ಹರ್ನಿಯಾ ಶಸ್ತ್ರಚಿಕಿತ್ಸೆ ನಂತರ ಕೃಷ್ಣ ಮಠಕ್ಕೆ ಮರಳಿದ ಪೇಜಾವರ ಶ್ರೀ
ಉಡುಪಿ, ಆಗಸ್ಟ್ 23: ಹರ್ನಿಯಾ ಆಪರೇಷನ್ ಗೆ ಒಳಗಾಗಿದ್ದ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಶ್ರೀಕೃಷ್ಣ ಮಠಕ್ಕೆ ಮರಳಿದ್ದಾರೆ. ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಭಾನುವಾರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಶಯನೀ ಏಕಾದಶಿ ವಿಶೇಷ, ಪೇಜಾವರ ಶ್ರೀಗಳಿಂದ ನೃತ್ಯ ಸೇವೆ
ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಶ್ವೇಶತೀರ್ಥರು ಉಡುಪಿ ಕೃಷ್ಣಮಠಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗ ಆರೋಗ್ಯವಾಗಿದ್ದೇನೆ. ಹೆಚ್ಚು ಮಾತನಾಡಬಾರದೆಂದು ವೈದ್ಯರು ಹೇಳಿದ್ದಾರೆ. ವೈದ್ಯರು ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ.
ಒಂದು ತಿಂಗಳಿಂದ ಪೇಜಾವರ ಸ್ವಾಮೀಜಿಗೆ ಹರ್ನಿಯಾ ನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಒಳಪಡಿಸಬೇಕು ಎಂದು ಒತ್ತಡ ಹಾಕಿದ ನಂತರ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದರು.
ಮಣಿಪಾಲ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶ್ರೀಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವೇರಿದ ಸ್ವಾಮೀಜಿ 2 ವರ್ಷಗಳ ಕಾಲ ಮಠದಿಂದ ಹೊರಗೆ ಹೋಗಲು ನಿರ್ಬಂಧವಿದೆ. ಆದ್ದರಿಂದ ಸುಮಾರು 1 ವರ್ಷದಿಂದ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಪೇಜಾವರ ಶ್ರೀಗಳು ಮುಂದೂಡುತ್ತಾ ಬಂದಿದ್ದರು.
ಆದರೆ, ಇತ್ತೀಚೆಗೆ ನೋವು ಹೆಚ್ಚಾಗಿದ್ದ ಕಾರಣ ಅಷ್ಟಮಠದ ಎಲ್ಲಾ ಸ್ವಾಮೀಜಿಗಳ ಜತೆ ಸಮಾಲೋಚನೆ ನಡೆಸಿ, ಪೇಜಾವರ ಶ್ರೀಗಳ ಮನವೊಲಿಸಿದ ಹಿನ್ನಲೆಯಲ್ಲಿ ಈ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆಯನ್ನು ಸೂಚಿಸಿದ್ದರು.
ಪೇಜಾವರ ಶ್ರೀಗಳ ಹಿಂಸಿಸಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲ
ವಿಶ್ವೇಶ ತೀರ್ಥರು ವಿಶ್ರಾಂತಿಯಲ್ಲಿರುವಾಗ ಕಿರಿಯ ಸ್ವಾಮೀಜಿ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಿದ್ದಾರೆ. ಒಟ್ಟಿನಲ್ಲಿ ಹಿರಿಯ ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲಿ. ಮತ್ತೆ ದೈನಂದಿನ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲಿ ಎಂದು ಲಕ್ಷಾಂತರ ಮಂದಿ ಹಾರೈಸುತ್ತಿದ್ದಾರೆ.
ಯಾರ ಬಳಿಯೂ ಮಾತನಾಡದಂತೆ ಹಾಗೂ ವಿಶ್ರಾಂತಿ ಪಡೆಯುವಂತೆ ವೈದ್ಯರು ಸ್ವಾಮೀಜಿಗೆ ಸಲಹೆ ಮಾಡಿರುವುದರಿಂದ ಭಕ್ತರು ಸಹಕರಿಸಬೇಕೆಂದು ಮಠದ ಆಡಳಿತ ಮಂಡಳಿ ಮನವಿ ಮಾಡಿದೆ.