ಹಿಜಾಬ್; ಫೆ. 8 ರಂದು ಹೈಕೋರ್ಟ್ಗೆ ಅರ್ಜಿ, ದಾಖಲೆ ಸಿದ್ಧ ಎಂದ ಶಾಸಕ
ಉಡುಪಿ, ಫೆಬ್ರವರಿ 06; ಉಡುಪಿಯ ಹಿಜಾಬ್ ವಿವಾದ ಸದ್ಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಫೆಬ್ರವರಿ 8ರ ಮಂಗಳವಾರ ಹೈಕೋರ್ಟ್ನಲ್ಲಿ ಹಿಜಾಬ್ ಕುರಿತು ಹಾಕಲಾಗಿದ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.
ಹೀಗಾಗಿ ಎಲ್ಲರ ಚಿತ್ತ ಈಗ ಹೈ ಕೋರ್ಟ್ನ ತೀರ್ಪಿನತ್ತ ನೆಟ್ಟಿದೆ. ಹೈಕೋರ್ಟ್ನಲ್ಲಿ ಪ್ರಬಲವಾದ ಮಂಡಿಸಲು ತಯಾರಾಗಿರುವ ಉಡುಪಿ ಕಾಲೇಜು ಅಭಿವೃದ್ಧಿ ಸಮಿತಿ ತಯಾರಾಗಿದ್ದು, ಶಾಸಕ ರಘಪತಿ ಭಟ್ ನೇತೃತ್ವದ ಕಾಲೇಜು ಅಭಿವೃದ್ಧಿ ಸಮಿತಿ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಡುಪಿ ಶಾಸಕ ರಘಪತಿ ಭಟ್, "ಹೈಕೋರ್ಟ್ನಲ್ಲಿ ತೀರ್ಪು ಕಾಲೇಜು ಪರ ಬರುವ ವಿಶ್ವಾಸವಿದೆ. ಉಡುಪಿ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಕೋರ್ಟ್ಗೆ ಹೋಗಿದ್ದಾರೆ. ನಮ್ಮನ್ನೂ ಕೋರ್ಟ್ನಲ್ಲಿ ಪಾರ್ಟಿಗಳನ್ನಾಗಿ ಮಾಡಿದ್ದಾರೆ. ನಾವು ಕೋರ್ಟ್ ಆದೇಶಕ್ಕೆ ಬದ್ಧರಿದ್ದೇವೆ. ಕೋರ್ಟ್ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇವೆ" ಎಂದರು.

"ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆಗಳು ಇದೆ. 2002ರಿಂದ ಎಲ್ಲಾ ಲಿಖಿತ ದಾಖಲೆಗಳು ಇವೆ. 2008ರಲ್ಲಿ ತರಗತಿ ಪ್ರಕಾರ ವಿದ್ಯಾರ್ಥಿನಿಯರ ಫೋಟೋ ತೆಗೆದಿದ್ದೇವೆ. ಅದರಲ್ಲಿ ಯಾರೂ ಹಿಜಾಬ್ ಧರಿಸಿಲ್ಲ. ಕಾಲೇಜು ಅಸೆಂಬ್ಲಿ ಆದಾಗ ತೆಗೆದ ಫೋಟೋ ಇದೆ. ಅದರಲ್ಲಿ ಯಾರೂ ಹಿಜಾಬ್ ಧರಿಸಿಲ್ಲ. ನವೆಂಬರ್ ಕನ್ನಡ ರಾಜ್ಯೋತ್ಸವದ ವಿದ್ಯಾರ್ಥಿನಿಯರ ಗುಂಪಿನ ಫೋಟೋದಲ್ಲೂ ಹಿಜಾಬ್ ಇಲ್ಲ. ಕೋರ್ಟ್ಗೆ ಹೋದ ಒಬ್ಬಳು ವಿದ್ಯಾರ್ಥಿನಿ, ವಿದ್ಯಾರ್ಥಿ ಸಂಘದ ನಾಯಕಿಯಾಗಿದ್ದಾಳೆ. ಆಕೆ ಪ್ರಮಾಣ ವಚನ ಸ್ವೀಕರಿಸಿದ ಫೋಟೋ ಇದೆ. ಅದರಲ್ಲೂ ಆಕೆ ಹಿಜಾಬ್ ಅನ್ನು ಧರಿಸಿಲ್ಲ" ಎಂದು ಶಾಸಕರು ಹೇಳಿದ್ದಾರೆ.
