ಕುಂದಾಪುರಕ್ಕೂ ವ್ಯಾಪಿಸಿದ ಧರ್ಮ ದಂಗಲ್: ಹಲವು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ
ಉಡುಪಿ, ಡಿಸೆಂಬರ್ 7: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗಿದೆ. ಹಿಜಾಬ್ನಿಂದ ಆರಂಭವಾಗಿದ್ದ ಜಟಾಪಟಿ ಕೊಂಚ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಜಾತ್ರೆ ಉತ್ಸವ ಆರಂಭವಾಗುತ್ತಿದ್ದಂತೆ ಮುಸ್ಲಿಂಮರ ವ್ಯಾಪಾರ ನಿರಾಕರಣೆಗೆ ಕರೆ ನೀಡಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಹೋರಾಟದ ನಂತರ ಧರ್ಮ ದಂಗಲ್ ಆರಂಭವಾಗಿತ್ತು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಅಸಹಕಾರ ಧೋರಣೆ ಕಳೆದ ವರ್ಷ ನಡೆದಿತ್ತು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ
ಎರಡು ಮೂರು ತಿಂಗಳ ಜಟಾಪಟಿಯ ನಂತರ ಕೆಲವು ಉತ್ಸವ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳು ವ್ಯವಹಾರ ನಡೆಸಿದ್ದರು. ಆದರೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಳಿಕ ಇದೀಗ ಮತ್ತೆ ಧರ್ಮ ದಂಗಲ್ ಆರಂಭವಾಗಿದೆ.
ಉರುಸ್ ಕಾರ್ಯಕ್ರಮದಲ್ಲಿ ಹಿಂದೂ ವ್ಯಾಪಾರಿಗಳಿಗೆ ನಿಷೇಧ
ಕುಂದಾಪುರದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ನಡೆಯುವ ಜಾತ್ರೆ ಮತ್ತು ಉತ್ಸವದ ವ್ಯಾಪಾರದಲ್ಲಿ ಈ ಬಾರಿ ಮುಸ್ಲಿಂ ವ್ಯಾಪಾರಿಗಳಿಗೆ ತಡೆಯೊಡ್ಡಲಾಗಿದೆ. ಇದರಿಂದ ಕೋಟ್ಯಾಂತರ ರೂಪಾಯಿ ವ್ಯವಹಾರ ವ್ಯಾಪಾರಿಗಳಿಗೆ ಕೈ ತಪ್ಪಲಿದೆ. ಇನ್ನು ಮುಸ್ಲಿಂ ಧರ್ಮದ ಉರುಸ್ ಕಾರ್ಯಕ್ರಮದಲ್ಲೂ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ನಾವೂ ಅದೇ ನಿಯಮಗಳನ್ನು ನಮ್ಮ ದೇವಸ್ಥಾನದಲ್ಲಿ ಪಾಲಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ನ ಕುಂದಾಪುರ ಭಾಗದ ಮುಖಂಡ ಸುರೇಂದ್ರ ಕೋಟೇಶ್ವರ ಹೇಳಿದ್ದಾರೆ.
ಉಪ್ಪುಂದ ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ
ಮಂಗಳೂರಿನ ನಾಗುರಿಯಲ್ಲಿ ಶಂಕಿತ ಉಗ್ರ ಶಾರಿಕ್ ಆಟೋದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯಾಗಿದ್ದಾನೆ. ಅದೃಷ್ಟವಶಾತ್ ಸಂಭವಿಸುತ್ತಿದ್ದ ದೊಡ್ಡ ಅನಾಹುತ ತಪ್ಪಿತ್ತು. ಈ ಬೆಳವಣಿಗೆಯಿಂದ ಕರಾವಳಿಯಲ್ಲಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಬಿರುಕು ಜಾಸ್ತಿಯಾಗಿದೆ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವ್ಯಾಪಾರ ನಿರಾಕರಣೆ, ಚಳುವಳಿ ಮಾದರಿಯಲ್ಲಿ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ ಭಜರಂಗದಳ ಹಿಂದೂ ಜಾಗರಣ ವೇದಿಕೆ ಶ್ರೀರಾಮ ಸೇನೆ ತಮ್ಮ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಪತ್ರ ಮುಖೇನ ಮನವಿ ಸಲ್ಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಮೂಲಕ ಸಂದೇಶಗಳನ್ನು ಹರಿ ಬಿಡಲಾಗುತ್ತಿದೆ. ಎರಡು ದಿನಗಳ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಆಡಳಿತ ಮಂಡಳಿಯೇ ಈ ತೀರ್ಮಾನವನ್ನು ಮಾಡಿದೆ.
ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಸಂಘಟನೆಗಳ ಬಹಿಷ್ಕಾರ
ಕಳೆದ ವರ್ಷ ಕರಾವಳಿಯಲ್ಲಿ ಆರಂಭವಾಗಿದ್ದ ಧರ್ಮ ದಂಗಲ್ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಷಷ್ಠಿಗೆ ತಟ್ಟಿತ್ತು. ಈ ಹಿನ್ನಲೆಯಲ್ಲಿ ಚಂಪಾಷಷ್ಠಿಯ ಜಾತ್ರಾ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂದು ಹಿಂದೂ ಸಂಘಟನೆಗಳು ಬ್ಯಾನರ್ ಅಳವಡಿಸಿದ್ದರು. ದೆಹಲಿ ಶ್ರದ್ಧಾ ಹತ್ಯೆ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಸೇರಿದಂತೆ ಹಲವು ಪ್ರಕರಣದಲ್ಲಿ ಮುಸ್ಲಿಮರೇ ತೊಡಗಿಕೊಂಡು ರಾಷ್ಟ್ರದಲ್ಲಿ ಅಭದ್ರತೆ ಕಾರಣರಾಗಿದ್ದಾರೆ. ಹೀಗಾಗಿ ಅವರಿಗೆ ಕುಕ್ಕೆಯಲ್ಲಿ ವ್ಯಾಪಾರ ಮಾಡುವ ಅವಶ್ಯಕತೆ ಇಲ್ಲ ಎಂದು ಹಿಂದೂ ಸಂಘಟನೆಗಳು ಬಹಿಷ್ಕಾರ ವಿಧಿಸಿದ್ದರು
ಕಾನೂನು ಕೈಗೆತ್ತಿಕೊಳ್ಳದಂತೆ ಪೊಲೀಸರ ಎಚ್ಚರಿಕೆ
ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳು ಮನವಿ ಕೊಡುತ್ತಿದೆ. ಕಂಬಳ, ದೈವಾರಾಧನೆ, ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ಕೂಗೂ ಜೋರಾಗುತ್ತಿದೆ. ವ್ಯಾಪಾರಕ್ಕೆ ಮುಸ್ಲಿಂ ಧರ್ಮದ ವ್ಯಾಪಾರಿಗಳು ಬಂದರೆ ಅವರಿಗೆ ತೊಂದರೆ ನೀಡುವುದು, ಕಾನೂನು ಕೈಗೆ ತೆಗೆದುಕೊಳ್ಳಲು ಯತ್ನಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಕುಂದಾಪುರ ಪೊಲೀಸರು ಹಿಂದೂ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.