ಉಡುಪಿಯಿಂದ ಉತ್ತರ ಪ್ರದೇಶಕ್ಕೆ ವಿಶೇಷ ರೈಲಿಗಾಗಿ ಪತ್ರ
ಉಡುಪಿ, ಮೇ 28 : ಕರ್ನಾಟಕದ ಉಡುಪಿಯಿಂದ ಉತ್ತರ ಪ್ರದೇಶಕ್ಕೆ ವಿಶೇಷ ರೈಲನ್ನು ಓಡಿಸಬೇಕು ಎಂದು ಕರ್ನಾಟಕ ಸರ್ಕಾರ ಕೊಂಕಣ ರೈಲ್ವೆಗೆ ಪತ್ರವನ್ನು ಬರೆದಿದೆ. ಲಾಕ್ ಡೌನ್ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಈ ರೈಲಿನ ಮೂಲಕ ತವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.
ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಗುರುವಾರ ಕೊಂಕಣ ರೈಲ್ವೆಗೆ ಈ ಕುರಿತು ಪತ್ರ ಬರೆದಿದ್ದಾರೆ. ಮೇ 30ರಂದು ಉಡುಪಿಯಿಂದ ಉತ್ತರ ಪ್ರದೇಶದ ಗೋರಖ್ಪುರಕ್ಕೆ ರೈಲು ಓಡಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಪತ್ರದ ಪ್ರತಿಯನ್ನು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಕಳಿಸಲಾಗಿದೆ. ತಮ್ಮ-ತಮ್ಮ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಇದ್ದರೆ ಅವರು ರೈಲಿನಲ್ಲಿ ಪ್ರಯಾಣ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

ಕರ್ನಾಟಕ ಸರ್ಕಾರ ಬೆಂಗಳೂರು ನಗರದಿಂದ ವಿವಿಧ ರಾಜ್ಯಗಳಿಗೆ ಈಗಾಗಲೇ ರೈಲುಗಳನ್ನು ಓಡಿಸಿದೆ. ಈಗ ಮೇ 30ರದು ಉಡುಪಿಯಿಂದ ಲಕ್ನೋ ಮೂಲಕ ಗೋರಖ್ಪುರಕ್ಕೆ ವಿಶೇಷ ರೈಲು ಓಡಿಸಬೇಕು ಎಂದು ಕೊಂಕಣ ರೈಲ್ವೆಗೆ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರ ರೈಲು ಓಡಿಸಲು ತಗಲುವ ವೆಚ್ಚವನ್ನು ಭರಿಸಲು ಸಿದ್ಧವಿದೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ. ರೈಲು ಓಡಿಸುವ ಬಗ್ಗೆ ಕೊಂಕಣ ರೈಲ್ವೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಲಾಕ್ ಡೌನ್ ಪರಿಣಾಮ ವಿವಿಧ ರಾಜ್ಯದಲ್ಲಿ ಸಿಲುಕಿದ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಲು ಭಾರತೀಯ ರೈಲ್ವೆ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇದಕ್ಕೆ ತಗಲುವ ಶೇ 85ಷ್ಟು ಖರ್ಚನ್ನು ಕೇಂದ್ರ ಸರ್ಕಾರ ಶೇ 15ರಷ್ಟು ಖರ್ಚನ್ನು ರಾಜ್ಯ ಸರ್ಕಾರ ಭರಿಸಲಿದೆ.












Click it and Unblock the Notifications