ಆತ ಗಂಡನಂತೆ ಎಲ್ಲಿದ್ದ ಎಂದು ಕೆಂಡಕಾರಿದ ಹೆಂಡತಿ!
ಉಡುಪಿ, ಆಗಸ್ಟ್ 12 : "ಅವನೊಬ್ಬ ತಂದೆ ಆಗಿದ್ದನೆ? ಅಮ್ಮನ ಶೀಲವನ್ನು ಶಂಕಿಸಿ ಮಾತನಾಡುತ್ತಿದ್ದ" ಇದು ತಂದೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಮಗ ನವನೀತ್ ಆಡಿದ ಮಾತುಗಳು.
"ಆತ ಗಂಡನ ತರಹ ಎಲ್ಲಿದ್ದ" ಎಂಬುದು ಪತಿಯನ್ನು ಅಮಾನುಷವಾಗಿ ಹತ್ಯೆಗೈದು, ಪೆಟ್ರೋಲ್ ಸುರಿದು ಹೋಮಕುಂಡದ ಬಳಿ ಸುಟ್ಟುಹಾಕಿದ ಆರೋಪ ಹೊತ್ತು ಬಂಧನಕ್ಕೊಳಗಾಗಿರುವ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಅವರ ಆಕ್ರೋಶದ ನುಡಿಗಳು.
ತಾಯಿ - ಮಗ ಸೇರಿ ಈ ಪರಿಯಾಗಿ ಶ್ರೀಮಂತ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಕೊಲ್ಲಲು ಕಾರಣ ಏನಿರಬಹುದು ಎಂದು ತಿಳಿದುಕೊಳ್ಳಲು, ಪೊಲೀಸರು ತಾಯಿ ಮಗನನ್ನು ಪ್ರಶ್ನಿಸಿದಾಗ ಸಿಕ್ಕ ಆಘಾತಕಾರಿ ಉತ್ತರಗಳು.
ತಾಯಿಯ ಶೀಲವನ್ನು ಶಂಕಿಸಿದರೆ ಮಗನಿಗೆ ತಡೆಯಲಾಗದ ಕೋಪ ಬರುವುದು ಸಹಜ. ಆದರೆ, ಅಪ್ಪನೇ ತಾಯಿಯ ಶೀಲವನ್ನು ಶಂಕಿಸಿದ್ದರಿಂದ ಅದನ್ನು ಅರಗಿಸಿಕೊಳ್ಳಲು ನವನೀತ್ಗೆ ಸಾಧ್ಯವಾಗಿರಲಿಲ್ಲ. ಜತೆಗೆ ಭಾಸ್ಕರ್ ಶೆಟ್ಟಿ ಅವರು ಪದೇ ಪದೇ ಇದೇ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದ ಕಾರಣ ರೋಸಿ ಹೋಗಿದ್ದ ಆತನಿಗೆ ತಂದೆಯ ಮೇಲೆ ಅಗಾಧ ದ್ವೇಷ ಬೆಳೆದಿತ್ತು. ಪತ್ನಿಗೂ ಪತಿಯ ಮೇಲೆ ಇನ್ನಿಲ್ಲದ ಕೋಪ ಇತ್ತು.
ತಾಯಿ ಮಗನಲ್ಲಿ ಅಪರಾಧಿ ಪ್ರಜ್ಞೆ ಮಾಯೆ
ಆಸ್ತಿ - ಹಣದ ಜತೆಗೆ ಸಾಂಸಾರಿಕ ಜೀವನದಲ್ಲಿ ಉಂಟಾಗಿದ್ದ ದೊಡ್ಡ ಕಂದಕವೂ ಆರೋಪಿಗಳು ಇಂತಹ ಕೃತ್ಯ ಮಾಡಲು ಕಾರಣವಾಗಿರಬಹುದು ಎಂಬುದು ಅವರ ಮಾತುಗಳಿಂದ ವೇದ್ಯವಾಗುತ್ತಿತ್ತು. ತಂದೆಯನ್ನು ಕೊಂದನಲ್ಲ ಎಂದು ಮಗನಿಗೆ, ಪತಿಯನ್ನು ಸಾಯಿಸಿ ಬಿಟ್ಟೇನಲ್ಲಾ ಎಂದು ಪತ್ನಿಗೆ ಸ್ವಲ್ಪವೂ ಅಪರಾಧಿ ಪ್ರಜ್ಞೆ ಕಾಡದಿರುವ ಬಗ್ಗೆಯೂ ಪೊಲೀಸರಿಗೆ ಆಶ್ಚರ್ಯವಾಗಿದೆ.
ಸಂಸಾರವೂ ಸುಗಮವಾಗಿರಲಿಲ್ಲ
ಭಾಸ್ಕರ್ ಶೆಟ್ಟಿಯವರು ವಿವಾಹದ ಕೆಲ ತಿಂಗಳುಗಳ ನಂತರ ರಾಜೇಶ್ವರಿಯನ್ನು ಸೌದಿ ಅರೇಬಿಯಾಕ್ಕೆ ಕರೆಸಿ ಕೊಂಡಿದ್ದರು. ಕುಟುಂಬ ಬಹಳ ವರ್ಷಗಳ ಕಾಲ ಅಲ್ಲಿಯೇ ನೆಲೆಸಿತ್ತು. ಆರು ವರ್ಷಗಳ ಹಿಂದೆಯೇ ರಾಜೇಶ್ವರಿ ಹಾಗೂ ನವನೀತ್ ಉಡುಪಿಗೆ ಬಂದು ನೆಲೆಸಿದ್ದರು. ಆದರೆ ಭಾಸ್ಕರ್ ಶೆಟ್ಟಿಯವರು ಮಾತ್ರ ಸೌದಿ ಅರೇಬಿಯಾದಲ್ಲಿಯೇ ಇದ್ದರು. ಆಗಾಗ್ಗೆ ಉಡುಪಿಗೆ ಬಂದು ಹೋಗುತ್ತಿದ್ದರು. ಸಂಸಾರವೂ ಸುಗಮವಾಗಿರಲಿಲ್ಲ.
