ಅಂಬಿ ಅಂತಿಮ ದರ್ಶನದಲ್ಲಿ ನಟಿ ರಮ್ಯಾ ಗೈರಿನ ಬಗ್ಗೆ ಪ್ರತಿಕ್ರಿಯಿಸಿದ ಜಯಮಾಲಾ
ಉಡುಪಿ, ನವೆಂಬರ್.30:ಅಂಬರೀಶ್ ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಬಗ್ಗೆಯೂ ಪ್ರತಿಕ್ರಿಯಿಸಿದರು.
ರಮ್ಯಾ ಅನುಪಸ್ಥಿತಿ ಬಗ್ಗೆ ಕೇಳಿದ ಪ್ರಶ್ನೆಗೆ ಕ್ಷಮಿಸಿ ಎಂದ ಸಚಿವೆ ಜಯಮಾಲ, ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದ್ರೂ ರಮ್ಯಾ ಬರಬಹುದು. ರಮ್ಯಾ ಅವರಿಗೆ ಹುಷಾರಿಲ್ಲ ಅಂತ ಹೇಳ್ಕೊಂಡಿದ್ದಾರೆ. ಬೇರೇನೂ ರಾಜಕೀಯ ಕಾರಣ ಇರಲಿಕ್ಕಿಲ್ಲ. ಹೆಣ್ಮಕ್ಕಳಿಗೆ ಹಲವಾರು ತೊಂದರೆ ಇರುತ್ತದೆ ಎಂದು ತಿಳಿಸಿದರು.

ವಿಷ್ಣುವರ್ಧನ್ ಸ್ಮಾರಕ ವಿವಾದ ಕುರಿತಂತೆ ಮಾತನಾಡಿದ ಜಯಮಾಲಾ, ಭಾರತಿ ಅವರ ಬೇಸರ ಸಹಜ. ವಿಷ್ಣುವರ್ಧನ್ ನಮ್ಮನ್ನಗಲಿ ಒಂಭತ್ತು ವರ್ಷ ಆಗಿದೆ. ಭಾರತಿ ಅವರ ಕುಟುಂಬಕ್ಕೆ ನಾನು ಬೆಲೆ ಕೊಡುತ್ತೇನೆ. ಮೈಸೂರಲ್ಲಿ ಸ್ಮಾರಕ ಆಗಲಿ ಅಂತ ಭಾರತಿ ಕೇಳುತ್ತಿದ್ದಾರೆ. ಮೈಸೂರು ಅಂದ್ರೆ ವಿಷ್ಣುವರ್ಧನ್ ಗೆ ಪ್ರಾಣ. ವಿಷ್ಣು ಆಸೆ ಏನು ಅನ್ನೋದು ಅವರ ಕುಟುಂಬಕ್ಕೆ ಗೊತ್ತಿರುತ್ತೆ. ತನ್ನ ಆಸೆ ಏನು ಅಂತ ವಿಷ್ಣುವರ್ಧನ್ ಕುಟುಂಬದವರಲ್ಲಿ ಹೇಳಿರ್ತಾರೆ. ಸಿಎಂ ಕುಮಾರಸ್ವಾಮಿಯವರು ಕೂಡ ಸಿನಿಮಾ ರಂಗದವರೇ. ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯ ಬರಲ್ಲ ಎಂಬ ಮಾಹಿತಿ ನೀಡಿದರು.
ಸ್ಮಾರಕ ನಿರ್ಮಾಣಕ್ಕೆ ಭೂಮಿಗೆ ಸಂಬಂಧಿಸಿದಂತೆ ಸಣ್ಣ ತಕರಾರು ಇದೆ ಅನಿಸುತ್ತದೆ. ನಿನ್ನೆ ಮುನಿರತ್ನ ಹಾಗೂ ಮಂಜು ಸಂಧಾನ, ಚರ್ಚೆ ಮಾಡಿದ್ದಾರೆ. ಪತ್ರದ ಮುಖಾಂತರ ಭಾರತಿ ಅವರಿಗೂ ತಿಳಿಸಿದ್ದಾರೆ. ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ಎಲ್ಲಿ ಸ್ಮಾರಕ ಮಾಡಲು ಹೋದ್ರೂ ಒಂದು ವಿವಾದ ಆಗ್ತಿದೆ. ಯಾಕೆ ಹೀಗಾಗ್ತಿದೆ ಗೊತ್ತಾಗ್ತಿಲ್ಲ. ನಾವೆಲ್ಲರೂ ಭಾರತಿ ಅವರ ಪರ ನಿಲ್ಲುತ್ತೇವೆ ಎಂದರು.
ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈಗೆ ತೆರಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಹೋಗೋರು ಹೋಗ್ತಾ ಇರ್ತಾರೆ. ಸರ್ಕಾರ ಭದ್ರವಾಗಿರುತ್ತದೆ. ಅಸಮಾಧಾನ ಇದೆ ಅಂತ ಹೇಳೋದೆಲ್ಲಾ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications