ಹಿಂಸೆ ಮಾಡದೆ ಗೋವುಗಳನ್ನು ಕೊಲ್ಲಿ ಅಂದಿದ್ರು ಕಾರಂತರು : ಪ್ರಕಾಶ್ ರೈ
ಮಂಗಳೂರು, ಅಕ್ಟೋಬರ್ 10: ಭಾರೀ ವಿರೋಧದ ನಡುವೆ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ'ಯನ್ನು ಖ್ಯಾತ ನಟ ಪ್ರಕಾಶ್ ರೈ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟಾದಲ್ಲಿರುವ ಕಾರಂತ ಥೀಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ 13ನೇ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಖ್ಯಾತ ನಟ ಪ್ರಕಾಶ್ ರೈ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ರೈ, "ಗೋಮಾಂಸ ತಿನ್ನುವವರು ತಿನ್ನುತ್ತಾರೆ ಅಡ್ಡಿ ಮಾಡಬೇಡಿ. ಹಿಂಸೆ ಮಾಡದೆ ಕೊಲ್ಲಿ ಅಂದಿದ್ರು ಕಾರಂತರು," ಎಂದು ಹೇಳಿದರು.
"ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸುವುದು ಸಂತೋಷದ ವಿಷಯ. ಇಲ್ಲಿ ಯಾರು ಗೆದ್ದರು , ಯಾರು ಸೋತರು ಎಂಬುದಕ್ಕಿಂತ ಪ್ರಶಸ್ತಿ ಪ್ರದಾನ ಆಗಬೇಕಿತ್ತು. ಅದು ಆಗಿದೆ. ಪ್ರಶಸ್ತಿಗೆ ನಾನು ಅರ್ಹನಾಗಿದ್ದೆ," ಎಂದು ಹೇಳಿದರು. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಸೋತ ಕ್ಷಣ ಎಂದು ಅವರು ಅಭಿಪ್ರಾಯಪಟ್ಟರು.

'ನಾನು ಒಂಟಿಯಲ್ಲ'
'ಕರ್ನಾಟಕದಲ್ಲಿ ನನ್ನ ಹಾಗೆ ಮಾತನಾಡೋರು ಒಂಟಿಯಲ್ಲ. ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ. ವೈಯಕ್ತಿಕ ವಿಚಾರ ಹೇಳಿ ಹಣಿಯುವ ಕೃತ್ಯ ಇನ್ನು ಕನ್ನಡ ನಾಡಿನಲ್ಲಿ ನಡೆಯುವುದಿಲ್ಲ," ಎಂದು ಅವರು ಹೇಳಿದರು.

ಅಭಿಪ್ರಾಯ ಸ್ವಾತಂತ್ರ್ಯ ಬೇಕು
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಿಜೆಪಿ ಬಹಿಷ್ಕರಿಸಿರುವುದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ ಅವರು, ಅಭಿಪ್ರಾಯ ಸ್ವಾತಂತ್ರ್ಯ ಬೇಕು ಅನ್ನೋದಷ್ಟೇ ನನ್ನ ನಿಲುವು ಎಂದು ಸ್ಪಷ್ಟಪಡಿಸಿದರು.

ಪ್ರಶಸ್ತಿ ಸ್ವೀಕರಿಸುವುದೇ ಸಂತಸ
"ಈವರೆಗೆ ಬಹಳಷ್ಟು ಪ್ರಶಸ್ತಿಗಳು ಬಂದಿವೆ. ಆದರೆ ಕಾರಂತರ ಪ್ರಶಸ್ತಿ ಸ್ವೀಕರಿಸುವುದು ಸಂತೋಷ ತಂದಿದೆ. ಕಾರಂತರ ಬಗ್ಗೆ ಮಾತನಾಡುವುದೇ ಒಂದು ರೋಮಾಂಚನ. ಅವರು ಬರೆದ ಹಾಗೆ ಬದುಕಿದರು. ಬದುಕಿದ್ದನ್ನು ಬರೆದರು," ಎಂದು ಪ್ರಕಾಶ ರೈ ಅಭಿಪ್ರಾಯಪಟ್ಟರು.

'ಗೋಮಾಂಸ ತಿನ್ನಲು ಅಡ್ಡಿ ಮಾಡಬೇಡಿ'
"ಗೋಮಾಂಸ ತಿನ್ನುವವರು ತಿನ್ನುತ್ತಾರೆ ಅಡ್ಡಿ ಮಾಡಬೇಡಿ. ಹಿಂಸೆ ಮಾಡದೆ ಕೊಲ್ಲಿ ಅಂದಿದ್ರು ಕಾರಂತರು. ನೆಮ್ಮದಿಯ ಸಮಾಜ ನಿರ್ಮಾಣವಾಗಬೇಕು. ಭಯ ಇಲ್ಲದ ಸಮಾಜ ನಿರ್ಮಾಣ ಆಗಬೇಕು. ಮುಂದಿನ ತಲೆಮಾರಿಗೆ ವಾಕ್ ಸ್ವಾತಂತ್ರ್ಯ ಬೇಕು," ಎಂದು ಹೇಳಿದ ಅವರು 'ನಟನಾಗಿ ನನಗೆ ಮಾತನಾಡಲು ಯಾವುದೇ ಅಡ್ಡಿ ಇರಬಾರದು' ಎಂದು ಹೇಳಿದರು.

ಮನಃಸಾಕ್ಷಿ ತಡೆಯಲು ನೀವ್ಯಾರು?
ಮನಃಸಾಕ್ಷಿಯ ಹೇಳಿಕೆಯನ್ನು ತಡೆಯುವವರು ನೀವು ಯಾರು? ಎಂದು ಅವರು ಪರೋಕ್ಷವಾಗಿ ಬಿಜೆಪಿ ಹಾಗು ಸಂಘ ಪರಿವಾರದ ವಿರುದ್ಧ ಕಿಡಿಕಾರಿದರು. 'ತುಂಬಾ ವ್ಯವಸ್ಥಿತವಾಗಿ ಭಯ ಹುಟ್ಟಿಸುವ ಕೆಲಸ ಆಗುತ್ತಿದೆ,' ಎಂದು ಪ್ರಕಾಶ್ ರೈ ಇದೇ ವೇಳೆ ಅಸಮಧಾನ ವ್ಯಕ್ತಪಡಿದರು.












Click it and Unblock the Notifications