ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ ಪ್ರಶಸ್ತಿ: ಮಾಧ್ವ ಯತಿ ಪರಂಪರಯಲ್ಲೇ ಮೊದಲು
71ನೇ ಗಣರಾಜ್ಯೋತ್ಸವಕ್ಕೆ ಮುನ್ನಾದಿನ ಕೇಂದ್ರ ಸರಕಾರ 2020ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಿದೆ. ಕೃಷ್ಣೈಕ್ಯರಾದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಸೇರಿದಂತೆ, ರಾಜ್ಯದ ಎಂಟು ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪೇಜಾವರ ಶ್ರೀಗಳಿಗೆ ದೇಶದ ಎರಡನೇ ಅತ್ಯುನ್ನತ (ಭಾರತರತ್ನದ ನಂತರ) ಪ್ರಶಸ್ತಿ ಮರಣೋತ್ತರವಾಗಿ ಲಭಿಸಿದೆ. ಮಾಧ್ವ ಯತಿ ಪರಂಪರೆಯಲ್ಲಿ ವ್ಯಾಸರಾಜರು, ವಾದಿರಾಜರು, ರಾಘವೇಂದ್ರ ಗುರುಗಳಿಗೆ ಅರಸೊತ್ತಿಗೆಯ ಗೌರವಗಳು ಸಂದಿರುವುದನ್ನು ಸ್ಮರಿಸುತ್ತಾ..
ಪೇಜಾವರ ಹಿರಿಯ ಶ್ರೀಗಳು, ಪೀಠದ ಪರಂಪರೆಯ ಇತಿಹಾಸದಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಮೊದಲ ಯತಿಗಳಾಗಿದ್ದಾರೆ. ಆದರೆ, ಬೌದ್ದಿಕವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಶ್ರೀಗಳು ನಮ್ಮೊಂದಿಗೆ ಇಲ್ಲ.

ಹಲವು ದಿನಗಳಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕಳೆದಿದ್ದ ಪೇಜಾವರ ಶ್ರೀಗಳು, ಡಿಸೆಂಬರ್ 29ರ ಭಾನುವಾರ ಬೆಳಿಗ್ಗೆ ಉಡುಪಿ ಪೇಜಾವರ ಮಠದಲ್ಲಿ ಹರಿಪಾದವನ್ನು ಸೇರಿದ್ದರು.
ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಮಂಚೂಣಿಯಲ್ಲಿ ಭಾಗವಹಿಸಿದ್ದ ಶ್ರೀಗಳಿಗೆ ರಾಮ ಮಂದಿರವನ್ನು ನೋಡುವ ತೀವ್ರ ಆಸೆಯಿತ್ತು. ಆದರೆ ಇನ್ನೇನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದರು.
ಉಡುಪಿಯಿಂದ 120 ಕಿ.ಮೀ ದೂರದ ರಾಮಕುಂಜ ಎನ್ನುವ ಹಳ್ಳಿಯಲ್ಲಿ 1931, ಎಪ್ರಿಲ್ 27 ರಂದು ವೆಂಕಟರಮಣ (ಪೇಜಾವರ ಶ್ರೀಗಳ ಪೂರ್ವಾಶ್ರಮದ ಹೆಸರು) ಜನಿಸಿದ್ದರು. ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (3.12.1938) ವೆಂಕಟರಮಣನಿಗೆ ಎಂಟನೇ ವಯಸ್ಸಿನಲ್ಲಿ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನೀಡಲಾಗಿತ್ತು.












Click it and Unblock the Notifications