ಉಡುಪಿ : ವಿವಾದದ ನಡುವೆ ಕನಕ ನಡೆಗೆ ಪೇಜಾವರ ಶ್ರೀಗಳಿಂದ ಚಾಲನೆ
ಬಹುವಿವಾದಿತ ಕನಕ ನಡೆಗೆ ಉಡುಪಿ ಪರ್ಯಾಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಭಾನುವಾರ (ಅ 23) ಚಾಲನೆ ನೀಡಿದರು. ಜಿಲ್ಲಾಡಳಿತ ಅನುಮತಿ ನೀಡದ ಹಿನ್ನಲೆಯಲ್ಲಿ ಸಾಂಕೇತವಾಗಿ ಕನಕ ನಡೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಡುಪಿ, ಅ 23: ಬಹುವಿವಾದಿತ ಕನಕ ನಡೆಗೆ ಉಡುಪಿ ಪರ್ಯಾಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಭಾನುವಾರ (ಅ 23) ಚಾಲನೆ ನೀಡಿದರು.
ಉಡುಪಿ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನಲೆಯಲ್ಲಿ ಸಾಂಕೇತವಾಗಿ ಕನಕ ನಡೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಶ್ರೀಕೃಷ್ಣಮಠದ ಕನಕ ಗೋಪುರದ ಎದುರಿನಲ್ಲಿರುವ ಕನಕನ ವಿಗ್ರಹಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಪೇಜಾವರ ಶ್ರೀಗಳು, ಉಡುಪಿ ಅಷ್ಠಮಠದ ಇತರ ಯತಿಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. (ಕನಕ, ಸ್ವಾಭಿಮಾನದ ನಡೆ ಕಾರ್ಯಕ್ರಮಕ್ಕೆ ಬ್ರೇಕ್)

'ಕನಕ ನಡೆ' ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಪೇಜಾವರ ಶ್ರೀಗಳು, ನಾವು ಸರಕಾರದ ಆದೇಶದಂತೆ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದೇವೆ. ಕೃಷ್ಣ ಮಠದ ಒಳಾಂಗಣದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತೆ ಮಾಡಲಿದ್ದಾರೆಂದು ಶ್ರೀಗಳು ಹೇಳಿದ್ದಾರೆ.
ಬಹಿರಂಗ ಮತ್ತು ಅಂತರಂಗ ಸ್ವಚ್ಛತೆ ಎರಡೂ ಪ್ರಮುಖವಾಗಿ ಮುಖ್ಯವಾಗಬೇಕಾಗಿದೆ. ಎಲ್ಲರ ಅಂತರಂಗ, ಮನಸ್ಸು ನಿರ್ಮಲವಾಗಲಿ. ಭಕ್ತರ ಮನಸ್ಸು ಹೇಗೆ ಸ್ವಚ್ಚವಾಗಿರ ಬೇಕೋ ಹಾಗೇ ನಮ್ಮ ಸುತ್ತಮುತ್ತಲಿನ ಪ್ರದೇಶ ಮತ್ತು ಮನೆಗಳು ನಿರ್ಮಲವಾಗಿರಬೇಕು.