"ಕಾಲೇಜಿನಲ್ಲಿ 2002ರಿಂದ ಬಳಿಕ ಆದ ಎಲ್ಲಾ ಕಾರ್ಯಕ್ರಮಗಳ ದಾಖಲಾತಿಗಳು ನಮ್ಮಲ್ಲಿ ಇದೆ. 2008-09ನೇ ಇಸವಿಯಲ್ಲಿ ಕಾಲೇಜಿನ 25ನೇ ವರ್ಷದ ಸಂಭ್ರಮಾಚರಣೆ ಯ ಸಂದರ್ಭದಲ್ಲಿ ಎಲ್ಲಾ ತರಗತಿಗಳ ವಿದ್ಯಾರ್ಥಿನಿಯರ ಫೋಟೋ ತೆಗೆದಿದ್ದೇವೆ. ಹಳೆಯ ದಾಖಲೆಗಳನ್ನು ಕೋರ್ಟ್ಗೆ ಒಪ್ಪಿಸುತ್ತೇವೆ" ಎಂದರು.
ಇನ್ನು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿರುವ ಬಗ್ಗೆ ಮಾತನಾಡಿರುವ ಶಾಸಕ ರಘಪತಿ ಭಟ್, "ಹಿಜಾಬ್ ಹಾಕಿದಾಗಲೇ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವ ಬಗ್ಗೆ ಮನವಿ ಮಾಡಿದ್ದರು. ಶಿಕ್ಷಣ ಕೇಂದ್ರಗಳು ಧಾರ್ಮಿಕ ಸಂಘರ್ಷದ ಕೇಂದ್ರವಾಗೋದು ಬೇಡ ಅಂತಾ ಎಲ್ಲರನ್ನೂ ಮಾತುಕತೆಯ ಮೂಲಕ ಸಮಾಧಾನ ಮಾಡಿಕೊಂಡು ಬಂದಿದ್ದೇವೆ. ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವ ಅಂಶಗಳಲ್ಲ ಅನ್ನೋದನ್ನು ಮನವಿ ಮಾಡಿದ್ದೇವೆ. ಆದರೆ ಈಗ ಆಕ್ಷನ್ಗೆ ಪ್ರತಿ ಆಕ್ಷನ್ ಆಗುತ್ತಿದೆ. ಹಿಂದೂ ಯುವಕರ ಭಾವನೆಗಳಿಗೆ ಧಕ್ಕೆಯಾದಾಗ ಕೇಸರಿ ಶಾಲು ಧರಿಸಿದ್ದಾರೆ" ಎಂದು ರಘಪತಿ ಭಟ್ ಹೇಳಿದ್ದಾರೆ.
"ಈ ವಿವಾದದ ಮೂಲ ಉಡುಪಿಯ ಸರ್ಕಾರಿ ಬಾಲಕಿಯದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು. ಅವರು ಎಷ್ಟು ಬುದ್ದಿವಾದ ಹೇಳಿದರೂ ಕೇಳಿಲ್ಲ. ಉಡುಪಿ ವಿದ್ಯಾರ್ಥಿನಿಯರು ಮೂಲ ಆಗಿದ್ದಾರೆ. ಇಡೀ ಜಿಲ್ಲೆಗೆ ಹರಡುವ ಹಾಗೆ ಮಾಡಿದ್ದಾರೆ" ಎಂದು ರಘಪತಿ ಭಟ್ ಆರೋಪ ಮಾಡಿದ್ದಾರೆ.
"ವಿದ್ಯಾರ್ಥಿನಿಯರ ಹಿಂದೆ ಮೂಲಭೂತವಾದಿ ಸಂಘಟನೆಗಳು ಕೆಲಸ ಮಾಡುತ್ತಿದೆ. ಈ ವಿದ್ಯಾರ್ಥಿನಿಯರ ಹೆತ್ತವರು ಬಹುತೇಕರು ಬಡವರೇ ಆಗಿದ್ದಾರೆ. ಅವರಿಗೆ ಹೈಕೋರ್ಟ್ ಲಾಯರ್ ಫೀಸ್ ಯಾರು ಕೊಡ್ತಾರೆ? ಇದರ ಹಿಂದೆ ಸಮಾಜಘಾತುಕ ಸಂಘಟನೆಗಳ ಈ ವಿದ್ಯಾರ್ಥಿನಿಯರ ಬೆಂಬಲ ವಿರುವ ಬಗ್ಗೆ ಅನುಮಾನ ಇಲ್ಲ" ಎಂದು ರಘಪತಿ ಭಟ್ ತಿಳಿಸಿದ್ದಾರೆ.












Click it and Unblock the Notifications