ರಾಜ್ಯದ ಖಾಸಗಿ ದೇವಸ್ಥಾನಗಳನ್ನೂ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಸರ್ಕಾರ: ಕೋಟಾ
ಉಡುಪಿ, ಫೆಬ್ರವರಿ.08: ರಾಜ್ಯಲ್ಲಿರುವ ಖಾಸಗಿ ಒಡೆತನದ ದೇವಸ್ಥಾನ ಮತ್ತು ಟ್ರಸ್ಟ್ ಗಳನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಉದ್ದೇಶ ಕರ್ನಾಟಕ ಸರ್ಕಾರಕ್ಕಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರವು 2011ರ ಧಾರ್ಮಿಕ ದತ್ತಿ ಕಾಯ್ದೆ ಅಡಿಯಲ್ಲಿ ಖಾಸಗಿ ದೇವಸ್ಥಾನಗಳ ನೋಂದಣಿ ಮಾಡಿಕೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದ್ದು, ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ವದಂತಿ ಹೆಚ್ಚಿದ ಹಿನ್ನೆಲೆ ಸಚಿವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಕೊರೊನಾಕ್ಕೆ ಕಂಗೆಟ್ಟ ದೇವರುಗಳು: ಆನ್ಲೈನ್ನಲ್ಲೇ ದರ್ಶನ ನೀಡಲು ತಯಾರಿ!
2015ರಲ್ಲಿ ಖಾಸಗಿ ಆಡಳಿತದಲ್ಲಿರುವ ದೇವಸ್ಥಾನಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದ್ದು, ಪ್ರತಿವರ್ಷ ಮರುನೋಂದಣಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿತ್ತು. ಆದರೆ, ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಪ್ರತಿವರ್ಷ ನೋಂದಣಿ ಬಗ್ಗೆ ಜ್ಞಾಪಿಸುವುದನ್ನು ತಡೆ ಹಿಡಿಯಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಸಾಮೂಹಿಕ ಮದುವೆಗೆ ಮುಹೂರ್ತ:
ರಾಜ್ಯದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಸಾಮೂಹಿಕ ವಿವಾಹವನ್ನು ನಡೆಸಲಾಗುತ್ತದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲೇ ಸಾಮೂಹಿಕ ವಿವಾಹಕ್ಕೆ ಈಗಾಗಲೇ 1500 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮುಂದಿನ ಮೂರು ತಿಂಗಳಿನಲ್ಲಿ ಸಾಮೂಹಿಕ ಮದುವೆಗೆ ಮುಹೂರ್ತವನ್ನು ನಿಗದಿಪಡಿಸಲಾಗುತ್ತಿದ್ದು, ಅಂದುಕೊಂಡಂತೆ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಮಾರ್ಚ್ ನಲ್ಲಿ 5, ಏಪ್ರಿಲ್ 6 ಮತ್ತು ಮೇ ತಿಂಗಳಿನಲ್ಲಿ 6 ಮುಹೂರ್ತಗಳಲ್ಲಿ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.