ಹಿಜಾಬ್ ವಿವಾದ; ಹೈಕೋರ್ಟ್ ಆದೇಶ ನಮಗೆ ತೃಪ್ತಿ ತಂದಿಲ್ಲ; ಸಿಎಫ್ಐ
ಉಡುಪಿ, ಫೆಬ್ರವರಿ 10; ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಹಿಜಾಬ್ ವಿವಾದಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ಸಣ್ಣ ಬ್ರೇಕ್ ನೀಡಿದೆ. ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಮೌಖಿಕ ಆದೇಶ ನೀಡಿದೆ, ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರದಿಂದ ಫ್ರೌಢ ಶಾಲೆಗಳು ಕಾರ್ಯಾರಂಭ ಮಾಡಲು ಸೂಚನೆ ನೀಡಿದೆ. ಹಂತ ಹಂತವಾಗಿ ಕಾಲೇಜುಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶಕ್ಕೆ ಸರ್ವರೂ ಸಮ್ಮತಿ ಸೂಚಿಸಿದರೆ ಸಿಎಫ್ಐ ಮಾತ್ರ ಹೈಕೋರ್ಟ್ ಆದೇಶ ನಮಗೆ ತೃಪ್ತಿ ತಂದಿಲ್ಲ ಎಂದು ಹೇಳಿದೆ.
ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅತಾವುಲ್ಲಾ ಪೂಂಜಾಲಕಟ್ಟೆ, "ಹೈಕೋರ್ಟ್ನ ಮಧ್ಯಂತರ ಆದೇಶ ನಮಗೆ ತೃಪ್ತಿ ತಂದಿಲ್ಲ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ" ಎಂದು ಹೇಳಿದ್ದಾರೆ.

"ಆದರೆ ರಾಜ್ಯ ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಸೋಮವಾರದ ನಂತರದ ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಪರವಾದ ತೀರ್ಪು ಬರಬಹುದು. ನಮ್ಮ ವಿರುದ್ಧ ತೀರ್ಪು ಬಂದರೆ ಹೋರಾಟವನ್ನು ಮುಂದುವರಿಸುತ್ತೇವೆ" ಎಂದರು.
"ಇನ್ನು ಸರ್ಕಾರ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತದೆ ಅಂತಾ ಆದೇಶ ನೀಡಿದೆ. ಸೋಮವಾರದಿಂದ ಶಾಲಾ-ಕಾಲೇಜಿಗಳಿಗೆ ತೆರಳುವ ನಿರ್ಧಾರವನ್ನು ವಿದ್ಯಾರ್ಥಿನಿಯರ ಇಚ್ಛೆಗೆ ಬಿಡುತ್ತೇವೆ. ನಾವು ಯಾವುದೇ ಸಲಹೆಗಳನ್ನು ಯಾರಿಗೂ ನೀಡುವುದಿಲ್ಲ. ಪೋಷಕರ ಮತ್ತು ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯದಂತೆ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಬಹುದು" ಎಂದು ಸ್ಪಷ್ಟಪಡಿಸಿದರು.
"ನಾವು ಯಾರಿಗೂ ಯಾವುದೇ ಸೂಚನೆಗಳನ್ನು ಕೊಡಲು ಹೋಗುವುದಿಲ್ಲ. ನಾವು ಕಾನೂನು ರೀತಿಯ ಹೋರಾಟ ಮತ್ತು ಸಲಹೆಗಳನ್ನು ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕೊಟ್ಟಿದ್ದೇವೆ. ಮುಂದೆಯೂ ಸಹಕಾರ ನೀಡಲಿದ್ದೇವೆ" ಅಂತಾ ಅತಾವುಲ್ಲಾ ಪೂಂಜಾಲಕಟ್ಟೆ ಸ್ಪಷ್ಟಪಡಿಸಿದರು.
