ಉಡುಪಿಯ ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರ ಪೂಜೆ ಆರಂಭ
ಉಡುಪಿ, ಅಕ್ಟೋಬರ್ 27: ಶರನ್ನವರಾತ್ರಿಯ ವಿಶೇಷ ಪೂಜೆ ಪುನಸ್ಕಾರಗಳ ನಂತರ ಅಶ್ವಯುಜ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವಾದ ಇಂದು ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರ ಪೂಜೆಯನ್ನು ನೆರವೇರಿಸಲಾಯಿತು. ಪರ್ಯಾಯ ಮಠಾಧೀಶ ಈಶಪ್ರಿಯ ತೀರ್ಥ ಶ್ರೀಗಳು ಪೂಜೆಯನ್ನು ನೆರವೇರಿಸಿದರು.
ಆಷಾಢ ಶುದ್ಧ ಏಕಾದಶಿಯಿಂದ ಭಗವಂತ ಯೋಗನಿದ್ರೆಯಲ್ಲಿದ್ದಾನೆ ಎಂಬುದು ನಂಬಿಕೆ. ಹೀಗಾಗಿ ಬೆಳಿಗ್ಗೆ ವಾದ್ಯಘೋಷದೊಂದಿಗೆ ಪಶ್ಚಿಮಜಾಗರ ಪೂಜೆ ನಡೆಯುತ್ತದೆ. ಈ ಪೂಜೆಯಿಂದ ಯೋಗನಿದ್ರೆಯಲ್ಲಿರುವ ಭಗವಂತ ಎಚ್ಚರಗೊಳ್ಳುತ್ತಾನೆ ಎಂಬುದು ಪ್ರತೀತಿ.

ಈ ಸಮಯದಲ್ಲಿ ಕೃಷ್ಣನಿಗೆ ನಿತ್ಯ ಹದಿನಾಲ್ಕು ಬಗೆಯ ಪೂಜೆಗಳನ್ನು ಮಾಡಲಾಗುತ್ತದೆ. ಪರ್ಯಾಯ ಮಠಾಧೀಶರು ಈ ಪೂಜೆಗಳನ್ನು ನೆರವೇರಿಸುವುದು ಹಿಂದಿನಿಂದ ನಡೆದುಬಂದಿರುವ ಪದ್ಧತಿ. ಈ ಹದಿನಾಲ್ಕು ಪೂಜೆಗಳ ಜೊತೆಗೆ ಇಂದಿನಿಂದ ಪಶ್ಚಿಮ ಜಾಗರ ಪೂಜೆಯೂ ಕೃಷ್ಣನಿಗೆ ಸಲ್ಲಲಿದೆ. ಇನ್ನು ಒಂದು ತಿಂಗಳು, ಅಂದರೆ ಉತ್ಥಾನ ದ್ವಾದಶಿ ತನಕವೂ ಈ ಪೂಜೆಯನ್ನು ಮಠದಲ್ಲಿ ನೆರವೇರಿಸಲಾಗುವುದು. ಪ್ರತಿದಿನ ಬೆಳಿಗ್ಗೆ ನಿರ್ಮಾಲ್ಯ, ಉಷಃಕಾಲ, ಅಕ್ಷಯಪಾತ್ರೆ ಪೂಜೆ, ಪಂಚಾಮೃತ ಅಭಿಷೇಕದ ಬಳಿಕ ಪಶ್ಚಿಮ ಜಾಗರ ಪೂಜೆಯನ್ನು ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.












Click it and Unblock the Notifications