ಪೊಲೀಸರು ಒಪ್ಪಿಗೆ ನೀಡಿದರೆ ಮಾತ್ರ ಜು 31ಕ್ಕೆ ಶೀರೂರು ಶ್ರೀ ಆರಾಧನೆ
ಉಡುಪಿ, ಜುಲೈ 28: ಶೀರೂರು ಶ್ರೀ ವೃಂದಾವನಸ್ಥರಾದ ಹಿನ್ನೆಲೆಯಲ್ಲಿ ಆ ಮಠದ ಮುಂದಿನ ಜವಾಬ್ದಾರಿ ದ್ವಂದ್ವ ಮಠವಾದ ಸೋದೆ ಶ್ರೀಗಳಿಗಿದೆ. ಈಗಾಗಲೇ ಶೀರೂರು ಲಕ್ಷ್ಮೀವರ ಶ್ರೀಗಳು ಇಹಲೋಕ ತ್ಯಜಿಸಿ 9 ದಿನಗಳು ಕಳೆದಿದ್ದು, ಶೀರೂರು ಮಠದ ಮುಂದಿನ ಯತಿಗಳನ್ನು ಆಯ್ಕೆಮಾಡಬೇಕಾದ ಜವಾಬ್ದಾರಿ ಕೂಡ ಸೋದೆ ಶ್ರೀಗಳದ್ದಾಗಿದೆ.
ಯೋಗ್ಯ ವಟು ಸಿಕ್ಕ ಕೂಡಲೇ ಶಿಷ್ಯ ಸ್ವೀಕಾರ ಮಾಡಲಾಗುವುದು ಎಂದು ಸೋದೆ ಶ್ರೀಗಳು ಮಾದ್ಯಮಗಳ ಮುಂದೆ ತಿಳಿಸಿದ್ದಾರೆ. ಶಿಷ್ಯ ಸ್ವೀಕಾರಕ್ಕೆ ನಿಗದಿತ ಸಮಯ ಎಂಬುದು ಇಲ್ಲ. 18 ವರ್ಷ ಮೇಲ್ಪಟ್ಟ ವಟುವಿಗೆ ದೀಕ್ಷೆ ಕೊಡಲಾಗುವುದು. ಸಂಸ್ಕೃತ ಪಾಂಡಿತ್ಯ ಹಾಗೂ ಶಿಕ್ಷಣ ಇದ್ದ ವಟುವನ್ನೇ ಆಯ್ಕೆ ಮಾಡುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.
ಶೀರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ. ಹಾಗಾಗಿ ಪೊಲೀಸರು ಅವಕಾಶ ಕೊಟ್ಟರೆ ಜುಲೈ 31ಕ್ಕೆ ಶ್ರೀಗಳ ಆರಾಧನೆ ಮಾಡಲಾಗುವುದು. ಶೀರೂರು ಮಠಕ್ಕೆ ಬಾಲ ಸನ್ಯಾಸಿಯ ನೇಮಕವಿಲ್ಲ. ಸೂಕ್ತ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದೇವೆ. ವಟು ಸಿಕ್ಕ ಕೂಡಲೇ ಪಟ್ಟಾಭಿಷೇಕ ಮಾಡಲಾಗುವುದು ಎಂದಿದ್ದಾರೆ.

ಇನ್ನು ಶೀರೂರು ಮಠದ ಆಸ್ತಿ ಬಗ್ಗೆ ಮಾತಮಾಡಿದ ಅವರು, ಮಠದ ಆಸ್ತಿ ವಿವರ ನನಗೆ ತಿಳಿದಿಲ್ಲ. ಮಠವನ್ನು ಪೋಲಿಸರು ಬಿಟ್ಟುಕೊಟ್ಟ ನಂತರ ಲೆಕ್ಕಾಚಾರ ಮಾಡಲಾಗುವುದು. 5 ಜನರ ಸಮಿತಿಯನ್ನು ಒಂದೆರಡು ದಿನದಲ್ಲಿ ರಚಿಸಲಾಗುವುದು. ಶೀರೂರು ಮಠ ಅನಾಥವಲ್ಲ. ಉಡುಪಿಯ ಏಳೂ ಮಠಾಧೀಶರ ಸಹಕಾರವಿದೆ ಎಂದು ಹೇಳಿದ್ದಾರೆ.
ಶೀರೂರು ಮಠದಲ್ಲಿ ಎಷ್ಟು ಚಿನ್ನ ಇದೆ ಗೊತ್ತಿಲ್ಲ. ಚರ, ಸ್ಥಿರಾಸ್ತಿ ಎಷ್ಟಿದೆ ಎಂಬ ಮಾಹಿತಿಯೂ ನನಗಿಲ್ಲ. ನಾನೂ ಶೀರೂರು ಮಠಕ್ಕೆ ಹೊಸಬ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪರಾಮರ್ಶೆ ಮಾಡುತ್ತೇನೆ ಎಂದು ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದರು.












Click it and Unblock the Notifications