ಉಡುಪಿ; ಒಂದೇ ದಿನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬದಲಾವಣೆ
ಉಡುಪಿ, ಜನವರಿ 02 : ಒಂದೇ ದಿನದಲ್ಲಿ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಂಬುದು ವಿಶೇಷವಾಗಿದೆ.
ಉಡುಪಿ ಎಸ್ಪಿಯಾಗಿ ಎನ್. ವಿಷ್ಣುವರ್ಧನ್ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 31 ಮತ್ತು ಜನವರಿ 1ರಂದು ಜಿಲ್ಲೆಗೆ ಇಬ್ಬರು ಎಸ್ಪಿಗಳನ್ನು ನೇಮಕ ಮಾಡಿದ್ದು ಚರ್ಚೆಗೆ ಕಾರಣವಾಗಿದೆ. ಒಂದೇ ದಿನದಲ್ಲಿ ಎಸ್ಪಿ ಬದಲಾವಣೆ ಮಾಡಲು ಕಾರಣ ಏನು? ಎಂಬುದು ನಿಗೂಢವಾಗಿದೆ.
2015ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎನ್. ವಿಷ್ಣುವರ್ಧನ್ ಬೆಂಗಳೂರು ನಗರ (ಡಿಸಿಪಿ)ಯಾಗಿದ್ದರು. ಅವರನ್ನು ಉಡುಪಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ ಹಿಂದೆ ಅವರು ಕಾರ್ಯ ನಿರ್ವಹಣೆ ಮಾಡಿದ್ದರು.

ಒಂದೇ ದಿನದಲ್ಲಿ ಎಸ್ಪಿ ಬದಲು: ಕರ್ನಾಟಕ ಸರ್ಕಾರ 2019ರ ಡಿಸೆಂಬರ್ 31ರಂದು ಉಡುಪಿ ಜಿಲ್ಲಾ ಎಸ್ಪಿಯಾಗಿದ್ದ ನಿಶಾ ಜೇಮ್ಸ್ರನ್ನು ಆಂತರಿಕ ಭದ್ರತಾ ವಿಭಾಗ (ಬೆಂಗಳೂರು) ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಿತ್ತು.
ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಅಕ್ಷಯ್ ಮಚ್ಚೀಂದ್ರರನ್ನು ಉಡುಪಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಬುಧವಾರ ಉಡುಪಿಗೆ ಅವರು ಅಧಿಕಾರ ಸ್ವೀಕರಿಸಲು ಆಗಮಿಸಿದ್ದರು.
ಆದರೆ, ಸರ್ಕಾರ ತನ್ನ ಆದೇಶವನ್ನು ಮಾರ್ಪಾಡು ಮಾಡಿದೆ. ಕಾರ್ಕಳದ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕರಾಗಿ ಅಕ್ಷಯ್ ಮಚ್ಚೀಂದ್ರರನ್ನು ವರ್ಗಾವಣೆ ಮಾಡಿದೆ. ಎನ್. ವಿಷ್ಣುವರ್ಧನ್ರನ್ನು ನೂತನ ಎಸ್ಪಿಯಾಗಿ ನೇಮಿಸಲಾಗಿದೆ.
ನಿಶಾ ಜೇಮ್ಸ್ 2019ರ ಫೆಬ್ರವರಿಯಲ್ಲಿ ಉಡುಪಿ ಎಸ್ಪಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಒಂದು ವರ್ಷ ಕಳೆಯುವ ಮೊದಲೇ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.











Click it and Unblock the Notifications