ಬೀಚ್ ಕ್ಲೀನ್ ಮಾಡಿದ್ದ ನವಜೋಡಿಗೆ ಪ್ರಧಾನಿಯವರಿಂದ ಶ್ಲಾಘನೆ
ಉಡುಪಿ, ಡಿಸೆಂಬರ್ 28; ಪ್ರಧಾನಿ ನರೇಂದ್ರ ಮೋದಿಯರಿಂದ ಕುಂದಾಪುರದ ನವಜೋಡಿಗೆ ಶ್ಲಾಘನೆ ವ್ಯಕ್ತವಾಗಿದೆ. ಮೋದಿಯವರ ಈ ಬಾರಿಯ ಮನ್ ಕಿ ಬಾತ್ನಲ್ಲಿ ಅನುದೀಪ್ ಹೆಗ್ಡೆ, ವಿನುಷಾ ಹೆಸರು ಪ್ರಸ್ತಾಪವಾಗಿದೆ.
ಬೈಂದೂರು ಮೂಲದ ನವ ಜೋಡಿ ಅನುದೀಪ್ ಹೆಗ್ಡೆ ಮತ್ತು ವಿನುಷಾ ಮದುವೆಯ ಬಳಿಕ ಹನಿಮೂನ್ಗೆ ತೆರಳದೆ ಸೋಮೇಶ್ವರ ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಿ ಸುದ್ದಿ ಯಾಗಿದ್ದರು. ನವಜೋಡಿಯ ಈ ಸಾಮಾಜಿಕ ಕೈಂಕರ್ಯ ಕುರಿತ ವಿಶೇಷ ವರದಿಯು ಒನ್ ಇಂಡಿಯಾದಲ್ಲೂ ಪ್ರಕಟಗೊಂಡಿತ್ತು.
ನವೆಂವರ್ 27ರಿಂದ ಡಿಸೆಂಬರ್ 7ರವರೆಗೆ ಈ ನವಜೋಡಿಯು ಸಮುದ್ರ ತೀರವನ್ನು ಸ್ವಚ್ಛಗೊಳಿಸಿತ್ತು. ಈ ಮೂಲಕ ಹಸೆಮಣೆ ಏರಿದ ತಕ್ಷಣ ಹನಿಮೂನ್ಗೆ ತೆರಳದೆ ಸಾಮಾಜಿಕ ಕಳಕಳಿ ಮೆರೆದಿತ್ತು. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೊಸ ದಂಪತಿಗಳ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು.

ಈಗ ದೇಶದ ಪ್ರಧಾನಿಯಿಂದ ಹೊಗಳಿಸಿಕೊಂಡಿರುವ ಕುಂದಾಪುರದ ನವ ಜೋಡಿ ತುಂಬ ಖುಷಿಯಲ್ಲಿದ್ದಾರೆ. ಈ ನವ ವಧುವರರು ಯುವ ಪೀಳಿಗೆಗೆ ದಾರಿ ದೀಪ ಎಂದು ಪ್ರಧಾನಿ ಮೋದಿ ಹೊಗಳಿದ್ದು, ಅನುದೀಪ್ ಹೆಗ್ಡೆ, ವಿನುಷಾ ದಂಪತಿ ಮತ್ತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಬೀಚ್ ಸ್ವಚ್ಛಗೊಳಿಸಿ ಸುದ್ದಿ ಮಾಡಿರುವ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ಇಬ್ಬರೂ ಸಹ ಪ್ರಕೃತಿ ಪ್ರಿಯರು. ಬೈಂದೂರು ಸಮೀಪದ ಸೋಮೇಶ್ವರ ಬೀಚ್ ನಲ್ಲಿ 8 ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ದಂಪತಿಗಳು ಸಾಮಾಜಿಕ ಕಳಕಳಿ ಮೆರೆಯುವುದರ ಜೊತೆಗೆ ಯುವಜನತೆಗೆ ಒಳ್ಳೆಯ ಸಂದೇಶವನ್ನೂ ಸಾರಿದ್ದರು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಮನ್ ಕೀ ಬಾತ್ ಸರಣಿಯ 2020ನೇ ವರ್ಷದ ಕೊನೆಯ ಕಾರ್ಯಕ್ರಮ ಇದಾಗಿತ್ತು.












Click it and Unblock the Notifications