ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು 'ಕುರುಪ್' ಸಿನಿಮಾ ಮಾದರಿಯಲ್ಲೇ ಕೊಲೆ ಮಾಡಿದ ಆರೋಪಿ, ಗೆಳತಿ ಸಾಥ್!
ಉಡುಪಿ, ಜುಲೈ 15: ಸಿನಿಮಾ ಹಲವರ ಬಾಳನ್ನು ಬೆಳಗಿಸಬಹುದು. ಹಲವರ ಬಾಳನ್ನು ವಿನಾಶಕ್ಕೂ ದೂಡಬಹುದು. ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರ ನೋಡಿ ಅದೇಷ್ಟೋ ಸಾವಿರ ಮಂದಿ ಸಜ್ಜನ ಬದುಕಿಗೆ ಕಾಲಿಟ್ಟಿ ಇತಿಹಾಸವಿದೆ.
ಅದೇ ರೀತಿ ಮಲಯಾಳಂನ ಸೂಪರ್ ಹಿಟ್ ಚಿತ್ರ 'ಕುರುಪ್' ನೋಡಿದ ಉಡುಪಿಯ ಇಳಿವಯಸ್ಸಿನ ವೃದ್ಧ ಮಾಡಬಾರದ್ದನ್ನು ಮಾಡಿ ಅಮಾಯಕನ ಜೀವ ತೆಗೆದಿದ್ದಾನೆ. ಸಿನಿಮಾವನ್ನೇ ಸ್ಫೂರ್ತಿ ಪಡೆದು, ಸಿನಿಮಾ ಮಾದರಿಯಲ್ಲೇ ಕಥೆ ಹಣೆದು ಅಮಾಯಕನ ಜೀವ ಬಲಿ ಪಡೆದಿದ್ದಾನೆ. ಸಿನಿಮಾವನ್ನೇ ಹೋಲುವ ಭಯಾನಕ ಮರ್ಡರ್ ಸ್ಟೋರಿ ಉಡುಪಿಯ ಜನರನ್ನು ದಂಗು ಬಡಿಸಿದೆ.
Breaking: ಶಿವಮೊಗ್ಗದಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆ
ಬುಧವಾರ ಬೆಳ್ಳಂಬೆಳಗ್ಗೆ ಉಡುಪಿಯ ಬೈಂದೂರು ಗಡಿ ಭಾಗದಲ್ಲಿ ಸಿಕ್ಕ ಸಂಪೂರ್ಣ ಸುಟ್ಟ ಕಾರು ಮತ್ತು ಅದರೊಳಗೆ ಸುಟ್ಟು ಕರಕಲಾದ ಅಸ್ಥಿಪಂಜರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದೇ ಎಲ್ಲರೂ ಭಾವಿಸಿದ್ದರು.
ಪೊಲೀಸರು ಕೂಡ ಆತ್ಮಹತ್ಯೆಯೇ ಎಂದೇ ಭಾವಿಸಿದ್ದರು. ಆದರೆ ಪೊಲೀಸರ ಮೂರನೇ ಕಣ್ಣು ಈ ಪ್ರಕರಣವನ್ನು ಜಾಲಾಡಿದಾಗ ಥೇಟ್ ಮಲೆಯಾಳಂ 'ಕುರುಪ್' ಸಿನಿಮಾ ಶೈಲಿಯನ್ನೇ ಹೋಲುವ ಕೊಲೆ ಪ್ರಕರಣ ಬಯಲಾಗಿದೆ.
