ಜೀವನ ಸಂಧ್ಯಾ ಹೊತ್ತಿನಲ್ಲಿ, ಹಿರಿಯ ನಾಗರೀಕರೊಬ್ಬರ ಮನಕಲಕುವ ಘಟನೆ
ಉಡುಪಿ, ಡಿ 2: ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗವಿಕಲ ಹಿರಿಯ ನಾಗರಿಕರೊರ್ವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರೂ ಬದುಕು ಸಾಗಿಸಲು ನೆಲೆ ಇಲ್ಲದೆ, ಆಸ್ಪತ್ರೆಯ ಕ್ಷಯರೋಗ ಚಿಕ್ಸಿತಾ ವಾರ್ಡಿನಲ್ಲಿ ತಾವೇ ಆಶ್ರಯ ಪಡೆದಿರುವ ಮನಕಲಕುವ ಘಟನೆ ವರದಿಯಾಗಿದೆ.
ತಮಿಳುನಾಡು ಮೂಲದ, ಸುಮಾರು 65 ವರ್ಷದ ಈ ವೃದ್ಧರ ಹೆಸರು ಸೆಲ್ವಂ. ಹಿಂದೆ ಸಂಭವಿಸಿದ ಅಪಘಾತವೊಂದರಲ್ಲಿ ತನ್ನ ಒಂದು ಕಾಲು, ಕೈಗಳನ್ನು ಕಳೆದುಕೊಂಡಿದ್ದರು. ನಡೆದಾಡಲು ಶಕ್ತರಾಗದ ಇವರು ನಲದಲ್ಲಿಯೇ ಕೈ ಊರಿಕೊಂಡು ಅತ್ತ ಇತ್ತ ಸಂಚರಿಸುತ್ತಿದ್ದಾರೆ.
ವೃದ್ಧರ ಶೋಷಣೆ: ಮಂಗಳೂರು ನಂ.1: ಸಮೀಕ್ಷೆ ವರದಿ
ಜೀವನ ಸಂಜೆಯ ಹೊತ್ತಿನಲ್ಲಿರುವ ಸೆಲ್ವಂ ಅವರ ಬದುಕು ಅತಂತ್ರವಾಗಿ, ಉಡುಪಿ ಜಿಲ್ಲಾಸ್ಪತ್ರೆಯ ಕ್ಷಯರೋಗ ಚಿಕಿತ್ಸಾ ವಾರ್ಡಿನಲ್ಲಿ ತಾವಾಗಿಯೇ ನೆಲೆ ಕಂಡಿದ್ದಾರೆ. ಆಶ್ರಯ ಪಡೆದುಕೊಂಡಿರುವ ವೃದ್ಧರು, ತನಗೊಂದು ಪುರ್ನವಸತಿ ವ್ಯವಸ್ಥೆ ಮಾಡುವಂತೆ ವೈದ್ಯರಲ್ಲಿ ಮತ್ತು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರಲ್ಲಿ ಅಂಗಲಾಚಿಕೊಂಡಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿರುವ ತನ್ನ ಅಳಲಿಗೆ ತುರ್ತಾಗಿ ಸ್ಪಂದಿಸಿ ಎಂದು ಸೆಲ್ವಂ ಆಗ್ರಹಿಸಿ ಕೊಂಡಿದ್ದಾರೆ. ಇವರಿಗೆ ಕ್ಷಯ ರೋಗ ಹರಡುವ ಭೀತಿಯೂ ಎದುರಾಗಿದೆ. ಇವರ ಚಿಂತಾಜನಕ ಪರಿಸ್ಥಿತಿ ಕಂಡು ದುಃಖಿತರಾದ ವಿಶು ಶೆಟ್ಟಿ ಅವರು ಸೂಕ್ತ ನೆಲೆ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಸರಕಾರದ ಪುರ್ನವಸತಿ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಇಲ್ಲದೇ, ವಿಶು ಶೆಟ್ಟಿ ಕೂಡ ಅಸಹಾಯಕರಾಗಿದ್ದಾರೆ. ವೃದ್ದ ಸೆಲ್ವಂ ಅವರ ಜವಾಬ್ದಾರಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅವರದ್ದಾಗಿದೆ. ವೃದ್ಧರ ಅಳಲಿಗೆ ಇಲಾಖೆಯ ಕಲ್ಯಾಣಾಧಿಕಾರಿಯವರಲ್ಲಿ ಶೀಘ್ರಗತಿಯಲ್ಲಿ ಸ್ಪಂದಿಸುವಂತೆ ಮನವಿ ಮಾಡಲಾಗಿದೆ.
ವೃದ್ಧರನ್ನು ಆಸ್ಪತ್ರೆಯಿಂದ ಮುಕ್ತಗೊಳಿಸಿ ಸುವ್ಯವಸ್ಥಿತ ಪುರ್ನವಸತಿ ಕೇಂದ್ರದಲ್ಲೂ, ಅನಾಥಾಶ್ರಮದಲ್ಲೋ ನೆಲೆ ಕಲ್ಪಿಸಬೇಕಾಗಿದೆ. ಡಿ.3, ರಂದು ವಿಶ್ವ ದಿವ್ಯಾಂಗ ಚೇತನರ ದಿನಾಚರಣೆ, ಅಂದಾದರೂ ಜೀವನದಲ್ಲಿ ನೊಂದು ಬೆಂದ ದಿವ್ಯಾಂಗ ಚೇತನ ವೃದ್ದರಿಗೆ ಚೇತನ ನೀಡಬೇಕೆಂದು ವಿಶು ಶೆಟ್ಟಿ ಅವರು ಕಳಕಳಿಯವಾಗಿ ಸಂಬಂಧ ಪಟ್ಟವರಲ್ಲಿ ವಿನಂತಿಸಿ ಕೊಂಡಿದ್ದಾರೆ.
ಸಂಬಂಧಪಟ್ಟವರು ವಿಶುಶೆಟ್ಟಿಯವರನ್ನು ಈ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ - 94800-16111.