ಇನ್ನು ಹಿಂದೂ ಜಾಗರಣ ವೇದಿಕೆ ಕೂಡಾ ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಮಾತನಾಡಿದ ಉಡುಪಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಕಾಶ್ ಕುಕ್ಕೆಹಳ್ಳಿ, "ನ್ಯಾಯಾಲಯದ ಮಧ್ಯಂತರ ಆದೇಶ ಸ್ವಾಗತಿಸುತ್ತೇನೆ. ಕೇಸರಿ ಸಮವಸ್ತ್ರದ ಭಾಗ ಅಲ್ಲ. ಪ್ರತಿಭಟನೆ ರೂಪದಲ್ಲಿ ಕೇಸರಿ ಶಾಲು ಹಾಕಲಾಗಿತ್ತು. ರಾಜ್ಯದ ಕಾಲೇಜುಗಳಲ್ಲಿ ಸಮಾನ ವಸ್ತ್ರಸಂಹಿತೆ ಬರಬೇಕು. ಕೇಸರಿ ಹಾಗೂ ಹಿಜಾಬ್ಗೆ ಅವಕಾಶ ನೀಡಬಾರದು. ಹೈಕೋರ್ಟ್ ಏನೇ ಆದೇಶ ನೀಡಿದರೂ ಸ್ವಾಗತಿಸುತ್ತೇವೆ" ಎಂದರು.
"ದೇಶ ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟು ನ್ಯಾಯಾಲಯ ಸರಿಯಾದ ತೀರ್ಪು ನೀಡುತ್ತದೆ. ಎರಡು ವರ್ಷದಿಂದ ಕೊರೋನಾ ಹಾವಳಿಯಿಂದ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಿದೆ. ಈ ಹಿಜಾಬ್ ವಿವಾದ ಲಕ್ಷಾಂತರ ವಿದ್ಯಾರ್ಥಿಗಳನ್ನ ಅಸ್ಥಿರತೆಗೆ ಒಳಪಡಿಸಬಾರದು. ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾರ್ಜನೆಗೆ ಒತ್ತು ಕೊಡಬೇಕು. ನ್ಯಾಯಾಲಯದ ಆದೇಶ ಮೀರಿದರೆ ಕಾನೂನು ಕ್ರಮ ಕೈಗೊಳ್ಳಬೇಕು. ಮುಲಾಜಿಲ್ಲದೆ ಟಿಸಿ ಕೊಟ್ಟು ಕಳುಹಿಸಬೇಕು. ಎಬಿವಿಪಿ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಮತೀಯ ಸಂಘಟನೆಗಳಿಗೆ ಇದು ಸಹಿಸಲು ಆಗಿಲ್ಲ. ಎಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ರಾಷ್ಟ್ರೀಯ ವಿಚಾರಧಾರೆಗೆ ಒಪ್ಪಿ ಕೈತಪ್ಪಿ ಹೋಗುತ್ತಾರೆ ಅನ್ನೋ ಭಯ ಕಾಡಿದೆ. ಅದಕ್ಕಾಗಿ ಈ ಹಿಜಾಬ್ ಕುತಂತ್ರ ಮಾಡಲಾಗಿದೆ" ಎಂದು ಆರೋಪಿಸಿದರು.
"ಹಿಜಾಬ್ ಪ್ರತಿಭಟನಾಧಾರಿ ವಿದ್ಯಾರ್ಥಿನಿಯರನ್ನು ದೇಶವಿರೋಧಿ ಚಟುವಟಿಕೆಗೆ ಬ್ರೈನ್ ವಾಶ್ ಮಾಡಲಾಗಿದೆ. ಮುಸ್ಲಿಂ ಯುವಕರ ನಿಷ್ಠೆ ಭಾರತಕ್ಕೆ ಅಲ್ಲ, ಸೈನಿಕರು ಹುತಾತ್ಮರಾದಾಗ ಸಂಭ್ರಮಿಸಿದ್ದಾರೆ" ಎಂದು ಪ್ರಕಾಶ್ ಕುಕ್ಕೆಹಳ್ಳಿ ದೂರಿದರು.












Click it and Unblock the Notifications