ಬುಧವಾರ ಮುಂಜಾನೆ ಉಡುಪಿ ಜಿಲ್ಲೆಯ ಗಡಿಯ ತಾಲೂಕು ಬೈಂದೂರುನ ನಿರ್ಜನ ಪ್ರದೇಶದಲ್ಲಿ ಸುಟ್ಟ ಕಾರೊಂದು ಅಸ್ಥಿಪಂಜರದೊಂದಿಗೆ ಪತ್ತೆಯಾಗಿ ಜಿಲ್ಲೆ ಬೆಚ್ಚಿಬೀಳುವಂತೆ ಮಾಡಿತ್ತು. ಬೈಂದೂರು ತಾಲೂಕಿ ಶಿರೂರು ಒತ್ತನೆಣೆ ಹೆನ್ ಬೇರು ಎಂಬಲ್ಲಿ ಸೆಡಾನ್ ಕಾರ್ ಸಂಪೂರ್ಣ ಸುಟ್ಟು ಭಸ್ಮವಾಗಿ, ಒಳಗೆ ಅಸ್ಥಿಪಂಜರ ಪತ್ತೆಯಾಗಿತ್ತು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಟ್ಟು ಹೋದ ಕಾರು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ ಎಂಬವರಿಗೆ ಸೇರಿದ್ದು ಎಂದು ಪತ್ತೆಹಚ್ಚಿದ್ದಾರೆ. ಕಾರಿನ ಚೆಸ್ಸಿ ನಂಬರ್ ಮೂಲಕ ಕಾರಿನ ನಂಬರ್ ಪತ್ತೆ ಮಾಡಿ ಪರಿಶೀಲನೆ ನೆಡೆಸಿದಾಗ ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗಿರುವುದು ತಿಳಿದುಬಂದಿದೆ.
ಮಾತ್ರವಲ್ಲದೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಗೆ ಹಣ ನೀಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಕೊಲೆ ಶಂಕೆಯ ಮೇಲೆ ತನಿಖೆ
ತನಿಖೆಯ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹವನ್ನು ಕಾರ್ಕಳದ ಶಿಲ್ಪಾ ಎನ್ನುವ ಮಹಿಳೆಯದ್ದಾಗಿದೆ ಎನ್ನಲಾಗಿತ್ತು. ಆದರೆ ಶಿಲ್ಪ ಅವರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಾರು ಮಾಲೀಕ ಸದಾನಂದ ಶೇರಿಗಾರ್ ಮತ್ತು ಶಿಲ್ಪಾ ಪತಿ ಸ್ನೇಹಿತರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಮೇಲ್ನೋಟಕ್ಕೆ ಕೊಲೆಯಂತೆ ಭಾಸವಾದ ಪ್ರಕರಣವನ್ನು ಬೆನ್ನಟ್ಟಿದ್ದ ಬೈಂದೂರು ಪೊಲೀಸರು ಕಾರಿನ ಮಾಲೀಕನಾದ ಸದಾನಂದ ಶೇರೆಗಾರ್ ಕುಟುಂಬದ ವಿವರ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ತನ್ನನ್ನ ತಾನೇ ಸತ್ತಂತೆ ಬಿಂಬಿಸಲು ಬೇರೊಬ್ಬನ ಕೊಲೆ
ಸದಾನಂದ ಶೇರೆಗಾರ್ 2009ರಲ್ಲಿ ಫೋರ್ಜರಿ ಮಾಡಿದ ಪ್ರಕರಣದ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಕೈಂ ಸ್ಟೋರಿ ಒಂದರಲ್ಲಿ ನೋಡಿದ ಕಥೆಯಂತೆ ತಾನೇ ಸತ್ತುಹೋಗಿರುವ ಸುದ್ದಿ ಬಿಂಬಿಸಲು ಸ್ವಂತ ಕಾರಿನಲ್ಲಿ ತನ್ನದೇ ವ್ಯಕ್ತಿತ್ವ ಹೋಲುವ ವ್ಯಕ್ತಿಯನ್ನು ತನ್ನ ಅನೈತಿಕ ಸಂಬಂಧದ ಗೆಳತಿ ಶಿಲ್ಪಾ ಪೂಜಾರಿ ಮೂಲಕ ಬಲೆಗೆ ಬೀಳಿಸಿದ್ದಾನೆ. ಕಾರ್ಕಳದಲ್ಲಿ ಕಂಠಪೂರ್ತಿ ಕುಡಿಸಿ ವಯಾಗ್ರ ಮಾತ್ರೆ ಎಂದು ನಿದ್ರೆ ಮಾತ್ರ ನೀಡಿ ಕಾರಿನಲ್ಲಿ ಕೂರಿಸಿಕೊಂಡು ಬಂದು ಹೇನ್ಬೇರು ರಸ್ತೆ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಕೊಲೆಗೆ ಮೂವರ ಸಾಥ್
ಪೊಲೀಸ್ ತನಿಖೆಯ ವೇಳೆ ಸದಾನಂದ ಶೇರೆಗಾರ್ (52), ಶಿಲ್ಪಾ (30) ಪ್ರಮುಖ ಆರೋಪಿಗಳಾದರೆ ಸತೀಶ್ ದೇವಾಡಿಗ, ನಿತಿನ್ ದೇವಾಡಿಗ ಕೊಲೆಗೆ ಸಾಥ್ ನೀಡಿರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಮತ್ತು ಹೆಚ್ಚಿನ ವಿವರಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.
ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿ 60 ವರ್ಷ ಹರೆಯದ ಆನಂದ ದೇವಾಡಿಗ ಅಂತಾ ಹೇಳಲಾಗಿದೆ. ಆರೋಪಿ ಸದಾನಂದ ತನ್ನ ಗೆಳತಿ ಶಿಲ್ಪಾ ಮೂಲಕ ಆನಂದ್ ರನ್ನು ಪುಸಲಾಯಿಸಿ, ರಾತ್ರಿ ಕಂಠಪೂರ್ತಿ ಕುಡಿಸಿ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಳು. ನಿದ್ದೆ ಮಾತ್ರೆ ಕೊಟ್ಟು, ನಂತರ ಒಂಭತ್ತು ಲೀಟರ್ ಪೆಟ್ರೋಲ್ ಬಳಸಿ ಬೆಂಕಿಯಿಟ್ಟು ಕೊಲೆ ಮಾಡಲಾಗಿದೆ. ಪ್ರಮುಖ ಆರೋಪಿ ಸದಾನಂದ್ ಮತ್ತು ಶಿಲ್ಪಾ ಊರು ಬಿಟ್ಟು ಪರಾರಿಯಾಗುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪರಾರಿಯಾಗಲು ಸಹಾಯ ಮಾಡಿದ ಸತೀಶ್ ದೇವಾಡಿಗ, ನಿತಿನ್ ದೇವಾಡಿಗರನ್ನೂ ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ಕೊಲೆಗೆ ಸ್ಪೂರ್ತಿ?
ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಕೊಲೆಯಾದ ಆನಂದ್ , ಹೆಣ್ಣು ಹೆಂಡದ ಆಸೆಯಿಂದ ಜೀವ ಕಳೆದುಕೊಂಡಿದ್ದಾರೆ. ಇತ್ತ ಕ್ರೈಂ ಸ್ಟೋರಿ, ಥ್ರಿಲ್ಲಿಂಗ್ ಸಸ್ಪೆನ್ಸ್ ಸಿನಿಮಾ ನೋಡುವ ಹವ್ಯಾಸ ಇಟ್ಟುಕೊಂಡಿದ್ದ ಆರೋಪಿ ಸದಾನಂದ ಶೇರಿಗಾರ್, ಮಲೆಯಾಳಂನ 'ಕುರುಪ್' ಚಿತ್ರ ನೋಡಿ ಇದೇ ಮಾದರಿಯಲ್ಲಿ ಕೊಲೆ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ.
ಮಲೆಯಾಳಂನ 'ಕುರುಪ್' ಚಿತ್ರ ಕಳೆದ ಮೂವತ್ತೈದು ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿ ತೆರೆಗೆ ಬಂದಿತ್ತು. ಇನ್ಶುರೆನ್ಸ್ ಪಾಲಿಸಿ ಪಡೆಯಲು ಎನ್ ಆರ್ ಐ ವ್ಯಕ್ತಿ ತನ್ನ ಕಾರಿನಲ್ಲಿ ತನ್ನ ರೀತಿಯೇ ಹೋಲುವ ವ್ಯಕ್ತಿಯನ್ನು ಕಾರಿನಲ್ಲಿರಿಸಿ ಸುಟ್ಟು ಕೊಲೆ ಮಾಡಿದ್ದ. ಆ ಬಳಿಕ ತನ್ನದೇ ಡೆತ್ ನೋಟ್ ತಯಾರಿಸಿದ್ದ. ಈ ಕಥಾ ಹಂದರ ಚಿತ್ರ ರಸಿಕರ ಮನಸೂರೆಗೊಳಿಸಿತ್ತು.