ಮಹಾರಾಷ್ಟ್ರದಿಂದ ಉಡುಪಿಗೆ ಬಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಸಾವು: ಇಂದು ವರದಿ ನಿರೀಕ್ಷೆ
ಉಡುಪಿ, ಮೇ 16: ನಿನ್ನೆಯಷ್ಟೇ ದುಬೈನಿಂದ ಜಿಲ್ಲೆಗೆ ಬಂದು, ಇಲ್ಲಿ ಕ್ವಾರಂಟೈನ್ ನಲ್ಲಿದ್ದ ಆರು ಜನರಿಗೆ ಸೋಂಕು ಇರುವುದು ದೃಢವಾಗಿತ್ತು. ಇಂದು ಮಹಾರಾಷ್ಟ್ರದಿಂದ ಬಂದ ಹಲವು ಮಂದಿಯ ಪರೀಕ್ಷಾ ವರದಿಗಾಗಿ ಉಡುಪಿ ಜಿಲ್ಲಾಡಳಿತ ಕಾಯುತ್ತಿದೆ.
ಆದರೆ ಇದೇ ಹೊತ್ತಿಗೆ ಮಹಾರಾಷ್ಟ್ರದಿಂದ ಹುಟ್ಟೂರು ಕುಂದಾಪುರ ತಾಲೂಕಿಗೆ ಆಗಮಿಸಿದ ವ್ಯಕ್ತಿ ಎರಡು ದಿನದ ಹಿಂದೆ ನಿಧನರಾಗಿರುವ ಸುದ್ದಿ ಉಡುಪಿಯಲ್ಲಿ ಆತಂಕ ಹೆಚ್ಚಿಸಿದೆ. ಈ ವ್ಯಕ್ತಿ ಅನಾರೋಗ್ಯದಿಂದಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಎರಡು ದಿನಗಳ ಹಿಂದೆ ಮಣಿಪಾಲ ಕೆಎಂಸಿಯಲ್ಲಿ ನಿಧನರಾಗಿದ್ದಾಗಿದ್ದಾರೆ. ಹೀಗಾಗಿ ಮೃತ ವ್ಯಕ್ತಿಗೆ ಕೊರೊನಾ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರ ವರದಿ ಇಂದು ಬರಲಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿದೆ. ಜೊತೆಗೆ ಮಹಾರಾಷ್ಟ್ರದಿಂದ ಬಂದ ನೂರಾರು ಜನರ ಕೋವಿಡ್ ವರದಿ ಇಂದು ಬರಲಿದ್ದು, ಏನಾಗುತ್ತದೋ ಎಂಬ ಆತಂಕ ಮನೆಮಾಡಿದೆ.
1 ವರ್ಷದ ಹೆಣ್ಣು ಮಗುವಿಗೂ ಸೋಂಕು: ತಂದೆ ತಾಯಿಯ ಜೊತೆ ದುಬೈನಿಂದ ಮರಳಿದ್ದ ಒಂದು ವರ್ಷದ ಹೆಣ್ಣು ಮಗುವಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಉಡುಪಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ. 37 ವರ್ಷದ ಪತಿ- 33 ವರ್ಷದ ಪತ್ನಿ ಮತ್ತು ಒಂದು ವರ್ಷದ ಹೆಣ್ಣು ಮಗು ಮೇ 13ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿಗೆ ಬಂದಿದ್ದರು. ಅದೃಷ್ಟವಶಾತ್ ಇವರೆಲ್ಲ ಮನೆಗಳಿಗೆ ಹೋಗದೇ ಹೋಟೆಲ್ ಕ್ವಾರಂಟೈನ್ ನಲ್ಲಿದ್ದರು. ಇವರ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳಿಸಲಾಗಿತ್ತು.

ಮೊದಲು ತಂದೆ ತಾಯಿಯ ವರದಿ ಪಾಸಿಟಿವ್ ಎಂದು ಬಂದಿತ್ತು. ಬಳಿಕ ಮಗುವಿಗೂ ಕೊರೊನಾ ಸೋಂಕು ಇರುವುದು ದೃಢಗೊಂಡಿದೆ. ಹೀಗಾಗಿ ಉಡುಪಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೆ ಏರಿದಂತಾಗಿದೆ. ನಿನ್ನೆ ಒಂದೇ ದಿನ ಆರು ಪ್ರಕರಣ ದಾಖಲಾಗಿರುವುದು ಉಡುಪಿಯ ಮಟ್ಟಿಗೆ ಆತಂಕದ ವಿಚಾರ. ಕಳೆದ ನಲವತ್ತೆಂಟು ದಿನಗಳಿಂದ ಉಡುಪಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳಿರಲಿಲ್ಲ.












Click it and Unblock the Notifications