ಪಿಯು ಪರೀಕ್ಷೆ ಆರಂಭ: ಹಾಲ್ ಟಿಕೆಟ್ ಪಡೆದ ಹಿಜಾಬ್ ವಿದ್ಯಾರ್ಥಿನಿಯರು
ಉಡುಪಿ, ಏಪ್ರಿಲ್ 22: ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ, ದಿನದಿಂದ ದಿನಕ್ಕೆ ಕಾವನ್ನು ಕಳೆದುಕೊಳ್ಳುತ್ತಾ ಬಂತು. ಇದರ ನಡುವೆಯೇ, ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದು ಹೋಯಿತು.
ಕೆಲವೊಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲದ ಹಿನ್ನಲೆಯಲ್ಲಿ ಪರೀಕ್ಷೆಯನ್ನೇ ಬಹಿಷ್ಕರಿಸಿದರು. ಈಗ, ದ್ವಿತೀಯ ಪಿಯುಸಿ ಎಕ್ಸಾಂ, ಇಂದಿನಿಂದ (ಏ 22) ಆರಂಭವಾಗಿದೆ.
ಹಿಜಾಬ್ ವಿವಾದ ಆರಂಭವಾಗಿದ್ದು ಉಡುಪಿಯ ಶೈಕ್ಷಣಿಕ ಕೇಂದ್ರವೊಂದರಲ್ಲಿ. ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಆಗಮಿಸಿದಾಗ, ಮಂಡಳಿ ಅವರಿಗೆ ಅವಕಾಶವನ್ನು ನೀಡಿರಲಿಲ್ಲ. ಆ ಆರು ವಿದ್ಯಾರ್ಥಿನಿಯರಲ್ಲಿ ಐವರು ದ್ವಿತೀಯ ಪಿಯು ಓದುತ್ತಿದ್ದರೆ, ಇನ್ನೊಬ್ಬರು ಮೊದಲನೇ ಪಿಯು ಓದುತ್ತಿದ್ದಾರೆ.
"ನಮ್ಮ ಭವಿಷ್ಯವನ್ನು ಹಾಳುಮಾಡುವುದನ್ನು ತಡೆಯಲು ಇನ್ನೂ ಅವಕಾಶವಿದೆ" ಎಂದು ಈ ಪೈಕಿ ಒಬ್ಬಾಕೆ, ಹಿಜಾಬ್ ನಿಷೇಧದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 17 ವರ್ಷದ ಬಾಲಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟ್ವೀಟ್ ಮಾಡಿದ್ದರು. ಆದರೆ, ಶಿಕ್ಷಣ ಸಚಿವರು ಇದು ಸಾಧ್ಯವಿಲ್ಲವೆಂದಿದ್ದರು. ಹಾಗಾದರೆ, ಈ ಹಿಜಾಬ್ ಹೋರಾಟಗಾರ್ತಿಯರು ದ್ವಿತೀಯ ಪಿಯುಸಿ ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಪಡೆದುಕೊಂಡರೇ? ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಕೊನೆ ಕ್ಷಣದಲ್ಲಿ ಉಡುಪಿಯ ಆಲಿಯಾ ಅಸಾದಿ ಹಾಗೂ ರೇಷಂ ಎಂಬ ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಪಡೆದುಕೊಂಡಿದ್ದಾರೆ

ಉಡುಪಿಯ ಮಹಿಳಾ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು
ಉಡುಪಿಯ ಮಹಿಳಾ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಐವರು ಹಿಜಾಬ್ ವಿದ್ಯಾರ್ಥಿನಿಯೆಂದರೆ, ಅಲ್ಮಾಸ್ ಎ ಹೆಚ್, ಹಜ್ರಾ ಶಿಫಾ, ಅಲಿಯಾ ಅಸಾದಿ, ಅಲಿಯಾ ಬಾನು ಮತ್ತು ರೇಶ್ಮಾ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಲ್ಲಿ ಮನವಿಯನ್ನು ಮಾಡಿದ್ದರು. ಆದರೆ, ಸರಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯದೇ ಹಿನ್ನಲೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಶಿಕ್ಷಣ ಮಂಡಳಿಗಳು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು.

