ಮಹಾಲಯ ಅಮಾವಾಸ್ಯೆ: ಮಲ್ಪೆ ಕಡಲ ತೀರದಲ್ಲಿ ಸಮುದ್ರ ಸ್ನಾನ, ಪಿಂಡ ಪ್ರದಾನ ವಿಧಿ
ಉಡುಪಿ, ಸೆಪ್ಟೆಂಬರ್ 17: ಈ ವರ್ಷ ಕೊರೊನಾ ಮಹಾಮಾರಿ ನಡುವೆಯೇ ಮಹಾಲಯ ಅಮಾವಾಸ್ಯೆ ಬಂದಿದೆ. ಪ್ರತಿ ವರ್ಷದಂತೆ ಆಸ್ತಿಕರು ಮಲ್ಪೆಯಲ್ಲಿಂದು ಸಾಂಪ್ರದಾಯಿಕ ಸಮುದ್ರ ಸ್ನಾನ ಮಾಡಿ ತಮ್ಮ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ವಿಧಿ ನೆರವೇರಿಸಿದರು.
ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ಇಂದು ಬೆಳಿಗ್ಗಿನಿಂದಲೇ ಸಾವಿರಾರು ಜನರು ಆಗಮಿಸಿ, ಅಗಲಿದ ಆತ್ಮಗಳಿಗೆ ಪಿಂಡ ಪ್ರದಾನ ಮತ್ತು ತರ್ಪಣ ಬಿಟ್ಟು ಹಿರಿಯರಿಗೆ ಗೌರವ ತೋರಿದರು.

ಪಿತೃಪಕ್ಷದಲ್ಲಿ ಮಹಾಲಯ ಅಮಾವಾಸ್ಯೆ ಬಂದಿರುವುದು ಮತ್ತೊಂದು ವಿಶೇಷವಾಗಿದ್ದು, ಹೀಗಾಗಿ ಶ್ರಾದ್ಧ ಮಾಡಲು ಅನಾನುಕೂಲ ಆದವರು ಈ ದಿವಸ ತರ್ಪಣ ಬಿಟ್ಟರೆ ಅಗಲಿದ ಆತ್ಮಗಳಿಗೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಸಮುದ್ರ ತೀರದಲ್ಲಿ ಅಪರಕ್ರಿಯೆ ನಡೆಸಿದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಪಿಂಡ ಪ್ರದಾನದ ನಂತರ ತೀರ್ಥ ಸ್ನಾನ ಮಾಡಬೇಕು ಎಂಬುದು ಸಂಪ್ರದಾಯವಾಗಿದೆ.

ಸಂಪ್ರದಾಯದ ಜೊತೆಗೆ ಸಮುದ್ರ ಸ್ನಾನ ಮಾಡಿದರೆ ಸಕಲ ಪಾಪ ನಿವಾರಣೆಯಾಗುತ್ತದೆ. ಚರ್ಮ ಸಂಬಂಧಿ ವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ಬೆಳಗ್ಗೆಯಿಂದಲೇ ಈ ವಿಧಿಯಲ್ಲಿ ನೂರಾರು ಜನರು ಪಾಲ್ಗೊಂಡರು. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಸಮುದ್ರ ತೀರದಲ್ಲಿ ನೂಕುನುಗ್ಗಲು ಇರಲಿಲ್ಲ.












Click it and Unblock the Notifications