ಜಮೀರ್ ವಿಚಾರದಲ್ಲಿ ವಿಚಾರಣೆ ಆಗಲಿ, ತಪ್ಪು ಮಾಡಿದರೆ ಶಿಕ್ಷೆಯೂ ಆಗಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ
ಉಡುಪಿ, ಸೆಪ್ಟೆಂಬರ್ 13: ಜಮೀರ್ ವಿಚಾರದಲ್ಲಿ ವಿಚಾರಣೆ ಆಗಲಿ, ತಪ್ಪು ಮಾಡಿದರೆ ಶಿಕ್ಷೆಯೂ ಆಗಲಿ. ಜಮೀರ್ ಬಗ್ಗೆ ಮೀಡಿಯಾ ಟ್ರಯಲ್ ನಡೆಸುವುದು ಸರಿಯಲ್ಲ. ಶಿಕ್ಷೆ ಆಗುವ ಮೊದಲು ಪೊಲಿಟಿಕಲ್ ಟ್ರಯಲ್ ಯಾಕೆ? ಜಮೀರ್ ಬಗ್ಗೆ ಸರಕಾರ, ಮಂತ್ರಿಗಳು ಈಗ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದ್ದಾರೆ.
ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ನಾಯಕರು ತನಿಖಾಧಿಕಾರಿಗಳ ತರ ವರ್ತಿಸುತ್ತಾರೆ. ಮೂರು ದಿನಗಳಲ್ಲಿ ಜಮೀರ್ ಬಂಧನ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ಹೇಳಿದ್ದಾರೆ. ಈ ಹೇಳಿಕೆ ಕೊಡುವ ಅಧಿಕಾರ ರವಿಕುಮಾರ್ ಗೆ ಯಾರು ಕೊಟ್ಟರು? ಎಂಎಲ್ಸಿ ರವಿಕುಮಾರ್ ತನಿಖಾಧಿಕಾರಿಯೇ? ಗೃಹಸಚಿವರೇ? ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. ತನಿಖೆ ಮಾಡಿ ತಕ್ಷಣ ಕ್ರಮ ಕೈಗೊಳ್ಳಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಡ್ರಗ್ಸ್, ಡಿ.ಜೆ ಹಳ್ಳಿ ಪ್ರಕರಣಗಳೇ ಸರಕಾರದ ವೈಫಲ್ಯಕ್ಕೆ ಸಾಕ್ಷಿ. ಡ್ರಗ್ಸ್ ವಿಚಾರ ಮುನ್ನೆಲೆಗೆ ತಂದು ಇತರ ವೈಫಲ್ಯಗಳನ್ನು ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದರು.

ಸಚಿವ ಸಿ.ಟಿ ರವಿ ಒತ್ತಡ ಇದೆ ಎಂದು ಹೇಳುತ್ತಾರೆ. ಯಾರಿಂದ ಒತ್ತಡ ಇದೆ ಅನ್ನುವುದನ್ನು ಹೇಳಿ ರವಿಯವರೇ. ನೀವೇನು ಸಿಎಂ ಅಥವಾ ಹೋಂ ಮಿನಿಸ್ಟರಾ? ರಾಜಕೀಯ ಪ್ರೇರಿತ ಹೇಳಿಕೆ ಕೊಡಬೇಡಿ ಎಂದು ತಾಕೀತು ಮಾಡಿದರು.
ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೂ ರಕ್ಷಣೆ ಕೊಡಲ್ಲ. ತನಿಖೆಗೆ ಕಾಂಗ್ರೆಸ್ ಸಹಕಾರ ಕೊಡುತ್ತೆ, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಎಂದು ಸವಾಲೆಸೆದರು.
ನಟಿ ರಾಗಿಣಿ ನಿಮ್ಮದೇ ಪಕ್ಷದ ಪ್ರಚಾರಕಿ, ಬಿಜೆಪಿ ವರ್ಕರ್. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲಿ. ಪ್ರವಾಹ ವಿಚಾರ ಖರ್ಚು-ವೆಚ್ಚಗಳ ಬಗ್ಗೆ ಅಧಿವೇಶನದಲ್ಲಿ ಶ್ವೇತಪತ್ರ ಕೇಳುತ್ತೇವೆ. ಅಧಿವೇಶನದ ದಿನಗಳನ್ನು ವಿಸ್ತರಿಸುವ ಬಗ್ಗೆ ಒತ್ತಾಯಿಸಿದ್ದೇವೆ ಎಂದರು.

ಕಳೆದ ವರ್ಷದ ಪ್ರವಾಹದ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಬಾರಿಯೂ 10 ಸಾವಿರ ಕೋಟಿ ನಷ್ಟವಾಗಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿಯ 25 ಎಂಪಿಗಳು ಆಯ್ಕೆಯಾಗಿದ್ದಾರೋ? ಇಲ್ಲಿ ಹುಲಿಯಾಗಿದ್ದೀರಿ, ಆದರೆ ದೆಹಲಿಯಲ್ಲಿ ಬೆಕ್ಕಿನಂತೆ ವರ್ತಿಸ್ತೀರಾ? ಪ್ರಧಾನಿ ಮುಂದೆ ನಿಂತು ಮಾತನಾಡುವ ಧೈರ್ಯ ರಾಜ್ಯದ ಸಂಸದರಿಗೆ ಇಲ್ಲ ಎಂದು ಕಿಡಿಕಾರಿದರು.












Click it and Unblock the Notifications