ಬಟ್ಟೆ, ಒಳಉಡುಪು ಕದಿಯುವ ಆಸಾಮಿಯಿಂದ ವಂಡ್ಸೆ ಗ್ರಾಮಸ್ಥರು ಕಂಗಾಲು
ಕುಂದಾಪುರ (ಉಡುಪಿ ಜಿಲ್ಲೆ), ಜುಲೈ 17: ಈ ಊರಿನ ಜನ ಮಧ್ಯಾಹ್ನ ಆಗುತ್ತಿದ್ದಂತೆ ಆತಂಕಕ್ಕೆ ಒಳಗಾಗುತ್ತಾರೆ. ಜೊತೆಗೆ ಎಚ್ಚರಿಕೆ ತೆಗೆದುಕೊಳ್ಳುವುದಂತೂ ತಪ್ಪಿದ್ದಲ್ಲ. ಮನೆಯ ಹೊರಗೆ ಹಾಕಿದ ಒಳ ಉಡುಪುಗಳು ಇದ್ದಕ್ಕಿದ್ದಂತೆ ಮಾಯವಾಗುತ್ತವೆ. ಇಂಥ ವಿಲಕ್ಷಣ ಘಟನೆಗಳು ನಡೆಯುತ್ತಿರುವುದು ಕುಂದಾಪುರ ತಾಲೂಕಿನ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ವಂಡ್ಸೆಯಲ್ಲಿ.
ಒಂದೂವರೆ ತಿಂಗಳುಗಳಿಂದ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಕಡೆ ಇಂತಹ ಪ್ರಕರಣಗಳು ನಡೆದಿವೆ. ಹಾಡಹಗಲೇ ಈ ಕೃತ್ಯ ನಡೆಸುವ ವಿಕೃತ ಆಸಾಮಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಹೆಂಚು ತೆಗೆದು ಒಳನುಗ್ಗಿ ಕಪಾಟಿನಲ್ಲಿರುವ ಬಟ್ಟೆ, ಒಳ ಉಡುಪುಗಳನ್ನು ಕದ್ದೊಯ್ಯುತ್ತಿರುವುದು ಕೂಡ ಆಗುತ್ತಿದೆ.
ಗಮನ ಬೇರೆಡೆ ಸೆಳೆದು 'ಮಲಬಾರ್ ಗೋಲ್ಡ್' ನಲ್ಲಿ ಚಿನ್ನ ಲಪಟಾಯಿಸಿದ ಚೋರ
ದಿನೇ ದಿನೇ ಇಂಥ ಹಾವಳಿ ಹೆಚ್ಚಾಗಿದ್ದರಿಂದ ಕೊನೆಗೆ ಜನರು ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಒಳ ಉಡುಪುಗಳನ್ನು ಕದಿಯುತ್ತಿರುವವರು ಯಾರು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಾರೂ ಇಲ್ಲದ ಮನೆಯನ್ನು ಗುರಿ ಮಾಡಿಕೊಂಡು, ಈತ ಮಧ್ಯಾಹ್ನದ ವೇಳೆಗೆ ಒಳಗೆ ನುಗ್ಗಲಾಗುತ್ತದೆ.
ಆ ನಂತರ ಕಪಾಟಿನಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ, ತನಗೆ ಬೇಕಾದ ಉಡುಪು ಕದ್ದು, ಬಳಿಕ ಅಲ್ಲಿಂದ ಪರಾರಿಯಾಗುವುದು ಮಾಮೂಲಾಗಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಕಳವು ಪ್ರಕರಣ ನಡೆಯುತ್ತಿದ್ದು, ಈ ಕೃತ್ಯವನ್ನು ಒಬ್ಬ ವ್ಯಕ್ತಿಯೇ ನಡೆಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇನ್ನು ಮನೆಯೊಂದರಲ್ಲಿ ಇಪ್ಪತ್ತು ಸಾವಿರ ರುಪಾಯಿ ಕಳವು ಮಾಡಿದ ಬಗ್ಗೆಯೂ ದೂರಲಾಗಿದೆ. ಈ ಹಾವಳಿಯಿಂದ ಬೇಸತ್ತ ಜನರು ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಊರಿನವರು, ಆದಷ್ಟು ಬೇಗ ಈ ಕೃತ್ಯದ ಹಿಂದಿರುವ ವ್ಯಕ್ತಿ ಬಂಧನಕ್ಕೆ ಒತ್ತಾಯಿಸಿದ್ದಾರೆ.