ಡಿಕೆಶಿ ಪ್ರಭಾವ ಏನಿದ್ದರೂ ಕನಕಪುರದಲ್ಲಷ್ಟೆ, ರಾಜ್ಯದಲ್ಲಲ್ಲ; ಶೋಭಾ ಕರಂದ್ಲಾಜೆ
Recommended Video
ಉಡುಪಿ, ಅಕ್ಟೋಬರ್ 30: "ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಅನ್ನು ಬ್ಲಾಕ್ ಮೇಲ್ ಮಾಡಿ ವಿಪಕ್ಷದ ನಾಯಕರಾಗಿದ್ದಾರೆ" ಎಂದು ಸಿದ್ದರಾಮಯ್ಯ ಅವರ ಬಿಜೆಪಿ- ಜೆಡಿಎಸ್ ಒಳಒಪ್ಪಂದದ ಕುರಿತ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಸಿಡುಕಿದ್ದಾರೆ.
ಇಂದು ಉಡುಪಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ ಮೇಲೆ ಸಿದ್ದರಾಮಯ್ಯಗೆ ಯಾವುದೇ ಹಿಡಿತ ಇಲ್ಲ, ಕಾಂಗ್ರೆಸ್ ನಲ್ಲೇ ಅನೇಕ ಬಣಗಳಾಗಿವೆ. ಸಿದ್ದರಾಮಯ್ಯ ಬಣ, ಜೆಡಿಎಸ್ ನಿಂದ ಬಂದವರ ಬಣ, ಪರಮೇಶ್ವರ್ ಬಣ, ಡಿಕೆಶಿ ಬಣ ಹೀಗೆ ಬೇರೆ ಬೇರೆ ಬಣಗಳಿವೆ. ಬಣಗಳನ್ನು ನಿಭಾಯಿಸಲಾಗದೆ ಬಾಯಿಗೆ ಬಂದದ್ದು ಮಾತಾಡುತ್ತಿದ್ದಾರೆ" ಎಂದು ಹೇಳಿದರು.
"ಬಿಜೆಪಿ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತದೆ, ಏಕಾಂಗಿಯಾಗಿಯೇ ಉಪ ಚುನಾವಣೆಯನ್ನು ಗೆಲ್ಲುತ್ತದೆ, ಮೂರೂವರೆ ವರ್ಷಗಳ ಕಾಲ ಬಿಜೆಪಿಯೇ ಆಡಳಿತ ಮಾಡುತ್ತದೆ. ಜೆಡಿಎಸ್ ನವರು ಯಾರೂ ನಮ್ಮ ಸಂಪರ್ಕದಲ್ಲಿಲ್ಲ. ಯಾವುದೇ ಶಾಸಕರು ಬಿಜೆಪಿಗೆ ಬರ್ಬೇಕಾದರೆ ಶಾಸಕಗಿರಿ ಬಿಡಬೇಕು. ಮೊದಲಿನಿಂದಲೂ ನಮ್ಮದು ಇದೇ ನಿಲುವು" ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭ ಡಿ.ಕೆ.ಶಿವಕುಮಾರ್ ಬಿಡುಗಡೆ ಕುರಿತೂ ಮಾತನಾಡಿ, "ಡಿ.ಕೆ.ಶಿವಕುಮಾರ್ ಬಿಡುಗಡೆ ಉಪ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಡಿ.ಕೆ.ಶಿವಕುಮಾರ್ ಇದ್ದಾಗಲೇ ವಿಧಾನಸಭಾ ಚುನಾವಣೆ ಆಗಿದೆ. ಡಿಕೆಶಿ ಮಂತ್ರಿಯಾಗಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಡಿಕೆಶಿ ಪ್ರಭಾವ ಇದ್ದರೂ 104 ಸ್ಥಾನ ಗೆದ್ದಿದ್ದೆವು. ಕನಕಪುರದಲ್ಲಿ ಡಿಕೆಶಿ ಪ್ರಭಾವ ಇರಬಹುದು, ಕನಕಪುರ ಗೆಲ್ಲೋದು ನಮಗೆ ಇವತ್ತಿಗೂ ಕಷ್ಟ ಒಪ್ಕೊತೇವೆ, ಆದರೆ ರಾಜ್ಯದಲ್ಲಿ ಎಲ್ಲೂ ಡಿಕೆಶಿ ಪ್ರಭಾವ ಇಲ್ಲ. ರಾಜ್ಯದ ಜನಕ್ಕೆ ಡಿಕೆಶಿ ಏನು ಅನ್ನೋದು ಅರ್ಥವಾಗಿದೆ" ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ಮತ್ತೆ ಸಿದ್ದರಾಮಯ್ಯ ಮಾತಿಗೆ ಹೊರಳಿದ ಅವರು, "ಸಿದ್ದರಾಮಯ್ಯ ಐದು ವರ್ಷ ಹೇಗೆ ನಡೆದುಕೊಂಡರು ಅನ್ನುವುದನ್ನು ಜನ ನೋಡಿದ್ದಾರೆ. ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಜಾತಿಗಳನ್ನು ಒಡೆದು ಅದರ ಲಾಭ ಪಡೆಯುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಕುತಂತ್ರ, ಷಡ್ಯಂತ್ರ ರಾಜ್ಯದ ಜನತೆಗೆ ಅರ್ಥವಾಗಿದೆ. ಈ ಬಾರಿ ಯಾರೂ ಸಿದ್ದರಾಮಯ್ಯ ಕುತಂತ್ರಕ್ಕೆ ಬಲಿಯಾಗಲ್ಲ" ಎಂದಿದ್ದಾರೆ.












Click it and Unblock the Notifications