ಆಧ್ಯಾತ್ಮದ ಪಾಠ ಹೇಳುತ್ತಿದ್ದ ನಿರಂಜನ
ನೋಡಲು ದಷ್ಟ - ಪುಷ್ಟನಾಗಿದ್ದರೂ ನವನೀತ್ ನಿದ್ರಾಹೀನತೆಯಿಂದ ಬಳಲುತ್ತಿದ್ದ. ಕೆಲವೊಮ್ಮೆ ಅನ್ಯಮನಸ್ಕನಾಗಿರುತ್ತಿದ್ದ, ಜ್ಯೋತಿಷಿ ಎಂದು ಹೇಳಿಕೊಳ್ಳುತಿದ್ದ ನಿರಂಜನ್ ಭಟ್ ಬಳಿ ಹೋದ ನಂತರ ಆತ ಸ್ವಲ್ಪ ಗೆಲುವಾಗಿದ್ದ. ನವನೀತ್ಗೆ ಆಧ್ಯಾತ್ಮದ ವಿಷಯಗಳನ್ನು ನಿರಂಜನ ಭಟ್ ಹೇಳುತ್ತಿದ್ದ ಎಂಬ ವಿಷಯ ವಿಚಾರಣೆಯ ವೇಳೆ ಗೊತ್ತಾಗಿದೆ.
ನವನೀತ್ಗೆ ಸ್ವಲ್ಪ ಬುದ್ಧಿ ಹೇಳಿ
"ಮಗ ಹಲ್ಲೆ ನಡೆಸಿದ್ದಾನೆ, ಆಸ್ತಿಯ ದಾಖಲೆ ಪತ್ರಗಳನ್ನು ಸುಡುವುದಾಗಿ ಬೆದರಿಸುತ್ತಿದ್ದಾನೆ. ಆತನಿಗೆ ಸ್ವಲ್ಪ ಬುದ್ದಿ ಹೇಳಿ" ಎಂದು ಭಾಸ್ಕರ್ ಶೆಟ್ಟಿ ಅವರು ಒಂದು ತಿಂಗಳ ಹಿಂದೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ನವನೀತ್ ನನ್ನು ಠಾಣೆಗೆ ಕರೆದ ಪೊಲೀಸರು, 'ಮುಂದೆ ಈ ರೀತಿ ಮಾಡುವುದಿಲ್ಲ' ಎಂದು ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಿದ್ದರು.
ರಾಘವೇಂದ್ರ ಬಂದಾಗ ಶವ ಇತ್ತು
ಕೊಲೆ ಮಾಡಿದ ನಂತರ ಶವವನ್ನು ನಂದಳಿಕೆಯ ಮನೆಯ ಪಕ್ಕದಲ್ಲಿರುವ ಹೋಮ ಮಾಡುವ ಆವರಣಕ್ಕೆ ಆರೋಪಿಗಳು ಸಾಗಿಸಿದ್ದರು. ಆ ವೇಳೆಗಾಗಲೇ ಸಂಜೆಯಾಗಿತ್ತು. ನಿರಂಜನ ಭಟ್ ಅವರ ತಂದೆ - ತಾಯಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಬಿಟ್ಟು ಬರಲು ಹೋಗಿದ್ದ ರಾಘವೇಂದ್ರ ಸಂಜೆ ಮನೆಗೆ ಬಂದಾಗ ಆತನಿಗೆ ಕೃತ್ಯದ ಬಗ್ಗೆ ಗೊತ್ತಾಗಿತ್ತು. ಆ ನಂತರ ರಾಜೇಶ್ವರಿ ಹಾಗೂ ಮಗ ನವನೀತ್ ಉಡುಪಿಗೆ ವಾಪಸ್ ಹೊರಟಾಗ ರಾಘವೇಂದ್ರ ಹಾಗೂ ನಿರಂಜನ ಅವರೂ ಕಾರಿನಲ್ಲಿ ನಗರಕೆ ಬಂದಿದ್ದರು.
ಕೊಂಬು ಊದುವ ಕೆಲಸ ರಾಘವೇಂದ್ರನದು
ಅಮ್ಮ- ಮಗನನ್ನು ಬಿಟ್ಟ ನಂತರ ಅವರು ಮತ್ತೆ ನಂದಳಿಕೆಗೆ ಹೋಗಿದ್ದರು. ಆ ನಂತರವೇ ಶವ ಸುಡಲಾಗಿತ್ತು. ಕಾರು ಚಾಲಕನಾಗಿ ಹಾಗೂ ಹೋಮದ ಸಮಯದಲ್ಲಿ ಕೊಂಬು ಊದುವ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೃತ್ಯದ ನಂತರ ನಿರಂಜನ ಭಟ್ ನನ್ನು ಬೇರೆ ಊರಿಗೆ ಕಾರಿನಲ್ಲಿ ಬಿಟ್ಟು ಬಂದಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.