ಕಾಲೇಜಿನಲ್ಲಿ ಓದುತ್ತಿರುವ ಒಟ್ಟು 18 ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು
ಈ ಕಾಲೇಜಿನಲ್ಲಿ ಓದುತ್ತಿರುವ ಒಟ್ಟು 18 ದ್ವಿತೀಯ ಪಿಯುಸಿ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ ಈ ಐವರು ವಿದ್ಯಾರ್ಥಿನಿಯರು ಗುರುವಾರ ಸಾಯಂಕಾಲದವರೆಗೂ ಪ್ರವೇಶ ಪತ್ರವನ್ನು ಪಡೆದಿರಲಿಲ್ಲ. ಇವರು ಪರೀಕ್ಷೆಗೆ ಹಾಜರಾಗುವುದು ಸಂಶಯ ಎಂದು ಹೇಳಲಾಗಿತ್ತು. ಕೊನೆಯ ಕ್ಷಣದಲ್ಲಿ ಬಂದರೂ ಹಾಲ್ ಟಿಕೆಟ್ ನೀಡಲು ಸಿದ್ದ, ನ್ಯಾಯಾಲಯದ ತೀರ್ಪನ್ನು ಪಾಲಿಸಿದರೆ ಸಾಕು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದರು. ಕೊನೆ ಕ್ಷಣದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಪಡೆದಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಲಿಯಾ ಅಸಾದಿ ಟ್ವೀಟ್
"ವಿದ್ಯಾರ್ಥಿನಿಯರು ನಾಳೆ ಪ್ರವೇಶ ಪತ್ರ ಪಡೆಯಲಿದ್ದಾರೆ, ಹಿಜಾಬ್ ಧರಿಸಿಯೇ ಕೊಠಡಿ ಪ್ರವೇಶಿಸಲಿದ್ದಾರೆ. ಒಂದು ವೇಳೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟರೆ ಪರೀಕ್ಷೆ ಬರೆಯಲಿದ್ದಾರೆ. ಇಲ್ಲದಿದ್ದ್ರೆ, ವಾಪಸ್ ಬರಲಿದ್ದಾರೆ" ಎಂದು ಸಿಎಫ್ಐ ಮುಖಂಡ ಸಾದಿಕ್ ಹೇಳಿದ್ದಾರೆ. "ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ಗಳ ಮೇಲಿನ ನಿಷೇಧವು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾದ ಪ್ರಿ-ಯೂನಿವರ್ಸಿಟಿ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳಲು ಬಯಸುವ ಅನೇಕ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ" ಎಂದು ಅಲಿಯಾ ಅಸಾದಿ ಟ್ವೀಟ್ ಮಾಡಿದ್ದರು.

ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟಿನ ತೀರ್ಪಿನಿಂದ ಬೇಸರ
ಏಪ್ರಿಲ್ 22ರಂದು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಹಿಜಾಬ್ಗಿಂತ ಪರೀಕ್ಷೆ ಮುಖ್ಯ, ಹಿಜಾಬ್ ತೆಗೆದು ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿನಿ ಆಸೀಯಾ ಬೆಂಗಳೂರಿನ ಮಲ್ಲೇಶ್ವರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದ ಬಳಿ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ತಿಂಗಳು ಉಡುಪಿಯ 40ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟಿನ ತೀರ್ಪಿನಿಂದ ಬೇಸರಗೊಂಡು ಮೊದಲ ಪದವಿ ಪೂರ್ವ ಪರೀಕ್ಷೆಗೆ ಗೈರುಹಾಜರಾಗಿದ್ದರು. ಪರೀಕ್ಷೆಯಿಂದ ದೂರ ಉಳಿದವರು ತರಗತಿಯಲ್ಲಿ ಹಿಜಾಬ್ ಧರಿಸುವ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.












Click it and Unblock the Notifications