ಕಾಣೆಯಾದ ಮೀನುಗಾರರ ಕುಟುಂಬವನ್ನು ಭೇಟಿ ಮಾಡಲಿರುವ ಗೃಹ ಸಚಿವ
ಉಡುಪಿ, ಜನವರಿ 3: ಏಳು ಮಂದಿ ಮೀನುಗಾರರು ಡಿಸೆಂಬರ್ 13ರಂದು ಸುವರ್ಣ ತ್ರಿಭುಜ ದೋಣಿಯಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ಹೊರಟವರು ಅದಾದ ಮೂರು ದಿನ ಅಂದರೆ 16ನೇ ತಾರೀಕಿನ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಆ ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ದೋಣಿ ಮಾಲೀಕರಾದ ಚಂದ್ರಶೇಖರ್ ರ ಸಹೋದರ ನಿತ್ಯಾನಂದ ಅವರು ಡಿಸೆಂಬರ್ 22ರಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೋಣಿ ಮತ್ತು ಅದರಲ್ಲಿದ್ದ 7 ಮೀನುಗಾರರು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಉಡುಪಿಯ ಕರಾವಳಿ ಕಾವಲು ಪಡೆ ಪೊಲೀಸ್ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಭಾರತೀಯ ನೌಕಾದಳ, ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಲಾಗಿದೆ.
ಕರ್ನಾಟಕ ಕರಾವಳಿ ಪೊಲೀಸ್ ಪಡೆಯ ದೋಣಿಗಳು ಮತ್ತು ಕರಾವಳಿ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನು ಕಾಣೆಯಾದ ದೋಣಿ ಮತ್ತು ಮೀನುಗಾರರ ಹುಡುಕಾಟಕ್ಕಾಗಿ ನೇಮಿಸಲಾಗಿದೆ. ವಾಣಿಜ್ಯ ಹಡಗುಗಳ, ಸಾಗರ ಪೊಲೀಸ್ ದೋಣಿಗಳ ಸಹಯೋಗದೊಂದಿಗೆ ಭಾರತೀಯ ಕರಾವಳಿ ಪಡೆಯು ತನ್ನ ಹಡಗುಗಳು, ಹೋವರ್ ಕ್ರಾಫ್ಟ್ಸ್, ಡಾರ್ನಿಯರ್ ಏರ್ ಕ್ರಾಫ್ಟ್ ಮತ್ತು ಹೆಲಿಕಾಪ್ಟರುಗಳ ಮೂಲಕ ಜಲ ಮತ್ತು ವಾಯು ಮಾರ್ಗದಲ್ಲಿ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಭಾರತೀಯ ನೌಕಾದಳವು ಈ ಪತ್ತೆ ಕಾರ್ಯಕ್ಕೆ ತನ್ನ ಬೆಂಬಲವನ್ನು ನೀಡಿ, ಒಂದು ಹಡಗನ್ನು ಡಿಸೆಂಬರ್ 24ರಿಂದಲೇ ಪತ್ತೆ ಕಾರ್ಯಕ್ಕಾಗಿ ನಿಯೋಜಿಸಿದೆ. ಡಿಜಿ-ಐಜಿಪಿ (ಆಂತರಿಕ ಭದ್ರತೆ) ಅವರು ಕೇಂದ್ರ ಗೃಹ ಮಂತ್ರಾಲಯ ಇವರನ್ನು ಈ ವಿಷಯ ರಕ್ಷಣಾ ಸಚಿವಾಲಯದ ಗಮನಕ್ಕೆ ತಂದು ಭಾರತೀಯ ನೌಕಾದಳಕ್ಕೆ ಕಾಣೆಯಾಗಿರುವ ದೋಣಿ ಮತ್ತು ಮೀನುಗಾರರ ಹುಡುಕಾಟ ತೀವ್ರಗೊಳಿಸಲು ಸೂಚಿಸುವಂತೆ ಕೋರಿದ್ದಾರೆ.
ಈ ವಿಷಯವನ್ನು ಕೇಂದ್ರ ಗೃಹ ಮಂತಾಲಯವು ರಕ್ಷಣಾ ಸಚಿವಾಲಯದೊಂದಿಗೆ ಉನ್ನತ ಮಟ್ಟದಲ್ಲಿ ಕೈಗೆತ್ತಿಕೊಂಡಿದೆ. ಕಾಣೆಯಾದ ದೋಣಿ ಮತ್ತು ಮೀನುಗಾರರ ಪತ್ತೆ ಕಾರ್ಯ ಸತತವಾಗಿ ನಡೆಯುತ್ತಿದೆ. ಮೀನುಗಾರರ ಸಂಘದ ಸದಸ್ಯರು ಈ ಕಾರ್ಯದಲ್ಲಿ ಕರಾವಳಿ ಪೊಲೀಸ್ ಪಡೆಯೊಂದಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇತರೆ ದೋಣಿಗಳು/ ಮೀನುಗಾರರಿಂದ ದೊರೆಯುತ್ತಿರುವ ಮಾಹಿತಿಯನ್ನು ಪತ್ತೆ ಕಾರ್ಯದಲ್ಲಿ ಉಪಯೋಗಿಸಲಾಗುತ್ತಿದೆ.
ಆಂತರಿಕ ಭದ್ರತಾ ದಳದ ಐಜಿಪಿ ಮತ್ತು ಉಡುಪಿ ಜಿಲ್ಲೆ ಎಸ್.ಪಿ. ವೈಯಕ್ತಿಕವಾಗಿ ತಮ್ಮ ನೆರೆಹೊರೆಯ ರಾಜ್ಯಗಳಾದ ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಹೊಂದಿದ್ದು, ಪತ್ತೆ ಕಾರ್ಯಕ್ಕೆ ಸಹಕರಿಸುವಂತೆ ಕೋರಿದ್ದಾರೆ. ಈ ಪತ್ತೆ ಕಾರ್ಯದ ಮೇಲ್ವಿಚಾರಣೆಯನ್ನು ಕರ್ನಾಟಕ ಕರಾವಳಿ ಪೊಲೀಸ್ ಪಡೆಯ ಕೇಂದ್ರಸ್ಥಾನದಲ್ಲಿ ನಿರಂತರವಾಗಿ ನಿರ್ವಹಿಸಲಾಗುತ್ತಿದೆ.
ಗೃಹ ಸಚಿವರು ಜನವರಿ 5ರಂದು ಉಡುಪಿಗೆ ಭೇಟಿ ನೀಡಿ, ಪತ್ತೆ ಕಾರ್ಯದ ಮೇಲ್ವಿಚಾರಣೆಯ ಪರಿಶೀಲನೆ ನಡೆಸಲಿದ್ದಾರೆ ಮತ್ತು ಕಾಣೆಯಾಗಿರುವ ಮೀನುಗಾರರ ಕುಟುಂಬದವರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ. ಇದೇ ವಿಷಯವಾಗಿ ಮೀನುಗಾರಿಕೆ ಸಚಿವರು ಸಹ ಉಡುಪಿಗೆ ಜನವರಿ 8ರಂದು ಭೇಟಿ ನೀಡಲಿದ್ದಾರೆ.












Click it and Unblock the Notifications