ಕಾಪು: ಸೊರಕೆ ವಿರುದ್ಧ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿ ಯಾರು?
ಉಡುಪಿ, ಜನವರಿ 22: ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮಕ್ಕೆ ತೆರೆಬಿದ್ದಿದೆ. ಇನ್ನೇನಿದ್ದರೂ ಕೃಷ್ಣ ನಾಡಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯದ್ದೇ ಲೆಕ್ಕಾಚಾರ.
ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕಾಪು ಕೂಡಾ ಒಂದು. ಕಡಲ ತಡಿಯಲ್ಲಿ ಸುಂದರ ದೀಪ ಸ್ತಂಭ ಹೊಂದಿರುವ ಕ್ಷೇತ್ರ ಕಾಪು; ಹಿಂದಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಯ ಕ್ಷೇತ್ರವಿದು.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲಾಲಾಜಿ ಮೆಂಡನ್ ಕೇವಲ 2 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಕ್ಷೇತ್ರದಲ್ಲಿ ಆರಿಸಿ ಬಂದ ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆ ನಗರಾಬಿವೃದ್ಧಿ ಸಚಿವರೂ ಆಗಿದ್ದರು. ಬಳಿಕ ತಮ್ಮ ಸಚಿವ ಸ್ಥಾನವನ್ನು ಅವರು ಕಳೆದುಕೊಳ್ಳಬೇಕಾಯಿತು.

ಇಲ್ಲಿ ಕಾಂಗ್ರೆಸ್ ನಿಂದ ಈ ಬಾರಿ ಮತ್ತೆ ಸೊರಕೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ ಬಿಜೆಪಿಯಿಂದ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಬಾಕಿ ಉಳಿದಿದೆ.
ಜಾತಿವಾರು ಲೆಕ್ಕಾಚಾರ ನೋಡಿದರೆ ಬಿಲ್ಲವ, ಬಂಟರು ಇಲ್ಲಿ ಸಮಬಲದಲ್ಲಿದ್ದಾರೆ. ಮೊಗವೀರರು ನಂತರ ಸ್ಥಾನದಲ್ಲಿದ್ದರೆ. ಈ ಮೂವರ ಮತಗಳೇ ಇಲ್ಲಿ ನಿರ್ಣಾಯಕವಾಗಿದೆ. ಇನ್ನು ಅಲ್ಪಸಂಖ್ಯಾತರು ಜಿಲ್ಲೆಯಲ್ಲೇ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರ ಕಾಪು ಆಗಿದ್ದು ಅವರ ಮತಗಳೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.
ಬಿಜೆಪಿ ಪಕ್ಷದಲ್ಲಿ ಈ ಬಾರಿ ಶ್ರೀ ರಾಮುಲು ಪರಮಾಪ್ತ ಸುರೇಶ್ ಶೆಟ್ಟಿ ಗುರ್ಮೆ ಮತ್ತು ಮೀನುಗಾರ ಮುಖಂಡ ಯಶ್ ಪಾಲ್ ಸುವರ್ಣ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಆದರೆ ಬಿಜೆಪಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತವರನ್ನು ಪರಿಗಣಿಸುವ ತಂತ್ರಕ್ಕೆ ಮೊರೆ ಹೋಗಿರುವುದರಿಂದ ಮತ್ತೆ ಲಾಲಾಜಿ ಮೆಂಡನ್ ಟಿಕೆಟ್ ಗಿಟ್ಟಿಸುವ ಸಾಧ್ಯತೆ ಇದೆ. ಈ ನಡುವೆ ಜಯಪ್ರಕಾಶ ಹೆಗ್ಡೆ ಅವರ ಹೆಸರು ಅಕಾಂಕ್ಷಿಗಳ ಪಟ್ಟಿಯಲ್ಲಿ ಹೊಸದಾಗಿ ಸ್ಥಾನ ಪಡೆದುಕೊಂಡಿದೆ.
ಈ ಬಾರಿ ಮತ್ತೆ ವಿನಯ್ ಕುಮಾರ್ ಸೊರಕೆ ಗೆಲುವಿನ ನಗೆ ಬೀರ್ತಾರಾ ಅಥವಾ ಕ್ಷೇತ್ರ ಬಿಜೆಪಿ ಪಾಲಾಗುತ್ತಾ ಅನ್ನುವುದಕ್ಕೆ ಕಾದು ನೋಡಬೇಕಿದೆ.












Click it and Unblock the Notifications