ಉಡುಪಿ: ಕಾಲು ಜಾರಿ ಕೆರೆಗೆ ಬಿದ್ದು ತಾಯಿ, ಪುತ್ರಿಯರಿಬ್ಬರ ಸಾವು
ಉಡುಪಿ, ಮೇ 31: ಕೆರೆಯ ನೀರಿನಲ್ಲಿ ನೆನೆಯಲು ಹಾಕಿದ್ದ ಭತ್ತದ ಬೀಜದ ಚೀಲಗಳನ್ನು ತರಲೆಂದು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ತಾಯಿ ಮತ್ತು ಅವರನ್ನು ರಕ್ಷಿಸಲು ಧಾವಿಸಿದ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಳೂರು ಗ್ರಾಮ ದೇಲಟ್ಟುವಿನಲ್ಲಿ ಈ ಘಟನೆ ನಡೆದಿದೆ.
ದೇಲಟ್ಟುವಿನ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಕೃಷಿಕ ನರಸಿಂಹ ಶೆಟ್ಟಿ ಎನ್ನುವವರ ಪತ್ನಿ ಭಾರತಿ ಶೆಟ್ಟಿ (45) ಹಾಗೂ ಪತ್ರಿಯರಾದ ಪೃಥ್ವಿ ಶೆಟ್ಟಿ (21) ಹಾಗೂ ಪ್ರಜ್ಞಾ ಶೆಟ್ಟಿ (19) ಸಾವನ್ನಪ್ಪಿದವರು.

ಗದ್ದೆಗಳಿಗೆ ಬಿತ್ತನೆ ಮಾಡುವ ಉದ್ದೇಶದಿಂದ 6 ಚೀಲಗಳಲ್ಲಿ ತುಂಬಿಸಿದ್ದ ಭತ್ತದ ಬೀಜಗಳನ್ನು ಮೊಳಕೆ ಮಾಡಲೆಂದು ಮನೆಯ ಸಮೀಪದ ಕೆರೆಯಲ್ಲಿ ನೆನೆಯಲು ಹಾಕಲಾಗಿತ್ತು. ಆದರೆ ಅಕಾಲಿಕ ಸುರಿದ ಮಳೆಯಿಂದಾಗಿ ಬೀಜಗಳಿಗೆ ಹಾನಿಯಾಗುತ್ತದೆ ಎಂದು ಚೀಲಗಳನ್ನು ತೆಗೆಯಲು ಸಂಜೆ ವೇಳೆಗೆ ಭಾರತಿ ತೆರಳಿದ್ದರು. ಇವುಗಳನ್ನು ಮೇಲಕ್ಕೆ ತರುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಇವರನ್ನು ಮೇಲಕ್ಕೆತ್ತಲು ಹೋದ ಇಬ್ಬರು ಪುತ್ರಿಯರೂ ಕೆರೆಗೆ ಬಿದ್ದಿದ್ದಾರೆ.
ತಾಯಿ ಹಾಗೂ ಇಬ್ಬರು ಮಕ್ಕಳು ಕಾಣಿಸದೆ ಇದ್ದುದರಿಂದ ಬಂಧುಗಳು ಹಾಗೂ ನೆರೆಕೆರೆಯವರು ಹುಡುಕಾಟ ಆರಂಭಿಸಿದ್ದಾರೆ. ಮಂಗಳವಾರ ಸಂಜೆ ಸುಮಾರು 7.30 ರ ವೇಳೆಯಲ್ಲಿ ಕೆರೆಯ ದಂಡೆಯ ಮೇಲೆ 5 ಭತ್ತದ ಚೀಲಗಳನ್ನು ಕಂಡು ಅನುಮಾನದಿಂದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೂವರ ಮೃತ ದೇಹಗಳು ಕೆರೆಯಲ್ಲಿ ಪತ್ತೆಯಾಗಿದೆ.
ಪ್ರಥ್ವಿ ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಹಾಗೂ ಪ್ರಜ್ಞಾ ಪ್ರಥಮ ವರ್ಷದ ಪದವಿ ಅಭ್ಯಾಸಕ್ಕಾಗಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜು ಸೇರ್ಪಡೆಯಾಗಿದ್ದರು.












Click it and Unblock the Notifications