ದ್ವೇಷ, ಅಸೂಯೆಗಳು ಮನುಷ್ಯ ಮನುಷ್ಯ ನಡುವೆ ಮನಸ್ತಾಪ ಹುಟ್ಟುಹಾಕುತ್ತದೆ. ಕನಕ ನಡೆ ನಡೆಸಬಾರದು ಎನ್ನುವ ಜಿಲ್ಲಾಡಳಿತದ ಆದೇಶದ ಬಗ್ಗೆ ನಮಗೆ ಬೇಸರವಿದೆ. ಆದರೂ ಕಾನೂನು ಉಲ್ಲಂಘನೆಯಾಗದಂತೆ ಸ್ವಚ್ಚತಾ ಕಾರ್ಯ ನಡೆಯಲಿದೆ ಎಂದು ಪೇಜಾವರ ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಪೇಜಾವರ ಶ್ರೀಗಳ ಜೊತೆ, ಕಾಣಿಯೂರು, ಸೋದೆ, ಶಿರೂರು ಶ್ರೀ, ಬಿಜೆಪಿ ಹಿರಿಯ ನಾಯಕಿ ಪ್ರಮೀಳಾ ನೇಸರ್ಗಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಕ್ರವರ್ತಿ ಸೂಲಿಬೆಲೆ ಮಾರ್ಗದರ್ಶನದಲ್ಲಿ ಯುವ ಬ್ರಿಗೇಡ್ ಸಂಘಟನೆಯ ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. (ಪೇಜಾವರ ಶ್ರೀಗಳಿಗೆ ದಿನೇಶ್ ಅಮಿನ್ ಬಹಿರಂಗ ಪತ್ರ)

ಇದು ದಲಿತರ ವಿರುದ್ದದ ಅಥವಾ ಅವರನ್ನು ಅವಮಾನಿಸುವ ಕಾರ್ಯಕ್ರಮವಲ್ಲ. ಜಿಲ್ಲಾಡಳಿತದ ನಿಷೇಧ ಸರಿಯಲ್ಲ, ಆದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕೃಷ್ಣಮಠದ ಆವರಣದಲ್ಲಿ ಮಾತ್ರ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದೆ. ಇಂದು (ಅ23) ದಲಿತ ಸಹೋದರರ ಜೊತೆ ಭೋಜನ ಮಾಡಲಿದ್ದೇವೆಂದು ಚಕ್ರವರ್ತಿ ಸೂಲಿಬೆಲೆ ಈ ಸಂದರ್ಭದಲ್ಲಿ ಹೇಳಿದರು.
ಶ್ರೀಕೃಷ್ಣಮಠದ ಆಸುಪಾಸಿನ ಬಡಗುಪೇಟೆ, ತೆಂಕುಪೇಟೆ, ಕನಕದಾಸ ರಸ್ತೆ, ವಾದಿರಾಜ ರಸ್ತೆ, ಕಲ್ಸಂಕ ಪಾರ್ಕಿಂಗ್ ಪ್ರದೇಶವನ್ನು ತಲುಪುವ ರಸ್ತೆ, ಅದಮಾರು ಮಠದ ಓಣಿಗಳಲ್ಲಿ 'ಕನಕನಡೆ' ಹೆಸರಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಆಯೋಜಿಸಿತ್ತು. ಆದರೆ ಇದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು.

ಕನಕ ನಡೆ ಕಾರ್ಯಕ್ರಮಕ್ಕೆ ಪ್ರತ್ಯುತ್ತರವಾಗಿ ದಲಿತ ದಮನಿತರ ಸ್ವಾಭಿಮಾನ ವೇದಿಕೆ 'ಸ್ವಾಭಿಮಾನದ ನಡಿಗೆ' ಎನ್ನುವ ಹೆಸರಿನಲ್ಲಿ ಉಡುಪಿಯಲ್ಲೇ ಅಕ್ಟೋಬರ್ 23ರಂದು ಕಾರ್ಯಕ್ರಮ ಆಯೋಜಿಸಿತ್ತು. ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದರಿಂದ ಸರಕಾರ ಎರಡೂ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ.
ಉಡುಪಿ ಜಿಲ್ಲಾಡಳಿತದ ನಿಷೇಧದ ನಡುವೆಯೂ, ಕಲ್ಸಂಕ ಪಾರ್ಕಿಂಗ್ ಪ್ರದೇಶದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು ಎನ್ನುವ ಮಾಹಿತಿಯಿದೆ. (ಚಿತ್ರಕೃಪೆ: ಪ್ರಸನ್ನ ಕೊಡವೂರು)












Click it and Unblock the Notifications