲಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿಕೊಂಡೇ ಕಚೇರಿ ನುಗ್ಗಿ ಪ್ರೀತಿಯವರ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಬಳಿಕ ಅವರ ಬಳಿಯಿದ್ದ ಸುಮಾರು 2.3 ಲಕ್ಷ ರೂಪಾಯಿ ಹಣವನ್ನು ತಂಡ ದೋಚಿದ್ದಾರೆ. ಮಾರಣಾಂತಿಕ ಹಲ್ಲೆಯಿಂದಾಗಿ ಪ್ರೀತಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮಾವಾಸ್ಯೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪರಿಚಿತ ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.