ಪ್ರತಿಷ್ಠೆಗೆ ಕಾರಣವಾದ ಕೊಲ್ಲೂರು ದೇವಾಲಯದ ಅಧ್ಯಕ್ಷರ ಆಯ್ಕೆ
ಉಡುಪಿ, ಏಪ್ರಿಲ್ 26; ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಬಹು ನಿರೀಕ್ಷಿತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಸೋಮವಾರ ನಡೆದಿದೆ. ಸಂಘ ಪರಿವಾರದ ಹಿನ್ನಲೆಯ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾದರು.
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ನಡುವೆ ಮುಸುಕಿನ ಗುದ್ದಾಟದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಆಯ್ಕೆ ನಡೆದು ತಿಂಗಳುಗಳು ಕಳೆದಿದ್ದರೂ, ಅಧ್ಯಕ್ಷರ ಆಯ್ಕೆ ಮಾತ್ರ ಆಗಿರಲಿಲ್ಲ.
ಕೊನೆಗೂ ಸಾಕಷ್ಟು ಗೊಂದಲಗಳ ನಡುವೆ ಸೋಮವಾರ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಆದರೆ, ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಗೈರು ಹಾಜರಾಗಿದ್ದು ,ಶಾಸಕರು ಮತ್ತು ಸಚಿವರ ನಡುವಿನ ಭಿನ್ನಮತ ಮತ್ತೆ ಬಹಿರಂಗಗೊಂಡಿದೆ.

ಚಂದ್ರಶೇಖರ ಶೆಟ್ಟಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬಣದ ಅಭ್ಯರ್ಥಿಯಾಗಿದ್ದೇ ಈ ಎಲ್ಲಾ ಅಸಮಾಧಾನಕ್ಕೆ ಮೂಲ ಕಾರಣ ಎನ್ನಲಾಗಿದೆ. ಹೀಗಾಗಿ ಚಂದ್ರಶೇಖರ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಬಣದಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಅಧ್ಯಕ್ಷರ ಆಯ್ಕೆ ನಡೆದ ಬಳಿಕ ಹೊರ ಬಂದು ಆಕ್ರೋಶ ಹೊರ ಹಾಕಿದ ಶಾಸಕರ ಬಣದವರು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ ಎಂದರು. ಈ ಹಂತದಲ್ಲಿ ಬೆಂಬಲಿಗರು ಕೈ ಕೈ ಮಿಲಾಯಿಸಲು ಹೋದ ಪ್ರಸಂಗವೂ ನಡೆದಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಮುಂದೆ ನಡೆಯಬಹುದಾದ ಸಂಘರ್ಷವನ್ನು ತಪ್ಪಿಸಿದರು.












Click it and Unblock the Notifications