ಉಡುಪಿ ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ
ಉಡುಪಿ, ಡಿಸೆಂಬರ್ 21: ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿರವಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಣಿಪಾಲದ ಕಸ್ತೂರಬಾ (ಕೆಎಂಸಿ) ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶುಕ್ರವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
88 ವರ್ಷದ ವಿಶ್ವೇಶ ತೀರ್ಥ ಸ್ವಾಮೀಜಿ ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಬೆಳಿಗ್ಗೆ 10;30 ಕ್ಕೆ ಶ್ರೀಗಳ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿರುವ ವೈದ್ಯಕೀಯ ಮುಖ್ಯಸ್ಥರು, 'ನಮ್ಮ ವೈದ್ಯರು ಸತತವಾಗಿ ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಪರಿಸ್ಥಿತಿ ಸ್ವಲ್ಪ ಇನ್ನೂ ಗಂಭೀರವಾಗಿದೆ. ಆದರೆ, ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ. ಶ್ರೀಗಳನ್ನು ಕಾಣಲು ಭಕ್ತರು ಕೆಎಂಸಿ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಆದರೆ, 'ಶ್ರೀಗಳನ್ನು ಕಾಣಲು ಯಾರೂ ಆಸ್ಪತ್ರೆಗೆ ಬರಬೇಡಿ, ರೋಗಿಗಳಿಗೆ ತೊಂದರೆ ಆಗುತ್ತೆ. ಶ್ರೀಗಳು ಆರೋಗ್ಯವಾಗಿದ್ದಾರೆ' ಎಂದು ಶ್ರೀಗಳ ಆಪ್ತ ಕಾರ್ಯದರ್ಶಿ ಭಕ್ತರಲ್ಲಿ ಕೋರಿಕೊಂಡಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ; ಕೆಎಂಸಿಯ ಆರು ತಜ್ಞ ವೈದ್ಯರಿಂದ ಚಿಕಿತ್ಸೆ
ಉಸಿರಾಟದ ತೊಂದರೆಯಿಂದಾಗಿ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಕೂಡಲೇ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಸದ್ಯ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ತಮ್ಮ ಇಳಿವಯಸ್ಸಿನಲ್ಲಿಯೂ ಪೇಜಾವರ ಶ್ರೀಗಳು ನಿರಂತರ ಪ್ರವಾಸದಲ್ಲಿದ್ದರು. ಉತ್ತರ ಭಾರತ, ತಿರುಪತಿ ಮತ್ತು ಚೆನ್ನೈಗೆ ಭೇಟಿ ನೀಡಿದ್ದರು. 2017ರಲ್ಲಿ ಪೇಜಾವರ ಶ್ರೀಗಳು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ತಿಂಗಳ ಬಳಿಕ ಅವರಿಗೆ ಪುನಃ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ನೀಡಲಾಗಿತ್ತು.