ಮಸೀದಿ ಜಾಗ ವಾಪಸ್ ಪಡೆದ ಸರ್ಕಾರ: ಮುಸ್ಲಿಂ ಸಂಘಟನೆಗಳಿಂದ ತೀವ್ರ ವಿರೋಧ
ಉಡುಪಿ, ಜೂನ್ 28: ಉಡುಪಿ ಸಮೀಪದ ಕೊಡವೂರು ಎಂಬಲ್ಲಿ ಕಲ್ಮತ್ ಮಸೀದಿಗೆ ಈ ಹಿಂದೆ ಮಂಜೂರಾಗಿದ್ದ ಜಾಗವನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದುಕೊಂಡಿದೆ. ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಜಾಗ ವಾಪಸ್ ಪಡೆಯಲಾಗಿದೆ ಎಂದು ಉಡುಪಿ ಶಾಸಕರು ಹೇಳುತ್ತಿದ್ದಾರೆ. ಸರಕಾರದ ಈ ನಿರ್ಧಾರದ ಬಗ್ಗೆ ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. "ಬಿಜೆಪಿ ಸರ್ಕಾರ ಒಂದು ಸಮುದಾಯವನ್ನು ಮೆಚ್ಚಿಸಲು ಮಸೀದಿ ಜಾಗವನ್ನು ವಾಪಸ್ ಪಡೆದಿದೆ. ಹಲವು ವರ್ಷಗಳಿಂದ ಈ ಸ್ಥಳದಲ್ಲಿ ಮಸೀದಿ ಕಾರ್ಯಾಚರಣೆ ಮಾಡುತ್ತಿದ್ದು, ಸರಕಾರ ಹಿಂಪಡೆದದ್ದು ಖಂಡನೀಯ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು,'' ಎಂದು ಪ್ರತಿಭಟನಾನಿರತ ಮುಸ್ಲಿಂ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಜಿಲ್ಲಾ ಮುಸ್ಲಿಂ ಒಕ್ಕೂಟ ಸುದ್ದಿಗೋಷ್ಠಿ ನಡೆಸಿ, "ಸರಕಾರದ ಕ್ರಮವನ್ನು ಖಂಡಿಸಿದೆ. ಉಡುಪಿ ತಾಲೂಕು ಕೊಡವೂರು ಗ್ರಾಮದ ಕಲ್ಮತ್ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಲ್ಲಿ ಮಸೀದಿಯ ಹೆಸರು ಕಾನೂನು ಬದ್ಧವಾಗಿ ನೋಂದಣಿಗೊಂಡಿದೆ. ಅದನ್ನು ಕಾನೂನುಬಾಹಿರವಾಗಿ ಕಂದಾಯ ಸಚಿವ ಆರ್.ಅಶೋಕ್ ತೆರವುಗೊಳಿಸಿ ಆದೇಶ ಹೊರಡಿಸಿರುವುದು ಖಂಡನೀಯ,'' ಎಂದು ಮುಸ್ಲಿಂ ಒಕ್ಕೂಟ ಹೇಳಿದೆ.

ಸೋಮವಾರ ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡರು, ಜಿಲ್ಲಾಧಿಕಾರಿಗಳ ಪತ್ರದ ಆಧಾರದ ಮೇಲೆ ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಏಕಾಏಕಿಯಾಗಿ ಕಂದಾಯ ಸಚಿವ ಆರ್. ಅಶೋಕ್ ಆದೇಶ ಹೊರಡಿಸಿದ್ದಾರೆ. ಸದರಿ ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರವನ್ನು ಯಾವುದೇ ಕಾನೂನು ಪ್ರಕ್ರಿಯೆ ಪೂರೈಸದೆ, ಮಸೀದಿಯ ಹೆಸರನ್ನು ತೆಗೆದು 'ಸರಕಾರ' ಎಂದು ನಮೂದಿಸಲಾಗಿದೆ,'' ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

"ವಕ್ಫ್ ಆಸ್ತಿಯನ್ನು ನೆಲದ ಕಾನೂನಿನ ಪ್ರಕಾರ ರಕ್ಷಿಸಬೇಕಾದ ಜಿಲ್ಲಾಧಿಕಾರಿ, ಶಾಸಕರು ಒಳಗೊಂಡಂತೆ ಉಡುಪಿ ಜಿಲ್ಲಾಡಳಿತವು ಪಕ್ಷಪಾತ ಪೂರ್ಣವಾಗಿ ವರ್ತಿಸಿ ಕಲ್ಮತ್ ಮಸೀದಿಯ ನ್ಯಾಯಬದ್ಧ ಹಕ್ಕಿಗೆ ವಿರುದ್ಧವಾದ ಪ್ರಕ್ರಿಯೆ ನಡೆಸಿದೆ. ಈ ಮೂಲಕ ಕಂದಾಯ ಸಚಿವರ ಮೇಲೆ ಪ್ರಭಾವ ಬೀರಿ ಅನ್ಯಾಯ ಪೂರ್ಣ ನಿರ್ಣಯ ಕೈಗೊಂಡಿದೆ.''

"ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅನ್ಯಾಯ ಧೋರಣೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡಿಸುತ್ತದೆ ಮತ್ತು ಈ ಹಿಂದಿನಂತೆ ನ್ಯಾಯಪೂರ್ಣವಾಗಿ ಮಸೀದಿ ಮತ್ತು ಮಸೀದಿಯ ಶ್ರದ್ಧಾಳುಗಳ ನ್ಯಾಯಪೂರ್ಣ ಹಕ್ಕಿನ ಪುನರ್ ಸ್ಥಾಪನೆಗೆ ಒತ್ತಾಯಿಸುತ್ತದೆ,'' ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದರು.












Click it and Unblock the Notifications