ಪೇಜಾವರ ಶ್ರೀ ಆರೋಗ್ಯ ತೀರಾ ಗಂಭೀರ; ಉಡುಪಿಯತ್ತ ಹೊರಟ ಸಿಎಂ
ಉಡುಪಿ, ಡಿಸೆಂಬರ್ 21: ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಣಿಪಾಲದ ಕಸ್ತೂರಬಾ (ಕೆಎಂಸಿ) ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶ್ರೀಗಳಿಗೆ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಅವರ ರಕ್ತದೊತ್ತಡದಲ್ಲಿ ತೀವ್ರ ಇಳಿಮುಖವಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಾರವಾರದಿಂದ ಕೆಎಂಸಿ ಆಸ್ಪತ್ರೆಗೆ ಹೊರಟಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯ ಮತ್ತು ಗಮನಿಸಬೇಕಾದ ಪ್ರಮುಖ ಸುದ್ದಿಗಳು
ಸಂಜೆ 5.30 ಕ್ಕೆ ಬಿ ಎಸ್ ಯಡಿಯೂರಪ್ಪ ಅವರು ಆಸ್ಪತ್ರೆ ತಲುಪಿ ಶ್ರೀಗಳ ಆರೋಗ್ಯದ ಮಾಹಿತಿ ಪಡೆಯಲಿದ್ದಾರೆ. 6 ಗಂಟೆಗೆ ಕೆಎಂಸಿ ಆಸ್ಪತ್ರೆ ವೈದ್ಯರು ಶ್ರೀಗಳ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಲಿದ್ದಾರೆ. ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ವೈದ್ಯರು ತೀವ್ರ ನಿಗಾವಹಿಸಿದ್ದಾರೆ ಎಂದು ನಮ್ಮ ಪ್ರತಿನಿಧಿ ತಿಳಿಸಿದ್ದಾರೆ.
ಉಸಿರಾಟದ ತೊಂದರೆಯಿಂದಾಗಿ ಡಿ 21 ರ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಕೂಡಲೇ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಸದ್ಯ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ತಮ್ಮ ಇಳಿವಯಸ್ಸಿನಲ್ಲಿಯೂ ಪೇಜಾವರ ಶ್ರೀಗಳು ನಿರಂತರ ಪ್ರವಾಸದಲ್ಲಿದ್ದರು. ಉತ್ತರ ಭಾರತ, ತಿರುಪತಿ ಮತ್ತು ಚೆನ್ನೈಗೆ ಭೇಟಿ ನೀಡಿದ್ದರು. 2017ರಲ್ಲಿ ಪೇಜಾವರ ಶ್ರೀಗಳು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ತಿಂಗಳ ಬಳಿಕ ಅವರಿಗೆ ಪುನಃ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ನೀಡಲಾಗಿತ್ತು.